Tamil Nadu Election Result: ಪೆರಂಬೂರ್‌ ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ಕಂಡ ಜೋಸೆಫ್‌ ವಿಜಯ್‌

Published : May 04, 2026, 08:21 AM IST
thalapathy vijay

ಸಾರಾಂಶ

ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಆರಂಭಿಕ ಮುನ್ನಡೆ ಸಾಧಿಸಿದೆ. ಪೆರಂಬೂರ್ ಕ್ಷೇತ್ರದಲ್ಲಿ ಸ್ವತಃ ವಿಜಯ್ ಮುನ್ನಡೆಯಲ್ಲಿದ್ದು, ಫಲಿತಾಂಶದ ನಂತರ ಶಾಸಕರನ್ನು ರಕ್ಷಿಸಿಕೊಳ್ಳಲು ಪಕ್ಷವು 'ರೆಸಾರ್ಟ್ ರಾಜಕೀಯ'ದ ಕ್ರಮ ಕೈಗೊಂಡಿದೆ.

ಚೆನ್ನೈ (ಮೇ.4): ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಇಡೀ ರಾಜ್ಯದ ಕಣ್ಣು ನೆಟ್ಟಿರುವ 'ದಳಪತಿ' ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಆರಂಭಿಕ ಹಂತದಲ್ಲಿ ಭರವಸೆ ಮೂಡಿಸಿದೆ. ಬೆಳಿಗ್ಗೆ 8:04ರ ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಪೆರಂಬೂರ್ ಕ್ಷೇತ್ರದಲ್ಲಿ ನಟ ವಿಜಯ್ ಮುನ್ನಡೆ ಸಾಧಿಸಿದ್ದಾರೆ. ಟಿವಿಕೆ ಪಕ್ಷದ ಮುಖ್ಯಸ್ಥನೂ ಆಗಿರುವ ವಿಜಯ್‌ ಪೆರಂಬೂರ್‌ ಕ್ಷೇತ್ರದ ಅಂಚೆ ಮತದ ಎಣಿಕೆಯಲ್ಲಿ 75 ಮತಗಳ ಮುನ್ನಡೆ ಕಂಡಿದ್ದಾರೆ. ಆರ್.ಡಿ. ಶೇಖರ್ (DMK) 25 ಮತಗಳೊಂದಿಗೆ ಹಿನ್ನಡೆಯಲ್ಲಿದ್ದಾರೆ. ಪೆರಂಬೂರ್ ಕ್ಷೇತ್ರದಲ್ಲಿ ಒಟ್ಟು 47 ಅಭ್ಯರ್ಥಿಗಳು ಕಣದಲ್ಲಿದ್ದು, ಡಿಎಂಕೆಯ ಆರ್.ಡಿ. ಶೇಖರ್, ಟಿವಿಕೆಯ ವಿಜಯ್, ನಾಮ್ ತಮಿಳರ್ ಕಕ್ಷಿಯ ಎಸ್. ವೆಟ್ರಿ ತಮಿಳನ್ ಮತ್ತು ಬಿಎಸ್‌ಪಿಯ ವೆಟ್ರಿ ವೇಲ್ ಸೆಲ್ವಂ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ವಿಜಯ್ ಪಕ್ಷವನ್ನು ಲಘುವಾಗಿ ಪರಿಗಣಿಸಿದ ತಿರುಮಾವಳವನ್

ಡಿಎಂಕೆ ಮಿತ್ರಪಕ್ಷವಾದ ವಿಡುತಲೈ ಚಿರುತೈಗಳ್ ಕಚ್ಚಿ (VCK) ಮುಖ್ಯಸ್ಥ ತೋಲ್ ತಿರುಮಾವಳವನ್ ಅವರು ವಿಜಯ್ ಅವರ ಪಕ್ಷವನ್ನು ಲಘುವಾಗಿ ಪರಿಗಣಿಸಿದ್ದಾರೆ. "ಟಿವಿಕೆ ಕೇವಲ ಮತಗಳನ್ನು ಸೀಳಬಹುದಷ್ಟೇ ಹೊರತು, ಗೆಲ್ಲುವ ಶಕ್ತಿ ಅದಕ್ಕಿಲ್ಲ. ಆಡಳಿತ ಪಕ್ಷ ಅಥವಾ ಪ್ರಮುಖ ವಿರೋಧ ಪಕ್ಷಗಳನ್ನು ಮೀರಿಸಲು ವಿಜಯ್ ಅವರಿಂದ ಸಾಧ್ಯವಿಲ್ಲ. ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಾವು ಸ್ಪರ್ಧಿಸಿರುವ 8 ಕ್ಷೇತ್ರಗಳಲ್ಲೂ ಗೆಲ್ಲುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಫಲಿತಾಂಶಕ್ಕೂ ಮುನ್ನವೇ 'ರೆಸಾರ್ಟ್ ರಾಜಕೀಯ'ದ ಆತಂಕ?

ಎಕ್ಸಿಟ್ ಪೋಲ್‌ಗಳು ವಿಜಯ್ ಪಕ್ಷಕ್ಕೆ ಉತ್ತಮ ಸ್ಥಾನಗಳನ್ನು ಭವಿಷ್ಯ ನುಡಿದಿರುವ ಬೆನ್ನಲ್ಲೇ, ಟಿವಿಕೆ ನಾಯಕತ್ವವು ತನ್ನ ಅಭ್ಯರ್ಥಿಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದೆ. ಗೆದ್ದ ಅಭ್ಯರ್ಥಿಗಳು ಫಲಿತಾಂಶ ಹೊರಬಂದ ತಕ್ಷಣ ಚೆನ್ನೈನ ಪಣೈಯೂರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಶಾಸಕರು ಬೇರೆ ಪಕ್ಷಗಳಿಗೆ ಜಿಗಿಯದಂತೆ ತಡೆಯಲು ಈ "ರೆಸಾರ್ಟ್ ರಾಜಕೀಯ"ದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ನಿಕಟ ಸ್ಪರ್ಧೆ ಏರ್ಪಟ್ಟರೆ ಪ್ರತಿಯೊಬ್ಬ ಶಾಸಕನ ಸಂಖ್ಯೆಯೂ ಸರ್ಕಾರ ರಚನೆಯಲ್ಲಿ ನಿರ್ಣಾಯಕವಾಗಲಿದೆ. ತಮಿಳುನಾಡಿನಾದ್ಯಂತ 234 ಕ್ಷೇತ್ರಗಳಲ್ಲಿ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಡಿಎಂಕೆ, ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮತ್ತು ಮೊದಲ ಬಾರಿಗೆ ಕಣಕ್ಕಿಳಿದಿರುವ ವಿಜಯ್ ಅವರ ಟಿವಿಕೆ ನಡುವೆ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Keralam Election Results: ಯಾರ ಪಾಲಿಗೆ ಕೇರಳಂ? ಎಡಕ್ಕೋ? ಬಲಕ್ಕೋ? ಅಥವಾ ಅತಂತ್ರವೋ?
5 State Assembly Election results 2026 Live: Keralam Election Results - ಯಾರ ಪಾಲಿಗೆ ಕೇರಳಂ? ಎಡಕ್ಕೋ? ಬಲಕ್ಕೋ? ಅಥವಾ ಅತಂತ್ರವೋ?