
ಅಜ್ಮೆರ್(ಮೇ.31): ರಾಜಸ್ಥಾನ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಇದರ ಬೆನ್ನಲ್ಲೇ ರಾಜಸ್ಥಾನ ಬಿಜೆಪಿ ಪ್ರಧಾನಿ ಮೋದಿ ಆಡಳಿತ 9 ವರ್ಷ ಪೂರೈಸಿದ ಬೆನ್ನಲ್ಲೇ ಸಮಾವೇಶ ಹಮ್ಮಿಕೊಂಡಿದೆ. ಈ ಸಮಾವೇಶಕ್ಕಾಗಿ ಅಜ್ಮೆರ್ ತಲುಪಿರುವ ಪ್ರಧಾನಿ ಮೋದಿ ಪವಿತ್ರ ಪ್ರಜಾಪತಿ ಬ್ರಹ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪುಷ್ಕರದಲ್ಲಿರುವ ಬ್ರಹ್ಮ ದೇವಸ್ಥಾನಕ್ಕೆ ತೆರಳಿದ ಪ್ರಧಾನಿ ಮೋದಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪವಿತ್ರ ಬ್ರಹ್ಮ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಆರತಿ ಎತ್ತಿ ಪೂಜೆ ಸಲ್ಲಿಸಿದ್ದಾರೆ.
ಮೋದಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ದೇವಸ್ಥಾನದ ಸುತ್ತ ಮುತ್ತ ಭಾರಿ ಭದ್ರತೆ ನಿಯೋಜಿಸಲಾಗಿತ್ತು. ಭೇಟಿ ವೇಳೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. ಪುಷ್ಕರಕ್ಕೆ ಆಗಮಿಸಿದ ಮೋದಿ ನೇರವಾಗಿ ದೇವಸ್ಥಾನಕ್ಕೆ ತೆರಳಿದರು. ಇದೇ ವೇಳೆ ಪ್ರಜಾಪತಿ ಬ್ರಹ್ಮ ದೇವಸ್ಥಾನದ ಅರ್ಚಕರು ಮಂದಿರ ವಿಶೇಷತೆ, ಇಲ್ಲಿನ ಪೂಜಾ ವಿಧಿವಿಧಾನಗಳ ಕುರಿತು ಮಾಹಿತಿ ನೀಡಿದರು. ಇತ್ತ ಮೋದಿ ಆರತಿ ಬೆಳಗೆ ಪೂಜೆ ಸಲ್ಲಿಸಿದರು.
ಮೋದಿ ರ್ಯಾಲಿ ವೇಳೆ ಬಾಂಬ್ ಸ್ಫೋಟ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ NIA ರೇಡ್
ಪುಷ್ಕರದಿಂದ ಪ್ರಧಾನಿ ಮೋದಿ ಅಜ್ಮೆರ್ಗೆ ಆಗಮಿಸಲಿದ್ದಾರೆ. ಬಳಿಕ ಖಯಾದ್ನಲ್ಲಿ ಆಯೋಜಿಸಿರುವ ಬಿಜೆಪಿ 9 ವರ್ಷದ ಸಂಭ್ರಮ ಸಮಾವೇಶದಲ್ಲಿ ಮೋದಿ ಮಾತನಾಡಲಿದ್ದಾರೆ. ಸಾರ್ವಜನಿಕ ಸಭೆ ಮೂಲಕ ರಾಜಸ್ಥಾನ ವಿಧಾನಸಭಾ ಚುನಾವಣಾ ಕಣ ರಂಗೇರಿಸಲಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತರೂಢ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿದೆ. ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲೆಟ್ರನ್ನು ದೆಹಲಿಗೆ ಕರೆಯಿಸಿಕೊಂಡು ಕಾಂಗ್ರೆಸ್ ಮಹತ್ವದ ಸಭೆ ನಡೆಸಿದ್ದಾರೆ. ಒಗ್ಗಟ್ಟಾಗಿ ಹೋರಾಡಿದರೆ ಕರ್ನಾಟಕದ ರೀತಿ ಗೆಲುವು ನಮ್ಮದಾಗಲಿದೆ. ಬಳಿಕ ಸಿಎಂ, ಅಧಿಕಾರ ಕುರಿತು ಚರ್ಚಿಸೋಣ ಎಂದಿದ್ದರು. ಈ ಸೂಚನೆಯಿಂದ ಅಶೋಕ್ ಹಾಗೂ ಸಚಿನ್ ಪೈಲೆಟ್ ಬಣ ಇದೀಗ ಒಗ್ಗಟ್ಟಾಗಿ ಹೋರಾಡಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ರಾಜಸ್ಥಾನದಲ್ಲಿ ಅಧಿಕಾರ ಮರಳಿ ಪಡೆಯಲು ಕಸರತ್ತು ಆರಂಭಿಸಿದೆ.
ಕಾಂಗ್ರೆಸ್ ಒಗ್ಗಟ್ಟಿನ ತಯಾರಿ ಆರಂಭಗೊಂಡ ಬೆನ್ನಲ್ಲೇ ಇದೀಗ ಬಿಜೆಪಿ ಪ್ರಧಾನಿ ಮೋದಿ ರ್ಯಾಲಿ ಆಯೋಜಿಸಿದೆ. 9 ವರ್ಷದ ಸಾಧನೆಯನ್ನು ಜನರ ಮುಂದಿಡಲು ಬಿಜೆಪಿ ಸಜ್ಜಾಗಿದೆ. 45 ವಿಧಾನಸಭಾ ಕ್ಷೇತ್ರ ಹಾಗೂ 8 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಬಿಜೆಪಿ ಮರಳಿ ಅಧಿಕಾರ ಪಡೆಯಲು ಹೋರಾಟ ನಡೆಸುತ್ತಿದೆ. ಕರ್ನಾಟಕದಂತೆ ರಾಜಸ್ಥಾನದಲ್ಲಿ ರಾಜ್ಯ ಬಿಜೆಪಿ ಬಲಿಷ್ಠವಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಗೆಲುವಿಗಾಗಿ ಇನ್ನಿಲ್ಲ ಪ್ರಯತ್ನ ಮಾಡಬೇಕಿದೆ.
ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ನನ್ನ ಗುರಿ, ಬಡವರ ಹಾಗೂ ದೇಶದ ಘನತೆ ಎತ್ತಿಹಿಡಿಯಲು ಶ್ರಮ: ಮೋದಿ
ಕೇಂದ್ರ ಬಿಜೆಪಿ ಸರ್ಕಾರ 9 ವರ್ಷ ಪೂರೈಸಿದ ಬೆನ್ನಲ್ಲೇ ಪ್ರಧಾನಿ ಮೋದಿ, ಸಂತಸ ಹಂಚಿಕೊಂಡಿದ್ದರು. ‘ನನ್ನ ಎಲ್ಲ ನಿರ್ಧಾರಗಳು ಜನಜೀವನ ಸುಧಾರಣೆಯ ಉದ್ದೇಶ ಹೊಂದಿವೆ ಎಂದಿದ್ದರು. ಟ್ವೀಟರ್ನಲ್ಲಿ ಸರಣಿ ಸಂದೇಶ ಪ್ರಕಟಿಸಿರುವ ಮೋದಿ, ‘ಇಂದು ನಾವು ದೇಶಸೇವೆಯ 9 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ನಮ್ರತೆ ಮತ್ತು ಕೃತಜ್ಞತಾ ಭಾವ ಆವರಿಸಿದೆ. ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ ಹಾಗೂ ಮಾಡುವ ಪ್ರತಿಯೊಂದು ಕ್ರಿಯೆಯು ಜನರ ಜೀವನವನ್ನು ಸುಧಾರಿಸುವ ಬಯಕೆಯಿಂದ ಕೂಡಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಾವು ಇನ್ನೂ ಹೆಚ್ಚು ಶ್ರಮಿಸುತ್ತೇವೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ