
ನವದೆಹಲಿ(ಏ.13) ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಳೆ(ಏ.14) ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆಯಾಗಲಿದೆ. 18ನೇ ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ದೆಹಲಿ ಬಿಜೆಪಿ ಮುಖ್ಯ ಕಚೇರಿಯಲ್ಲಿ ನಾಯಕರು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಹಾಜರಾಗಲಿದ್ದಾರೆ. ಪ್ರಮುಖವಾಗಿ ಮೋದಿ ಕಿ ಗ್ಯಾರೆಂಟಿ, ವಿಕಸಿತ ಭಾರತ ಸೇರಿದಂತೆ ಹಲವು ವಿಷಗಳು ಬಿಜೆಪಿಯ ಪ್ರಣಾಳಿಕೆಯ ಪ್ರಮುಖ ವಿಷಗಳಾಗಿರುವ ಸಾಧ್ಯತೆ ಇದೆ.
ಪ್ರಧಾನಿ ಮೋದಿಯ ಎರಡನೇ ಅವಧಿಯಲ್ಲಿ ಆರ್ಟಿಕಲ್ 370 ರದ್ದು, ರಾಮ ಮಂದಿರ ನಿರ್ಮಾಣ ಸೇರಿದಂತೆ ಹಲವು ಐತಿಹಾಸಿ ನಿರ್ಧಾರಗಳು ಘಟಿಸಿದೆ. ಇದೀಗ ಬಿಜೆಪಿ ಇದೇ ರೀತಿ ಹಲವು ಐತಿಹಾಸಿಕ ಹಾಗೂ ಅತ್ಯಂತ ಮಹತ್ವದ ವಿಚಾರಗಳನ್ನು ತನ್ನ ಸಂಕಲ್ಪ ಪತ್ರದಲ್ಲಿ ಘೋಷಿಸುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿಯ ಪ್ರಣಾಳಿಕೆ ನಿರೀಕ್ಷೆಗಳು ಹೆಚ್ಚಾಗಿದೆ. ಹಿಂದುತ್ವ ಪರ ಕೆಲ ಘೋಷಣೆಗಳು ಈ ಬಾರಿಯ ಪ್ರಣಾಳಿಕೆಯಲ್ಲಿ ಇರಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿನ ಯಾವುದೇ ವಿಷಯಗಳು ಬಹಿರಂಗವಾಗಿಲ್ಲ.
ಸಮಾಜವಾದಿ ಪಾರ್ಟಿ ಪ್ರಣಾಳಿಕೆ ಬಿಡುಗಡೆ; ಬಡ ರೈತರಿಗೆ 5000 ರು. ಪಿಂಚಣಿ, ₹ 500 ಮೊತ್ತದ ಮೊಬೈಲ್ ಡಾಟಾ!
ಭಾನುವಾರ ಬೆಳಗ್ಗೆ 8.30ಕ್ಕೆ ಬಿಜೆಪಿ ಬಹುನಿರೀಕ್ಷಿತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಅಂಬೇಡ್ಕರ್ ಜಯಂತಿಯಂದೇ ಪಕ್ಷದ ಕೇಂದ್ರ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಖುದ್ದು ಹಾಜರಾಗಲಿದ್ದಾರೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ 27 ಜನರ ಪ್ರಣಾಳಿಕೆ ಸಮಿತಿ ಜನಾಭಿಪ್ರಾಯ ಸಂಗ್ರಹಿಸಿ, ಇದನ್ನು ಸಿದ್ಧಪಡಿಸಿದೆ. ಬಿಜೆಪಿಗೆ ಒಟ್ಟಾರೆ 15 ಲಕ್ಷ ಅಭಿಪ್ರಾಯಗಳು ಬಂದಿದ್ದು, ಅದರಲ್ಲಿ ನಮೋ ಆ್ಯಪ್ ಒಂದರಿಂದಲೇ ಬರೋಬ್ಬರಿ 4 ಲಕ್ಷ ಅಭಿಪ್ರಾಯಗಳು ಸಂಗ್ರಹವಾಗಿವೆ. ಜೊತೆಗೆ 10 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ಸಂದೇಶದ ಮೂಲಕ ಪ್ರಣಾಳಿಕೆಯ ತಯಾರಿಕೆಗೆ ತಮ್ಮ ಸಲಹೆ ನೀಡಿದ್ದಾರೆ.
ಯಾವ ವಿಷಯ ಪ್ರಮುಖ?:
ಮೋದಿ ಅವರು ಬಹುವಾಗಿ ಹೇಳುವ ಮೋದಿ ಕಿ ಗ್ಯಾರಂಟಿ ಇದರಲ್ಲಿ ಪ್ರಮುಖವಾಗಿ ಪ್ರಸ್ತಾಪ ಆಗಬಹುದು. ಜತೆಗೆ ರೈತರು ಮಹಿಳೆಯರು, ಬಡವರು ಮತ್ತು ಯುವಜನರ ಏಳಿಗೆಗೆ ಹಲವು ಅಭಿವೃದ್ಧಿಪರ ಯೋಜನೆಗಳನ್ನು ಪ್ರಕಟಿಸಿ, 2047ರಲ್ಲಿ ಭಾರತ ಇರಬೇಕಾದ ದೂರದೃಷ್ಟಿಯನ್ನು ಇದು ಒಳಗೊಳ್ಳಲಿದೆ ಎನ್ನಲಾಗಿದೆ.
ಈಗಾಗಲೇ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗಿದೆ. ರಾಷ್ಟ್ರೀಯ ಜಾತಿ ಗಣತಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದೆ. ಲೋಕಸಭಾ ಚುನಾವಣೆ ಎಪ್ರಿಲ್ 19ರಿಂದ ಆರಂಭಗೊಂಡು ಜೂನ್ 1 ವರೆಗೆ ನಡೆಯಲಿದೆ. 7 ಹಂತದಲ್ಲಿ ಮತದಾನ ನಡೆಯಲಿದ್ದು ಜೂನ್ 4 ರಂದು ಫಲಿತಾಂಶ ಘೋಷಣೆಯಾಗಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ಹಾಗೂ ಮೇ 7 ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ.
ಜೂ.4ರ ಬಳಿಕ ಪ್ರಧಾನಿ ಮೋದಿಗೆ ರಜೆ, ಇದು ಜನರ ಗ್ಯಾರಂಟಿ: ಕಾಂಗ್ರೆಸ್ನ ಜೈರಾಂ ರಮೇಶ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ