
ಪಿಟಿಐ ನವದೆಹಲಿ (ಮೇ.14): ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ವಿರುದ್ಧದ ಭಾರತ ಬೃಹತ್ ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ಯೋಧರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಆಪರೇಷನ್ ಸಿಂದೂರದ ಮೂಲಕ ಪಾಕಿಸ್ತಾನದ ಪಾಲಿಗೆ ಲಕ್ಷ್ಮಣ ರೇಖೆ ಎಳೆಯಲಾಗಿದೆ’ ಎಂದು ಹೇಳಿದ್ದಾರೆ. ಈ ಮೂಲಕ, ‘ಭಾರತದ ಗಡಿ ದಾಟುವ ದುಸ್ಸಾಹಸಕ್ಕೆ ಕೈ ಹಾಕಿದರೆ ಸರ್ವನಾಶ ಖಚಿತ’ ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ.
ಪಂಜಾಬ್ನ ಅದಂಪುರದ ವಾಯುನೆಲೆಯಲ್ಲಿ, ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯಾದ ರಷ್ಯಾ ನಿರ್ಮಿತ ಎಸ್-400 ಮತ್ತು ಮಿಗ್-29 ಮುಂದೆ ನಿಂತು ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನೀವು (ಭಾರತೀಯ ಸೈನಿಕರು) ಮಾಡಿರುವ ಕೆಲಸ ಅಭೂತಪೂರ್ವ, ಅಕಲ್ಪನೀಯ ಮತ್ತು ಅದ್ಭುತ. ನಮ್ಮ ಸೇನೆ ಪೊಳ್ಳು ಅಣುಬೆದರಿಕೆಗೆ ತಕ್ಕ ಉತ್ತರ ನೀಡಿದಾಗ, ವೈರಿಗಳಿಗೆ ಭಾರತ ಮಾತಾ ಕಿ ಜೈ ಘೋಷಣೆಯ ಮಹತ್ವ ಅರಿವಾಗಿದೆ. ಇದು ಕೇವಲ ಘೋಷಣೆಯಲ್ಲ. ನಮ್ಮ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣ ಮುಡಿಪಾಗಿಡುವ ಪ್ರತಿಜ್ಞೆ ಮಾಡಿದ್ದಾರೆ. ನಮ್ಮ ಡ್ರೋನ್ ಮತ್ತು ಕ್ಷಿಪಣಿಗಳು ವೈರಿಯ ಆಯುಧಗಳನ್ನು ಹೊಡೆದಾಗಲೂ ಇದೇ ಘೋಷಣೆ ಕೇಳುತ್ತಿತ್ತು’ ಎಂದರು.
ಇದನ್ನೂ ಓದಿ: ಪಾಕ್ ಸುಳ್ಳಿಗೆ ಮೋದಿ ಸ್ಪಷ್ಟ ಸಾಕ್ಷ್ಯ! ಭಾರತದ 2ನೇ ಅತಿದೊಡ್ಡ ವಾಯುನೆಲೆ ಧ್ವಂಸ ಎಂಬ ಪಾಪಿಸ್ತಾನ ಸುಳ್ಳು ಬಯಲು!
ಇದೇ ವೇಳೆ ನಮ್ಮ ಪಡೆಗಳನ್ನು ಪ್ರಶಂಸಿಸಿರುವ ಮೋದಿ, ‘ನಿಮ್ಮ ಶೌರ್ಯದ ಕಥೆಗಳು ಇತಿಹಾಸದಲ್ಲಿ ಶಾಶ್ವತವಾಗಿ ಕೆತ್ತಲ್ಪಡುತ್ತವೆ. ನಮ್ಮ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿಗೆ ವಂದಿಸುತ್ತೇನೆ. ನಾವು ಕೇವಲ ಉಗ್ರನೆಲೆಗಳನ್ನಷ್ಟೇ ಅಲ್ಲ, ಪಾಕಿಸ್ತಾನದ ಧೈರ್ಯವನ್ನೇ ನಾಶ ಮಾಡಿದ್ದೇವೆ. ಭಾರತದ ಮೇಲೆ ಕೆಟ್ಟ ದೃಷ್ಟಿ ನೆಟ್ಟರೆ ನಾಶವಾಗುತ್ತೇವೆ ಎಂಬುದು ಉಗ್ರ ಪೋಷಕರಿಗೆ ಅರಿವಾಗಿದೆ. ಇನ್ನವರು ಕೆಲದ ದಿನ ನೆಮ್ಮದಿಯಿಂದ ಮಲಗಲೂ ಆಗದು’ ಎಂದು ಹೇಳಿದ್ದಾರೆ. ಅಂತೆಯೇ, ‘ನಾವು ಉಗ್ರರಿಗೆ ತಪ್ಪಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ. ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂಬ ಸ್ಪಷ್ಟ ಸಂದೇಶವನ್ನೂ ನೀಡಿದರು.
ಇದಕ್ಕೂ ಮೊದಲು ಮೋದಿ ವಾಯುಪಡೆಯ ಸೈನಿಕರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ, ತ್ರಿಶೂಲದ ಚಿಹ್ನೆಯಿದ್ದ ಕ್ಯಾಪ್ ಧರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ