ಕಾಂಗ್ರೆಸ್‌ನಿಂದಾಗಿ ಮೋದಿ ಬಲಶಾಲಿ: ದೀದಿ ಭವಿಷ್ಯ

By Kannadaprabha NewsFirst Published Oct 31, 2021, 7:34 AM IST
Highlights

* ಪ್ರಶಾಂತ್‌ ಕಿಶೋರ್‌ ಬೆನ್ನಲ್ಲೇ ಮತ್ತೊಂದು ಪ್ರಶಂಸೆ

* ಕಾಂಗ್ರೆಸ್‌ನಿಂದಾಗಿ ಮೋದಿ ಬಲಶಾಲಿ: ದೀದಿ ಭವಿಷ್ಯ 

* ಗೋವಾದಲ್ಲಿ ಪ.ಬಂಗಾಳ ಸಿಎಂ ಬಿರುಸಿನ ಪ್ರವಾಸ

ಪಣಜಿ(ಅ.31): ಇನ್ನೂ ಹಲವು ದಶಕಗಳ ಕಾಲ ದೇಶದಲ್ಲಿ ಬಿಜೆಪಿ ಭದ್ರವಾಗಿರುತ್ತದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಹೇಳಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತಷ್ಟುಪ್ರಬಲವಾಗುತ್ತಾರೆ ಎಂದು ಅವರ ರಾಜಕೀಯ ವಿರೋಧಿಯಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ಅವರು ಟೀಕಿಸಿದ್ದಾರೆ.

ಗೋವಾ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನಗಳ ಗೋವಾ ಪ್ರವಾಸ ಕೈಗೊಂಡಿದ್ದ ಅವರು ಕೊನೆಯ ದಿನವಾದ ಶನಿವಾರ ಸುದ್ದಿಗಾರರ ಜತೆ ಮಾತನಾಡಿದರು. ಕಾಂಗ್ರೆಸ್‌ ಪಕ್ಷ ರಾಜಕಾರಣದ ಬಗ್ಗೆ ಗಂಭೀರವಾಗಿಲ್ಲ. ಆ ಪುರಾತನ ಪಕ್ಷ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಮೋದಿ ಮತ್ತಷ್ಟುಬಲಶಾಲಿಯಾಗುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ಸಿಗೆ ಹಿಂದೆ ಅವಕಾಶ ಸಿಕ್ಕಿತ್ತು. ಬಿಜೆಪಿಯ ವಿರುದ್ಧ ಹೋರಾಡುವುದರ ಬದಲಿಗೆ ಆ ಪಕ್ಷ ನನ್ನ ರಾಜ್ಯದಲ್ಲಿ ನನ್ನ ವಿರುದ್ಧವೇ ಕಣಕ್ಕೆ ಇಳಿಯಿತು ಎಂದು ಹೇಳಿದರು. ಗೋವಾ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 40 ಕ್ಷೇತ್ರಗಳಲ್ಲೂ ತೃಣಮೂಲ ಕಾಂಗ್ರೆಸ್‌ ಸ್ಪರ್ಧಿಸಲಿದೆ ಎಂದು ಘೋಷಿಸಿದರು.

ಇದೇ ವೇಳೆ, ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಬೇಕು. ಒಕ್ಕೂಟ ವ್ಯವಸ್ಥೆ ಶಕ್ತಿಶಾಲಿಯಾಗಬೇಕು. ರಾಜ್ಯಗಳು ಬಲಿಷ್ಠವಾದರೆ ಕೇಂದ್ರ ಸರ್ಕಾರವೂ ಬಲಿಷ್ಠವಾಗಿರಲಿದೆ. ದೆಹಲಿಯ ದಾದಾಗಿರಿ ನಮಗೆ ಬೇಕಿಲ್ಲ. ಈವರೆಗೆ ಅನುಭವಿಸಿರುವುದೇ ಸಾಕು ಎಂದು ಹೇಳಿದರು.

ರಾಗಾಗೆ ಮೋದಿ ಶಕ್ತಿಯ ಅಂದಾಜಿಲ್ಲ, ದಶಕದವರೆಗೆ ಬಿಜೆಪಿ ದರ್ಬಾರ್: ಪ್ರಶಾಂತ್ ಕಿಶೋರ್!

ಭಾರತೀಯ ಜನತಾ ಪಕ್ಷ (BJP) ಮುಂದಿನ ದಶಕಗಳವರೆಗೆ (Decade) ಭಾರತದ ರಾಜಕೀಯದಲ್ಲಿ ಪ್ರಬಲ ಶಕ್ತಿಯಾಗಿ ಉಳಿಯಲಿದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದಾರೆ. ಬಿಜೆಪಿಯು ಹಲವಾರು ದಶಕಗಳ ಕಾಲ ಹೋರಾಡಬೇಕಾಗುತ್ತದೆ ಎಂದು ಕಿಶೋರ್ ನಂಬಿದ್ದಾರೆ. ಕಿಶೋರ್ ಮಾತನಾಡಿ, 40 ವರ್ಷಗಳ ಹಿಂದೆ ಕಾಂಗ್ರೆಸ್ (Congress) ಹೇಗೆ ಅಧಿಕಾರದ ಕೇಂದ್ರವಾಗಿತ್ತು, ಅದೇ ರೀತಿ ಬಿಜೆಪಿ ಸೋತರೂ ಗೆದ್ದರೂ ಅಧಿಕಾರದ ಕೇಂದ್ರದಲ್ಲಿ ಉಳಿಯುತ್ತದೆ. ಒಮ್ಮೆ ರಾಷ್ಟ್ರಮಟ್ಟದಲ್ಲಿ ಶೇ.30ರಷ್ಟು ಮತ ಪಡೆದರೆ ರಾಜಕೀಯ ಚಿತ್ರಣದಿಂದ ಅಷ್ಟು ಬೇಗ ದೂರ ಸರಿಯಲು ಆಗುವುದಿಲ್ಲ ಎಂದಿದ್ದಾರೆ.

ಗೋವಾ ಮ್ಯೂಸಿಯಂನಲ್ಲಿ (Goa Musium) ಮಾತನಾಡಿದ ಪ್ರಶಾಂತ್ ಕಿಶೋರ್ "ಜನರು ಮೋದಿ (ಪ್ರಧಾನಿ ನರೇಂದ್ರ ಮೋದಿ) ಮೇಲೆ ಕೋಪಗೊಂಡಿದ್ದಾರೆ ಮತ್ತು ಅವರನ್ನು ಅಧಿಕಾರದಿಂದ ಹೊರಹಾಕುತ್ತಾರೆ ಎಂಬ ಬಲೆಗೆ ಬೀಳಬೇಡಿ" ಎಂದಿದ್ದಾರೆ. ಜನರು ಮೋದಿಯನ್ನು ಅಧಿಕಾರದಿಂದ ಹೊರಹಾಕಬಹುದು ಆದರೆ ಬಿಜೆಪಿ ಎಲ್ಲಿಯೂ ಹೋಗುವುದಿಲ್ಲ. ಮುಂದಿನ ಹಲವಾರು ದಶಕಗಳವರೆಗೆ ನೀವು ಈ ಪಕ್ಷದ ವಿರುದ್ಧ ಹೋರಾಡಬೇಕಾಗುತ್ತದೆ ಎಂದಿದ್ದಾರೆ.

ಆಂಗ್ಲ ಪತ್ರಿಕೆ ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಕಿಶೋರ್ 'ಈ ವಿಷಯದಲ್ಲಿ ರಾಹುಲ್ ಗಾಂಧಿಯೂ ಸಮಸ್ಯೆ ಎದುರಿಸುತ್ತಿದ್ದಾರೆ. ಬಹುಶಃ ಕೆಲವೇ ಸಮಯದಲ್ಲಿ ಜನರು ಅವರನ್ನು (ನರೇಂದ್ರ ಮೋದಿ) ಅಧಿಕಾರದಿಂದ ತೆಗೆದುಹಾಕುತ್ತಾರೆ ಎಂದು ಅವರು ಭಾವಿಸುತ್ತಾರೆ ಆದರೆ ಅದು ಆಗುವುದಿಲ್ಲ, ಅವರನ್ನು ಎದುರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೆ ನೀವು ಮೋದಿ ಶಕ್ತಿ ಏನೆಂದು ಅರಿತುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ನೀವು ಅವರನ್ನು ಎದುರಿಸಲು ಮಾರ್ಗ ಕಂಡುಕೊಳ್ಳಲು ಸಾಧ್ಯವಿಲ್ಲ. ಅಧಿಕ ಮಂದಿ ಅವರ ಶಕ್ತಿ ಏನು ಎಂದು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳುತ್ತಿಲ್ಲ. ಅವರನ್ನು ಜನಪ್ರಿಯಗೊಳಿಸುತ್ತಿರುವುದೇನು ಎಂದು ಅರ್ಥ ಮಾಡಿಕೊಳ್ಳುವವರೆಗೆ ನೀವು ಅವರನ್ನು ಎದುರಿಸುವುದು ಅಸಾಧ್ಯ ಎಂದಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ತಪ್ಪು ತಿಳುವಳಿಕೆ!

'ನೀವು ಹೋಗಿ ಯಾವುದೇ ಕಾಂಗ್ರೆಸ್ ನಾಯಕ ಅಥವಾ ಯಾವುದೇ ಪ್ರಾದೇಶಿಕ ನಾಯಕರೊಂದಿಗೆ ಮಾತನಾಡಿ, ಅವರು 'ಇದು ಕೇವಲ ಸಮಯದ ವಿಷಯ' ಎಂದು ಹೇಳುತ್ತಾರೆ. ಜನರು ಮೋದಿ ಮೇಲೆ ಕೋಪಗೊಂಡಿದ್ದಾರೆ. ಆಡಳಿತ ವಿರೋಧಿ ಅಲೆ ಬರುತ್ತದೆ ಮತ್ತು ಜನರು ಅವರನ್ನು ಅಧಿಕಾರದಿಂದ ಹೊರಹಾಕುತ್ತಾರೆ ಎಂದು ಹೇಳುತ್ತಾರೆ, ಆದರೆ ಇದು ಅಸಾಧ್ಯ ಎಂಬುವುದು ನನ್ನ ವಾದ ಎಂದು ಪಿಕೆ ಹೇಳಿದ್ದಾರೆ. 

click me!