
ಭೀಮಾವರಂ(ಜು.05): ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕೆಲವೇ ವರ್ಷ, ಕೆಲವೇ ಪ್ರಾಂತ್ಯ ಅಥವಾ ಕೆಲವೇ ವ್ಯಕ್ತಿಗಳದ್ದಲ್ಲ. ಇದು ದೇಶದ ಮೂಲೆಮೂಲೆಯ ಬಲಿದಾನದ ಚರಿತ್ರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಆಂಧ್ರಪ್ರದೇಶದ ಭೀಮಾವರಂನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನಾಚರಣೆ ಅಂಗವಾಗಿ 30 ಅಡಿ ಕಂಚಿನ ಪ್ರತಿಮೆಯನ್ನು ಸೋಮವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
ಆಂಧ್ರಪ್ರದೇಶದಲ್ಲಿ ಜನಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಶಿರಬಾಗಿ ನಮಿಸುವೆ. ನಮ್ಮ ಸ್ವಾತಂತ್ರ್ಯ ವೀರರನ್ನು ನಾವು ಮರೆತಿಲ್ಲ. ಮರೆಯುವುದೂ ಇಲ್ಲ. ಅವರಿಂದ ಪ್ರೇರಣೆ ಪಡೆದು ಮುನ್ನಡೆಯುತ್ತೇವೆ ಎಂದರು. ಇದೇ ವೇಳೆ, ರಾಷ್ಟ್ರ ಧ್ವಜವನ್ನು ಸಿದ್ಧಪಡಿಸಿದ ಪಿಂಗಾಲಿ ವೆಂಕಯ್ಯ ಅವರನ್ನೂ ಸ್ಮರಿಸಿದರು.
ಅರಣ್ಯ ವೀರ ಎಂದೇ ಸ್ಥಳೀಯರಿಂದ ಕರೆಸಿಕೊಳ್ಳುತ್ತಿದ್ದ ಅಲ್ಲೂರಿ ಸೀತಾರಾಮ ರಾಜು ಅವರು ಬ್ರಿಟಿಷರ ವಿರುದ್ಧ ರಾಂಪಾ ಬಂಡಾಯ ನಡೆಸಿದ್ದರು. ಆ ಬಂಡಾಯಕ್ಕೆ ಈಗ 100 ವರ್ಷ. 1922ರಲ್ಲಿ ಈ ಬಂಡಾಯ ನಡೆದಿತ್ತು. ಇದೀಗ ಸೀತಾರಾಮ ರಾಜು ಅವರ 15 ಟನ್ ತೂಕದ ಪ್ರತಿಮೆಯನ್ನು 3 ಕೋಟಿ ರು. ವೆಚ್ಚದಲ್ಲಿ ಭೀಮಾವರಂನಲ್ಲಿ ಸ್ಥಾಪಿಸಲಾಗಿದೆ. ಕ್ಷತ್ರಿಯ ಸೇವಾ ಸಮಿತಿ ಇದನ್ನು ಸ್ಥಾಪಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ