'ಒಳನುಸುಳುವಿಕೆ ನಿಜಕ್ಕೂ ಅಷ್ಟು ದೊಡ್ಡದೇ..' ಪ್ರಧಾನಿ ಮೋದಿ ಬಂಗಾಳ ಭೇಟಿ ಬೆನ್ನಲ್ಲೇ ಟಿಎಂಸಿ ವಾಗ್ದಾಳಿ!

Published : Jan 17, 2026, 07:24 PM IST
PM Modi Bengal Visit TMC Slams PM as Political Tourist Ahead of 2026 Polls

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರ ಪಶ್ಚಿಮ ಬಂಗಾಳ ಭೇಟಿಯು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ತೀವ್ರ ವಾಗ್ದಾಳಿಗೆ ಕಾರಣವಾಗಿದೆ. ಟಿಎಂಸಿ, ಮೋದಿಯವರನ್ನು 'ರಾಜಕೀಯ ಪ್ರವಾಸಿ' ಎಂದು ಜರಿದು, ಗಡಿ ಭದ್ರತೆ, ಗಲಭೆಗಳು ಮತ್ತು ಮತದಾರರ ಪಟ್ಟಿ ಪರಿಶೀಲನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸರಣಿ ಪ್ರಶ್ನೆ.

ಕೋಲ್ಕತ್ತಾ (ಜ.17): ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನವಾಗುತ್ತಿದ್ದಂತೆಯೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿ ಮೋದಿಯವರನ್ನು 'ರಾಜಕೀಯ ಪ್ರವಾಸಿ' ಎಂದು ಕರೆದಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು ಕೇಳುವ ಮೂಲಕ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದೆ.

'ಗಲಭೆಕೋರರಿಗೆ ಬಂಗಾಳದಲ್ಲಿ ಸ್ಥಾನವಿಲ್ಲ' - ಟಿಎಂಸಿ ಕಿಡಿ

ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿರುವ ಟಿಎಂಸಿ, ಪ್ರಧಾನಿ ಮೋದಿ ಅವರು ಬಂಗಾಳದಲ್ಲಿ ಜನಸಂಖ್ಯೆ ಅಸಮತೋಲನ ಮತ್ತು ಗಲಭೆಗಳ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದೆ. 'ಭಾರತೀಯ ರಾಜಕೀಯದ ಅತಿದೊಡ್ಡ ಗಲಭೆ ಪ್ರಚೋದಕರಿಗೆ ಬಂಗಾಳದ ಸಾಮರಸ್ಯದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ' ಎಂದು ಪಕ್ಷವು ನೇರ ದಾಳಿ ನಡೆಸಿದೆ.

ಗಡಿ ಭದ್ರತೆ ಮತ್ತು ಅಮಿತ್ ಶಾ ವೈಫಲ್ಯದ ಪ್ರಶ್ನೆ

ಕೇಂದ್ರದ ಅಧೀನದಲ್ಲಿರುವ ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಐಬಿ ಸಂಸ್ಥೆಗಳಿದ್ದರೂ ಗಡಿಯನ್ನು ಸುರಕ್ಷಿತವಾಗಿಡಲು ಗೃಹ ಸಚಿವ ಅಮಿತ್ ಶಾ ಅವರು ಯಾಕೆ ವಿಫಲರಾಗಿದ್ದಾರೆ ಎಂದು ಟಿಎಂಸಿ ಪ್ರಶ್ನಿಸಿದೆ. ವಿದೇಶಿಯರ ಒಳನುಸುಳುವಿಕೆ ತಡೆಯಲು ಕೇಂದ್ರದ ಬಳಿ ಯಾವ ಕ್ರಮಗಳಿವೆ? ಚುನಾವಣಾ ಆಯೋಗವು ವಿದೇಶಿಯರ ಪಟ್ಟಿಯನ್ನು ಯಾಕೆ ಗೌಪ್ಯವಾಗಿಟ್ಟಿದೆ? ಎಂದು ಪ್ರಶ್ನಿಸುವ ಮೂಲಕ ಗಡಿ ಭದ್ರತೆಯ ವೈಫಲ್ಯವನ್ನು ಎತ್ತಿ ತೋರಿಸಿದೆ.

ಪಹಲ್ಗಾಮ್ ಮತ್ತು ದೆಹಲಿ ಸ್ಫೋಟದ ಉಲ್ಲೇಖ

ದೇಶದ ಭದ್ರತೆಯ ಬಗ್ಗೆ ಮಾತನಾಡಿದ ಟಿಎಂಸಿ, ಕಾಶ್ಮೀರದ ಪಹಲ್ಗಾಮ್‌ನಂತಹ ಅತೀ ಹೆಚ್ಚು ಮಿಲಿಟರಿ ಕಾವಲಿರುವ ಪ್ರದೇಶದಲ್ಲಿ ಉಗ್ರರು ಅಮಾಯಕ ನಾಗರಿಕರ ಹತ್ಯಾಕಾಂಡ ನಡೆಸಿದ್ದು ಹೇಗೆ? ಎಂದು ಪ್ರಶ್ನಿಸಿದೆ. ಅಲ್ಲದೆ, ಹರಿಯಾಣದ 'ಡಬಲ್ ಎಂಜಿನ್' ಸರ್ಕಾರದ ಅವಧಿಯಲ್ಲಿ ನಡೆದ ಸ್ಫೋಟ ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ 15 ಜನರ ಸಾವಿಗೆ ಕಾರಣವಾದ ಬಾಂಬ್ ಸ್ಫೋಟದ ಬಗ್ಗೆಯೂ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

SIR ತಪಾಸಣೆ ರಾಜಕೀಯ ಹಗ್ಗಜಗ್ಗಾಟ

ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತಪಾಸಣೆ (SIR) ಪ್ರಕ್ರಿಯೆಯನ್ನು ಟಿಎಂಸಿ ತೀವ್ರವಾಗಿ ವಿರೋಧಿಸಿದೆ. ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲು ಕೇಂದ್ರ ಸರ್ಕಾರ ಸಂಚು ರೂಪಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದು, 2026ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಮೋದಿ ಅವರ ಭೇಟಿಯು ಕೇವಲ ರಾಜಕೀಯ ಗಿಮಿಕ್ ಎಂದು ಟಿಎಂಸಿ ಟೀಕಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಸೆನೆಟರ್‌ಗಳ ರಿಕ್ವೆಸ್ಟ್: 'ಮೋದಿ ಜೊತೆ ಮಾತಾಡಿ ಸಾಹೇಬ್ರೇ, ನಮ್ಮ 'ಬೇಳೆ' ಬೇಯುತ್ತಿಲ್ಲ!
ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?