
ಕೋಲ್ಕತ್ತಾ (ಜ.17): ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನವಾಗುತ್ತಿದ್ದಂತೆಯೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿ ಮೋದಿಯವರನ್ನು 'ರಾಜಕೀಯ ಪ್ರವಾಸಿ' ಎಂದು ಕರೆದಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು ಕೇಳುವ ಮೂಲಕ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸರಣಿ ಪೋಸ್ಟ್ಗಳನ್ನು ಹಾಕಿರುವ ಟಿಎಂಸಿ, ಪ್ರಧಾನಿ ಮೋದಿ ಅವರು ಬಂಗಾಳದಲ್ಲಿ ಜನಸಂಖ್ಯೆ ಅಸಮತೋಲನ ಮತ್ತು ಗಲಭೆಗಳ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದೆ. 'ಭಾರತೀಯ ರಾಜಕೀಯದ ಅತಿದೊಡ್ಡ ಗಲಭೆ ಪ್ರಚೋದಕರಿಗೆ ಬಂಗಾಳದ ಸಾಮರಸ್ಯದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ' ಎಂದು ಪಕ್ಷವು ನೇರ ದಾಳಿ ನಡೆಸಿದೆ.
ಕೇಂದ್ರದ ಅಧೀನದಲ್ಲಿರುವ ಬಿಎಸ್ಎಫ್, ಸಿಆರ್ಪಿಎಫ್ ಮತ್ತು ಐಬಿ ಸಂಸ್ಥೆಗಳಿದ್ದರೂ ಗಡಿಯನ್ನು ಸುರಕ್ಷಿತವಾಗಿಡಲು ಗೃಹ ಸಚಿವ ಅಮಿತ್ ಶಾ ಅವರು ಯಾಕೆ ವಿಫಲರಾಗಿದ್ದಾರೆ ಎಂದು ಟಿಎಂಸಿ ಪ್ರಶ್ನಿಸಿದೆ. ವಿದೇಶಿಯರ ಒಳನುಸುಳುವಿಕೆ ತಡೆಯಲು ಕೇಂದ್ರದ ಬಳಿ ಯಾವ ಕ್ರಮಗಳಿವೆ? ಚುನಾವಣಾ ಆಯೋಗವು ವಿದೇಶಿಯರ ಪಟ್ಟಿಯನ್ನು ಯಾಕೆ ಗೌಪ್ಯವಾಗಿಟ್ಟಿದೆ? ಎಂದು ಪ್ರಶ್ನಿಸುವ ಮೂಲಕ ಗಡಿ ಭದ್ರತೆಯ ವೈಫಲ್ಯವನ್ನು ಎತ್ತಿ ತೋರಿಸಿದೆ.
ಪಹಲ್ಗಾಮ್ ಮತ್ತು ದೆಹಲಿ ಸ್ಫೋಟದ ಉಲ್ಲೇಖ
ದೇಶದ ಭದ್ರತೆಯ ಬಗ್ಗೆ ಮಾತನಾಡಿದ ಟಿಎಂಸಿ, ಕಾಶ್ಮೀರದ ಪಹಲ್ಗಾಮ್ನಂತಹ ಅತೀ ಹೆಚ್ಚು ಮಿಲಿಟರಿ ಕಾವಲಿರುವ ಪ್ರದೇಶದಲ್ಲಿ ಉಗ್ರರು ಅಮಾಯಕ ನಾಗರಿಕರ ಹತ್ಯಾಕಾಂಡ ನಡೆಸಿದ್ದು ಹೇಗೆ? ಎಂದು ಪ್ರಶ್ನಿಸಿದೆ. ಅಲ್ಲದೆ, ಹರಿಯಾಣದ 'ಡಬಲ್ ಎಂಜಿನ್' ಸರ್ಕಾರದ ಅವಧಿಯಲ್ಲಿ ನಡೆದ ಸ್ಫೋಟ ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ 15 ಜನರ ಸಾವಿಗೆ ಕಾರಣವಾದ ಬಾಂಬ್ ಸ್ಫೋಟದ ಬಗ್ಗೆಯೂ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.
SIR ತಪಾಸಣೆ ರಾಜಕೀಯ ಹಗ್ಗಜಗ್ಗಾಟ
ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತಪಾಸಣೆ (SIR) ಪ್ರಕ್ರಿಯೆಯನ್ನು ಟಿಎಂಸಿ ತೀವ್ರವಾಗಿ ವಿರೋಧಿಸಿದೆ. ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲು ಕೇಂದ್ರ ಸರ್ಕಾರ ಸಂಚು ರೂಪಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದು, 2026ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಮೋದಿ ಅವರ ಭೇಟಿಯು ಕೇವಲ ರಾಜಕೀಯ ಗಿಮಿಕ್ ಎಂದು ಟಿಎಂಸಿ ಟೀಕಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ