
ಡೆಲ್ಲಿ ಮಂಜು
ನೀಮುವಿನಲ್ಲಿ ನಮೋ..!
ಸಮುದ್ರಮಟ್ಟದಿಂದ 11 ಸಾವಿರಗಳ ಅಡಿಗಳ ಮೇಲೆ ನೀಮುವಿನ ಬೇಸ್ ಕ್ಯಾಂಪ್ ನಲ್ಲಿ ಭಾರತ್ ಮಾತಾಕಿ ಜೈ.. ಭಾರತ್ ಮಾತಾಕಿ ಜೈ...ಅಂಥ ಬೆಳಂಬೆಳಗ್ಗೆ ಜೈ ಘೋಷಣೆಗಳು ಮೊಳಗಿದ್ದು ಏಷ್ಯಾ ಖಂಡದಲ್ಲೇ ಸಂಚಲನ ಮೂಡಿಸಿದೆ.
ಚೀನಾದ ಲಡಾಯಿಯಲ್ಲಿ ಹುತಾತ್ಮರಾದವರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಅಂಥ
ಹೇಳಿದ ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಲೇಹ -ಲಡಕ್ ಸೇನಾ ಬೇಸ್ ಕ್ಯಾಂಪ್ ನಲ್ಲಿ ಕಾಣಿಸಿಕೊಂಡು ಒಂದು ಕ್ಷಣ ಇಡೀ ವಿಶ್ವದ ಕಣ್ಣು ಭಾರತದ ಕಡೆ ನೋಡುವಂತಾಯ್ತು.
200 ಕಿಲೋಮೀಟರ್ ದೂರದಲ್ಲಿ ನಿಂತು..
ಜಂಸ್ಕಾರ್ ಪರ್ವತ ಶ್ರೇಣಿಯ ಸಿಂಧೂ ನದಿಯ ದಡದಲ್ಲಿನ ದುರ್ಗಮವಾದ ಲಡಾಕ್ ಸಮೀಪದ ನೀಮು ಸೇನಾ ಬೇಸ್ ಕ್ಯಾಂಪ್ ನಲ್ಲಿ ನಿಂತು, ಪಕ್ಕದಲ್ಲೇ ಇರುವ ಚೀನಾಕ್ಕೆ ಕೇಳುವಂತೆ ಪ್ರಧಾನಿ ಎಚ್ಚರಿಸಿದ್ದು, ಸುಮಾರು 27 ನಿಮಿಷಗಳ ಕಾಲ ಭಾಷಣ ಮಾಡುವ ಮೂಲಕ ಸೈನಿಕರನ್ನು ಹುರಿದುಂಬಿಸಿದ್ರು.
ಲಡಾಖ್ ಗಡಿಯಲ್ಲಿ ಮೋದಿ ಅಬ್ಬರ, ಭಾರತದ ವೈರಿಗಳಿಗೆ ಚಳಿಜ್ವರ
ಗ್ಯಾಲ್ವಾನ್ ನದಿಯ ದಡದಲ್ಲಿ ಭಾರತೀಯ ಯೋಧರು ನಡೆಸಿದ ಹೋರಾಟ ಸ್ಮರಿಸಿದ್ರು. ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಕೂಡ ಆರ್ಪಿಸಿದರು. ಸೈನಿಕರ ಹೋರಾಟ 130 ಕೋಟಿ ಭಾರತೀಯರು ನಿಶ್ಚಿಂತೆಯಿಂದ ಇರುವಂತೆ ಮಾಡಿದೆ ಎನ್ನುವ ಮೂಲಕ ಸೈನಿಕರನ್ನು ಉರಿದುಂಬಿಸಿದ್ರು. ಇದೇ ವೇಳೆ ಭಾರತ ಮಾತೆ, ಭಾರತದ ಗಡಿಗಳನ್ನು ಕಾಯುತ್ತಿರುವ ಯೋಧರಿಗೆ ಜನ್ಮ ನೀಡಿದ ವೀರಮಾತೆಯರಿಗೆ ನಮಿಸಿದ್ರು. ಸಂಘರ್ಷದಲ್ಲಿ ಗಾಯಗೊಂಡಿರುವ ವೀರಯೋಧರ ಯೋಗಕ್ಷೇಮ ವಿಚಾರಿಸಿದ್ರು.
ಇದು ನಾಯಕತ್ವದ ಎಚ್ಚರಿಕೆನಾ?
ಸಾಮಾನ್ಯಕ್ಕೆ ದೇಶಗಳ ನಡುವೆ ಸಂಘರ್ಷ ಉಂಟಾದಾಗ ಮೂರ್ನಾಲ್ಕು ರೀತಿಯ ಪ್ರಕ್ರಿಯೆಗಳು ನಡೆಯುತ್ತವೆ. ಮೊದಲು ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ ಸುಮಾರು ನಾಲ್ಕೈದು ಹಂತಗಳಲ್ಲಿ ಅಂದರೆ ಮೇಜರ್ ಜನರಲ್ ಅಧಿಕಾರಿಗಳ ಮಟ್ಟದ ತನಕ ಎರಡು ದೇಶಗಳ ನಡುವೆ ಮಾತುಕತೆ ನಡೆಯುತ್ತೆ. ಇದರ ಜೊತೆಗೆ ವಿದೇಶಾಂಗ ಇಲಾಖೆಯ ಮಟ್ಟದಲ್ಲಿ ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆ ನಡೆಸ್ತಾರೆ. ಕೊನೆಗೆ ಆ ರಾಷ್ಟ್ರ ಗಳ ಮುಖ್ಯಸ್ಥರು ಮಾತುಕತೆ ನಡೆಸುತ್ತಾರೆ.
ಇಷ್ಟರ ನಡುವೆ ಎರಡು ರಾಷ್ಟ್ರ ಗಳು ಒಪ್ಪಿದ್ರೆ ಎರಡು ರಾಷ್ಟ್ರಗಳ ಖಾಯಂ ಪ್ರತಿನಿಧಿಗಳು ಸಮಸ್ಯೆ ಬಂದಾಗ ಮಾತುಕತೆ ನಡೆಸ್ತಾರೆ. ಚೀನಾ ವಿಷಯದಲ್ಲಿ ಇವೆಲ್ಲಾ ಹಂತಗಳು ದಾಟಿವೆ ಜೊತೆಗೆ ಇವೆಲ್ಲಾ ಹಂತಗಳಲ್ಲಿ ಮಾತುಕತೆಗಳು ನಡೆದಿವೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇನ್ನು ಮಾತುಕತೆಗಳು ನಡೆಯುತ್ತಿವೆ ಕೂಡ.
ಇಷ್ಟರ ನಡುವೆ ಸೇನೆಯ ಬೇಸ್ ಕ್ಯಾಂಪ್ ಪ್ರಧಾನಿ ಭೇಟಿ ಕೊಟ್ಟಿದ್ದು ಚೀನಾ ಜೊತೆ ಪಕ್ಕದ ಪಾಕಿಸ್ತಾನಕ್ಕೂ ಕೂಡ ಎಚ್ಚರಿಸಿದಂತೆ ಆಗಿದೆ.
ಸಂಘರ್ಷ ಹಾದಿಯನ್ನು ಮೆತ್ತಗೆ ಮಾಡಲು ಈಗಾಗಲೇ 59 ಆಪ್ ಗಳ ಬ್ಯಾನ್, ಹೆದ್ದಾರಿ ಯೋಜನೆಗಳ ಟೆಂಡರ್ ರದ್ದು, ವಿದ್ಯುತ್ ಕ್ಷೇತ್ರದಲ್ಲಿ ಉಪಕರಣಗಳು ಆಮದು ಮಾಡದಿರಲು ನಿರ್ಧಾರ ಇಂಥ ಹಲವು ಕ್ರಮಗಳು ನಡೆಸಿಯಾಗಿದೆ. ಆದರೆ ಸಂಘರ್ಷದ ಹೊತ್ತಲ್ಲಿ ಪ್ರಧಾನಿಯೊಬ್ಬರು ಸೇನಾ ಬೇಸ್ ಕ್ಯಾಂಪ್ ಗೆ ಭೇಟಿ ಕೊಟ್ಟಿರುವುದರ ಹಿಂದೆ ಮತ್ತಷ್ಟು ಸರ್ಜಿಕಲ್ ಸ್ಟ್ರೈಕ್ ಗಳು ಕಾದಿವೆ ಅನ್ನೋದು ಸೇನೆ ಬಲ್ಲವರು ಹೇಳುವ ಮಾತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ