
ನವದೆಹಲಿ: ಯುವ ಸಮೂಹಕ್ಕೆ ಭಾರತೀಯ ಸೇನೆಯಲ್ಲಿ ಅಲ್ಪಾವಧಿ ಸೇವೆ ಸಲ್ಲಿಸಲು ಅವಕಾಶ ನೀಡುವ ಅಗ್ನಿಪಥ ಯೋಜನೆಯು, ಭಾರತೀಯ ಸೇನೆಯಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಯಾಗಿದ್ದು, ಇದು ಸೇನೆಯನ್ನು ಇನ್ನಷ್ಟುಬಲಪಡಿಸುವ ಜೊತೆಗೆ, ಸೇನೆಯನ್ನು ಭವಿಷ್ಯದ ಸನ್ನದ್ಧ ಸ್ಥಿತಿಯಲ್ಲಿಡಲು ನೆರವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಅಗ್ನಿಪಥ ಯೋಜನೆ ಅಡಿ 4 ವರ್ಷ ಮಟ್ಟಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿರುವ ‘ಅಗ್ನಿವೀರ’ ಯೋಧರ ಮೊದಲ ಬ್ಯಾಚ್ನ ಯುವ ಯೋಧರನ್ನು ಉದ್ದೇಶಿಸಿ ವಚ್ರ್ಯುವಲಿ ಮಾತನಾಡಿದ ಪ್ರಧಾನಿ ಮೋದಿ ‘ಯುವ ಅಗ್ನಿವೀರರು, ಸೇನೆಗೆ ಇನ್ನಷ್ಟುಯುವಶಕ್ತಿ ತುಂಬುವುದರ ಜೊತೆಗೆ ಅದನ್ನು ತಂತ್ರಜ್ಞಾನ ಪರಿಣಿತರ ತಂಡವನ್ನಾಗಿ ಮಾಡಲಿದೆ. ಮಹಿಳೆಯರ ಇನ್ನಷ್ಟುಸಬಲೀಕರಣಕ್ಕೆ ನೆರವಾಗಲಿದೆ. ಇಂಥ ಕ್ರಾಂತಿಕಾರಕ ಯೋಜನೆಯ ಮೊದಲಿಗರಾದ ನಿಮಗೆಲ್ಲಾ ಅಭಿನಂದನೆಗಳು’ ಎಂದರು.
ಸೇನೆ ಸೇರ ಬಯಸುವವರಿಗೆ ಉಚಿತ ತರಬೇತಿ, ರಾಜ್ಯಕ್ಕೆ ಮಾದರಿ ಉಡುಪಿ ಯುವಕರ ಅಗ್ನಿಸೇತು ಯೋಜನೆ
‘ತಾಂತ್ರಿಕವಾಗಿ ಪರಿಣಿತ ಯೋಧರು, ನಮ್ಮ ಸೇನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅದರಲ್ಲೂ ಈಗಿನ ಯುವಸಮೂಹ ಈ ವಿಶೇಷ ಶಕ್ತಿಯನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಇಂಥ ತಾಂತ್ರಿಕ ಪರಿಣಿತ ಅಗ್ನಿವೀರರು ಸೇನೆಯಲ್ಲಿ ಮುಂಚೂಣಿ ಪಾತ್ರ ವಹಿಸಲಿದ್ದಾರೆ. ಹೊಸ ಭಾರತವು ಹೊಸ ಚೈತನ್ಯವನ್ನು ಹೊಂದಿದ್ದು, ಅದು ತನ್ನ ಪ್ರಯತ್ನಗಳ ಮೂಲಕ ಸಶಸ್ತ್ರ ಪಡೆಯನ್ನು ಆಧುನೀಕರಣಗೊಳಿಸುವ ಮತ್ತು ಆತ್ಮನಿರ್ಭರಗೊಳಿಸುವತ್ತ ಹೆಜ್ಜೆ ಇಟ್ಟಿದೆ. 21ನೇ ಶತಮಾನದಲ್ಲಿ ಯುದ್ಧ ಮಾಡುವ ರೀತಿ ಬದಲಾಗಿದೆ’ ಎಂದು ಹೇಳಿದರು.
ಇದೇ ವೇಳೆ ‘ಯೋಧರ ಸ್ಫೂರ್ತಿಯು ಅವರ ಶೌರ್ಯದ ಪ್ರತಿಬಿಂಬವಾಗಿದ್ದು, ಅದು ಎಂದೆಂದಿಗೂ ರಾಷ್ಟ್ರಧ್ವಜವನ್ನು ಬಾನೆತ್ತರದಲ್ಲೇ ಹಾರುವಂತೆ ನೋಡಿಕೊಂಡಿದೆ. ಈ ಅವಕಾಶದ ಮೂಲಕ ಅಗ್ನಿವೀರರು ಪಡೆಯುವ ಅನುಭವವು ಅವರಿಗೆ ಜೀವನದ ಬಗ್ಗೆ ಹೆಮ್ಮೆ ಪಡಲು ಕಾರಣವಾಗಲಿದೆ. ಯುವಕರು ಮತ್ತು ಅಗ್ನಿವೀರರೇ 21ನೇ ಶತಮಾನದಲ್ಲಿ ದೇಶಕ್ಕೆ ನಾಯಕತ್ವ ನೀಡುವಂಥವರು’ ಎಂದು ಮೋದಿ ಬಣ್ಣಿಸಿದರು. ಜೊತೆಗೆ ಸೇನೆಯ ಮೂರೂ ವಿಭಾಗದಲ್ಲಿ ಮಹಿಳಾ ಯೋಧರನ್ನು ಕಾಣಲು ಬಯಸುವುದಾಗಿ ಹೇಳಿದ ಮೋದಿ, ಇತ್ತೀಚೆಗೆ ಸಿಯಾಚಿನ್ನಲ್ಲಿ ಮಹಿಳಾ ಯೋಧರ ನೇಮಕ, ಯುದ್ಧ ವಿಮಾನ ಚಲಾಯಿಸುವ ಹೊಣೆಯನ್ನು ಮಹಿಳೆಯರಿಗೆ ನೀಡಿದ ಘಟನೆಗಳನ್ನು ಉದಾಹರಣೆಯಾಗಿ ನೀಡಿದರು.
ಅಗ್ನಿಪಥ ಯೋಜನೆ:
ಕಳೆದ ಜೂ.14ರಂದು ಕೇಂದ್ರ ಸರ್ಕಾರ ಘೋಷಿಸಿದ ಈ ಯೋಜನೆ ಅನ್ವಯ ಹದಿನೇಳೂವರೆ ವರ್ಷ ಪೂರೈಸಿದ ಮತ್ತು 21 ವರ್ಷ ಮೀರದ ಯುವಕ, ಯುವತಿಯರು ಅಗ್ನಿವೀರ ಯೋಜನೆಯಲ್ಲಿ ಭಾಗಿಯಾಗಬಹುದು. ಆಯ್ಕೆಯಾದವರಿಗೆ 4 ವರ್ಷಗಳ ಅಲ್ಪಾವಧಿ ಸೇವೆ ನೀಡಲಾಗುತ್ತದೆ. ಹೀಗೆ ಸೇವೆ ಸಲ್ಲಿಸಿದವರ ಪೈಕಿ ಶೇ.25ರಷ್ಟುಯೋಧರನ್ನು ಮತ್ತೆ 15 ವರ್ಷಗಳಿಗೆ ಮುಂದುವರೆಸಲಾಗುತ್ತದೆ. ಹೀಗೆ ತರಬೇತಿ ಪಡೆದವರಿಗೆ ಸರ್ಕಾರ ಪ್ರಮಾಣ ಪತ್ರ ನೀಡುತ್ತದೆ. ಹೀಗೆ ತರಬೇತಿ, ಸೇವೆ ಸಲ್ಲಿಸಿ ಬಂದವರಿಗೆ ಈಗಾಗಲೇ ವಿವಿಧ ಹುದ್ದೆಗಳ ನೇಮಕಾತಿ ವೇಳೆ ಮೀಸಲು ನೀಡುವುದಾಗಿ ಹಲವು ರಾಜ್ಯ ಸರ್ಕಾರಗಳು ಘೋಷಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ