ಈ ಭಾರಿಯೂ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ, ಕೇದಾರನಾಥ ಭದ್ರಿನಾಥಕ್ಕೂ ಭೇಟಿ!

By Suvarna NewsFirst Published Oct 17, 2022, 5:25 PM IST
Highlights

ಪ್ರಧಾನಿ ನರೇಂದ್ರ ಮೋದಿ ಪ್ರತಿ ಬಾರಿ ದೀಪಾವಳಿ ಹಬ್ಬವನ್ನು ಗಡಿಯಲ್ಲಿನ ಸೈನಿಕರ ಜೊತೆ ಆಚರಿಸುತ್ತಾರೆ. ಈ ಸಂಪ್ರದಾಯ ಮುಂದುವರಿಯಲಿದೆ. ಈ ಬಾರಿಯೂ ಯೋಧರ ಜೊತೆ ಮೋದಿ ಬೆಳಕಿನ ಹಬ್ಬ ಆಚರಿಸಲಿದ್ದಾರೆ. ಅದಕ್ಕೂ ಮುನ್ನ ಕೇದಾರನಾಥ್ ಹಾಗೂ ಭದ್ರಿನಾಥಕ್ಕೆ ಭೇಟಿ ನೀಡಲಿದ್ದಾರೆ.

ನವದೆಹಲಿ(ಅ.17): ದೀಪಾವಳಿ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಭಾರತದಲ್ಲಿ ಈಗಾಗಲೇ ತಯಾರಿಗಳು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೀಪಾವಳಿ ಹಬ್ಬ ಆಚರಿಸಲು ಸಜ್ಜಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮೋದಿ ದೀಪಾವಳಿ ಹಬ್ಬವನ್ನು ಗಡಿ ಕಾಯುವ ಸೈನಿಕರ ಜೊತೆ ಆಚರಿಸಲಿದ್ದಾರೆ. ಕಳೆದ 8 ವರ್ಷದಿಂದ ಪ್ರಧಾನಿ ಮೋದಿ ದೀಪಾವಳಿ ಹಬ್ಬವನ್ನು ದೇಶದ ಗಡಿಯಲ್ಲಿರುವ ಯೋಧರ ಜೊತೆ ಆಚರಸಿದ್ದಾರೆ. ದೀಪಾವಳಿ ಹಬ್ಬಕ್ಕೆ ದೇಶದ ಗಡಿಗೆ ತೆರಳಿ ಸಿಹಿ ಹಂಚಿ, ದೀಪಾವಳಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ಮೋದಿ ಆರಂಭಿಸಿದ್ದಾರೆ. ಈ ಸಂಪ್ರದಾಯ ಈ ಬಾರಿಯೂ ಮುಂದುವರಿಯಲಿದೆ. ಆದರೆ ಯಾವ ಗಡಿ ಪ್ರದೇಶಕ್ಕೆ ತೆರಳಲಿದ್ದಾರೆ ಅನ್ನೋದು ಬಹಿರಂಗವಾಗಿಲ್ಲ. ಈ ಬಾರಿಯ ಮೋದಿ ದೀಪಾವಳಿ ಹಬ್ಬ ಆಚರಣೆಗೂ ಮುನ್ನ ಪವಿತ್ರ ಕೇದಾರನಾಥ ಹಾಗೂ ಬದ್ರಿನಾಥಕ್ಕೆ ತೆರಳಲಿದ್ದಾರೆ.

ಕೇದಾರನಾಥದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದೆ. ಅಕ್ಟೋಬರ್ 21 ರಂದು ಪ್ರಧಾನಿ ನರೇಂದ್ರ ಮೋದಿ ಕೇದಾರನಾಥಕ್ಕೆ ತೆರಳಲಿದ್ದಾರೆ. ಕೇದಾರನಾಥ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ಮೋದಿ ಬಳಿಕ ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲಿದ್ದಾರೆ. ಬಳಿಕ ಅದೇ ದಿನ ಬದ್ರಿನಾಥಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಬದ್ರಿನಾಥದಲ್ಲಿ ಪೂಜೆ ಸಲ್ಲಿಸಿ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.  ಕೇದಾನಾಥ ಹಾಗೂ ಬದ್ರಿನಾಥ ಭೇಟಿ ಬಳಿಕ ಗಡಿ ಗ್ರಾಮವಾಗಿರುವ ಮನಾಗೆ ಭೇಟಿ ನೀಡುವ ಸಾಧ್ಯತೆ ಇದೆ. 

 

ಅಕ್ಟೋಬರ್ 24ರ ದೀಪಾವಳಿ ಹಬ್ಬದ ದಿನ ಗಡಿ ಪ್ರದೇಶಕ್ಕೆ ತೆರಳಿ ಭಾರತೀಯ ಯೋಧರ ಜೊತೆ ದೀಪಾವಳಿ ಹಬ್ಬ ಆಚರಿಸಲಿದ್ದಾರೆ.   2014 ರಂದು ಮೋದಿ ಪ್ರಧಾನಿಯಾಗಿ ಅಧಿಕಾರವನ್ನು ಸ್ವೀಕರಿಸಿದ ನಂತರ ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 2020ರಲ್ಲಿ ಪ್ರಧಾನಿ ರಾಜಸ್ಥಾನದ ಜೈಸಲ್ಮೇರ್‌ನ ಲೊಂಜೆವಾಲಾ ಗಡಿಯಲ್ಲಿ ಯೋಧರೊಂದಿಗೆ ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸಿದ್ದರು. 2021ರಲ್ಲಿ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಮತ್ತು ರಾಜೌರಿ ಗಡಿಗಳಲ್ಲಿ ದೀಪಾವಳಿಯನ್ನು ಆಚರಿಸಿದ್ದರು. 

2018ರಲ್ಲಿ ಪ್ರಧಾನಿ ಮೋದಿ ಅವರು ಸೈನಿಕರು ಮತ್ತು ಇಂಡೋ-ಟಿಬೆಟಿಯನ್‌ ಬಾರ್ಡರ್‌ ಪೊಲೀಸರ ಜತೆ ಉತ್ತರಾಖಂಡದ ಭಾರತ-ಚೀನಾ ಗಡಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮಾಚರಣೆ ಮಾಡಿದ್ದರು. ಅಲ್ಲದೇ ಮೋದಿ ಪ್ರಧಾನಿಯಾದಾಗಿನಿಂದಲೂ ಗಡಿಯಲ್ಲಿಯೇ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. 2014 ರಲ್ಲಿ ಮೊದಲ ಬಾರಿಗೆ ಸಿಯಾಚಿನ್‌ ಪ್ರದೇಶದಲ್ಲಿ ಆಚರಿಸಿದರೆ, ಭಾರತ-ಪಾಕ್‌ ಯುದ್ಧದ 50 ನೇ ವರ್ಷಾಚರಣೆಯನ್ನು 2015ರಲ್ಲಿ ಪಂಜಾಬ್‌ ಗಡಿಯಲ್ಲಿ ಸೈನಿಕರ ಜತೆ ಕಳೆದಿದ್ದರು. ಮರುವರ್ಷ ಹಿಮಾಚಲಪ್ರದೇಶದಲ್ಲಿ ಮತ್ತು 2017 ರಲ್ಲಿ ಜಮ್ಮು-ಕಾಶ್ಮೀರದಲ್ಲಿ ದೀಪಾವಳಿ ಆಚರಿಸಿದ್ದರು.

ಮಹಾಕಾಲೇಶ್ವರ ಬಳಿಕ ಕೇದಾರನಾಥ, ಬದ್ರಿನಾಥ ಅಭಿವೃದ್ಧಿ
ಕಾಶಿ ವಿಶ್ವನಾಥ ಧಾಮ ಬಳಿಕ  ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿ ಮಹಾಕಾಲೇಶ್ವರ ದೇಗುಲಕ್ಕೆ ನವಸ್ಪರ್ಶ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ  ಉಜ್ಜಯಿನಿ ಮಹಾಕಾಲೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾದ 900 ಮೀ. ಉದ್ದದ ಸುಸಜ್ಜಿತ ‘ಮಹಾಕಾಲ ಲೋಕ’ ಕಾರಿಡಾರ್‌ನ ಮೊದಲ ಹಂತವನ್ನು ಲೋಕಾರ್ಪಣೆ ಮಾಡಿದ್ದರು.  ವೇದ ಮಂತ್ರಗಳ ಪಠಣದ ನಡುವೆ ಪ್ರಧಾನಿ ಮೋದಿ ಅವರು ಕಾರಿಡಾರ್‌ನ ನಂದಿ ದ್ವಾರದಲ್ಲಿ ಪವಿತ್ರ ದಾರಗಳಿಂದ ಸುತ್ತಿ ಮುಚ್ಚಿಟ್ಟಿದ್ದ ಮಹಾಕಾಲ ಶಿವಲಿಂಗದ ಪ್ರತಿಕೃತಿಯನ್ನು ರಿಮೋಟ್‌ ಕಂಟ್ರೋಲ್‌ ಒತ್ತಿ ಅನಾವರಣಗೊಳಿಸಿದರು. ಈ ಮೂಲಕ ದೇಶದ ಅತಿದೊಡ್ಡ ದೇಗುಲ ಕಾರಿಡಾರ್‌ ಅನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. 856 ಕೋಟಿ ರು. ಮೊತ್ತದ ಯೋಜನೆಯ ಪೈಕಿ 351 ಕೋಟಿ ರು. ವೆಚ್ಚದಲ್ಲಿ ಮೊದಲ ಹಂತದ ಯೋಜನೆ ಇದಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್‌ 400 ಕಿ.ಮೀ. ಉದ್ದವಿದೆ.
 

click me!