* ಅಲ್ಲೂರಿ ಸೀತಾರಾಮ ರಾಜು ಕಂಚಿನ ಪ್ರತಿಮೆ ಅನಾವರಣ
* ಸ್ವಾತಂತ್ರ್ಯ ಹೋರಾಟ ಇತಿಹಾಸ ಕೆಲವೇ ವ್ಯಕ್ತಿಗಳದ್ದಲ್ಲ: ಮೋದಿ
ಭೀಮಾವರಂ(ಜು.05): ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕೆಲವೇ ವರ್ಷ, ಕೆಲವೇ ಪ್ರಾಂತ್ಯ ಅಥವಾ ಕೆಲವೇ ವ್ಯಕ್ತಿಗಳದ್ದಲ್ಲ. ಇದು ದೇಶದ ಮೂಲೆಮೂಲೆಯ ಬಲಿದಾನದ ಚರಿತ್ರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಆಂಧ್ರಪ್ರದೇಶದ ಭೀಮಾವರಂನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನಾಚರಣೆ ಅಂಗವಾಗಿ 30 ಅಡಿ ಕಂಚಿನ ಪ್ರತಿಮೆಯನ್ನು ಸೋಮವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
ಆಂಧ್ರಪ್ರದೇಶದಲ್ಲಿ ಜನಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಶಿರಬಾಗಿ ನಮಿಸುವೆ. ನಮ್ಮ ಸ್ವಾತಂತ್ರ್ಯ ವೀರರನ್ನು ನಾವು ಮರೆತಿಲ್ಲ. ಮರೆಯುವುದೂ ಇಲ್ಲ. ಅವರಿಂದ ಪ್ರೇರಣೆ ಪಡೆದು ಮುನ್ನಡೆಯುತ್ತೇವೆ ಎಂದರು. ಇದೇ ವೇಳೆ, ರಾಷ್ಟ್ರ ಧ್ವಜವನ್ನು ಸಿದ್ಧಪಡಿಸಿದ ಪಿಂಗಾಲಿ ವೆಂಕಯ್ಯ ಅವರನ್ನೂ ಸ್ಮರಿಸಿದರು.
ಅರಣ್ಯ ವೀರ ಎಂದೇ ಸ್ಥಳೀಯರಿಂದ ಕರೆಸಿಕೊಳ್ಳುತ್ತಿದ್ದ ಅಲ್ಲೂರಿ ಸೀತಾರಾಮ ರಾಜು ಅವರು ಬ್ರಿಟಿಷರ ವಿರುದ್ಧ ರಾಂಪಾ ಬಂಡಾಯ ನಡೆಸಿದ್ದರು. ಆ ಬಂಡಾಯಕ್ಕೆ ಈಗ 100 ವರ್ಷ. 1922ರಲ್ಲಿ ಈ ಬಂಡಾಯ ನಡೆದಿತ್ತು. ಇದೀಗ ಸೀತಾರಾಮ ರಾಜು ಅವರ 15 ಟನ್ ತೂಕದ ಪ್ರತಿಮೆಯನ್ನು 3 ಕೋಟಿ ರು. ವೆಚ್ಚದಲ್ಲಿ ಭೀಮಾವರಂನಲ್ಲಿ ಸ್ಥಾಪಿಸಲಾಗಿದೆ. ಕ್ಷತ್ರಿಯ ಸೇವಾ ಸಮಿತಿ ಇದನ್ನು ಸ್ಥಾಪಿಸಿದೆ.