
ನವದೆಹಲಿ: ನಂಜನಗೂಡಿನ ರಸಬಾಳೆಹಣ್ಣು, ಮೈಸೂರಿನ ವೀಳ್ಯದೆಲೆ ಮತ್ತು ವಿಜಯಪುರದ ಇಂಡಿ ನಿಂಬೆ ರುಚಿ ಮತ್ತು ಗುಣಮಟ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಇದೇ ಕಾರಣಕ್ಕೆ ಇವು ವಿದೇಶಗಳಿಗೆ ಕೂಡ ರಫ್ತಾಗುತ್ತಿವೆ ಎಂದು ಹೇಳಿದ್ದಾರೆ.
ಭಾನುವಾರ ಪ್ರಸಾರವಾದ ಮಾಸಿಕ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೃಷಿಯಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ ರಾಜ್ಯಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ, ಈ ವೇಳೆ ಕರ್ನಾಟಕದ ಕೃಷಿ ಉತ್ಪನ್ನಗಳ ಬಗ್ಗೆಯೂ ಪ್ರಸ್ತಾಪಿಸಿದರು.
‘ಕೃಷಿಕರ ಪರಿಶ್ರಮವು ಭಾರತದ ಸಾಧನೆಯ ಅಂಕಿ-ಅಂಶಗಳನ್ನು ಪ್ರತಿಫಲಿಸಿದ್ದು, 15 ಕೋಟಿ ಟನ್ ಅಕ್ಕಿ ಉತ್ಪಾದಿಸುವ ಮೂಲಕ ದೇಶ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕನಾಗಿ ಹೊರಹೊಮ್ಮಿದೆ. ಅನ್ನದಾತರಾಗಿರುವ ರೈತರೇ ಭೂಮಿತಾಯಿಯ ನಿಜವಾದ ಆರಾಧಕರಾಗಿದ್ದಾರೆ. ಮಣ್ಣನ್ನು ಚಿನ್ನ ಮಾಡುವ ಕಲೆಯನ್ನು ಅವರಿಂದ ಕಲಿಯಬೇಕು’ ಎಂದು ಮೋದಿ ಕೊಂಡಾಡಿದರು.
ಇದೇ ವೇಳೆ ಭಾರತೀಯ ಕೃಷಿ ಉತ್ಪನ್ನಗಳು ಮಾಲ್ಡೀವ್ಸ್ನಂತಹ ರಾಷ್ಟ್ರಗಳಿಗೆ ರಫ್ತಾಗುತ್ತಿರುವುದನ್ನು ಉಲ್ಲೇಖಿಸುತ್ತಾ, ‘ವಿಮಾನಗಳ ಮೂಲಕ ನಂಜನಗೂಡಿನ ಬಾಳೆ, ಮೈಸೂರಿನ ವೀಳ್ಯದೆಲೆ, ಇಂಡಿ ನಿಂಬೆ ಈಗ ಅನ್ಯ ದೇಶಗಳ ಮಾರುಕಟ್ಟೆಯನ್ನೂ ಪ್ರವೇಶಿಸುತ್ತಿವೆ. ಇವುಗಳು ರುಚಿ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಜಿಐ ಟ್ಯಾಗ್ ಕೂಡ ಪಡೆದಿವೆ. ಇಂದು ರೈತರು ಪ್ರಮಾಣದ ಜತೆ ಗುಣವರ್ಧನೆಯ ಕಡೆಗೂ ಗಮನಹರಿಸುತ್ತಿದ್ದಾರೆ’ ಎಂದು ಹೇಳಿದರು.
ಉಳಿದಂತೆ ಒಂದೇ ಹೊಲದಲ್ಲಿ 570 ವಿಧದ ಅಕ್ಕಿಗಳನ್ನು ಬೆಳೆಯುತ್ತಿರುವ ಕೇರಳದ ತ್ರಿಶೂರು ಗ್ರಾಮ ಹಾಗೂ ತಂತ್ರಜ್ಞಾನದ ಅಳವಡಿಕೆಯಿಂದ ಭೂಮಿಯ ಉತ್ತಮ ಬಳಕೆ ಮತ್ತು ಕಡಿಮೆ ನೀರನ್ನು ಬಳಸುವ ತಂತ್ರಗಳ ಮೂಲಕ ಹೆಚ್ಚಿನ ಆದಾಯ ಗಳಿಸಿದ ಒಡಿಶಾದ ಕೃಷಿಕ ಹಿರೋದ್ ಪಟೇಲ್ರನ್ನು ಶ್ಲಾಘಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ