
ಮಂಗಳೂರು(ಜು.02): ಕರಾವಳಿ ಮತ್ತು ಮಲೆನಾಡಿನಲ್ಲಿ ಜನಪ್ರಿಯವಾಗಿರುವ ಕೆಸುವಿನ ಎಲೆಗಳಿಂದ ತಯಾರಿಸುವ ಸ್ವಾದಿಷ್ಟಪತ್ರೊಡೆ ತಿನಿಸನ್ನು ಕೇಂದ್ರ ಆಯುಷ್ ಸಚಿವಾಲಯವು ‘ಆಯುಷ್ ಮೆಡಿಸಿನ್ ಪ್ರಕಾರದ ಸಾಂಪ್ರದಾಯಿಕ ಆಹಾರ’ ಎಂಬುದಾಗಿ ಗುರುತಿಸಿದೆ.
ಕಿರುಪುಸ್ತಕವನ್ನು ಸಿದ್ಧಪಡಿಸುವಾಗ ಸಚಿವಾಲಯವು ಆಯ್ಕೆ ಮಾಡಿದ 26 ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಈ ಪತ್ರೊಡೆ ಕೂಡ ಒಂದಾಗಿದೆ. ಈ ಪುಸ್ತಕವೀಗ ಇಲಾಖೆಯ ವೆಬ್ಸೈಟ್ನಲ್ಲೂ ಲಭ್ಯ. ಅದರಲ್ಲಿ ಪ್ರತಿ ಭಕ್ಷ್ಯದ ಛಾಯಾಚಿತ್ರಗಳೊಂದಿಗೆ ಅವುಗಳ ತಯಾರಿಕೆಯ ವಿಧಾನ, ಆರೋಗ್ಯ ಪ್ರಯೋಜನಗಳನ್ನೂ ವಿವರಿಸಲಾಗಿದೆ.
ಪತ್ರೊಡೆಯನ್ನು ಕರಾವಳಿ ಮಾತ್ರವಲ್ಲ, ಕೇರಳ, ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಈಶಾನ್ಯ ಪ್ರದೇಶದ ಭಾಗಗಳಲ್ಲಿಯೂ ತಯಾರಿಸಲಾಗುತ್ತದೆ.
ಕೆಸುವಿನ ಎಲೆಗಳಲ್ಲಿ ಕಬ್ಬಿಣ ಸಮೃದ್ಧವಾಗಿದ್ದು, ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಧಿವಾತದಂತಹ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲೆಗಳಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಇದೆ ಎಂದು ಸಚಿವಾಲಯ ತಿಳಿಸಿದೆ.
ಪಟ್ಟಿಯಲ್ಲಿದೆ ಕರ್ನಾಟಕದ ಹಲವು ರೆಸಿಪಿ
ನವದೆಹಲಿ: ಕೇಂದ್ರ ಆಯುಷ್ ಇಲಾಖೆ ಬಿಡುಗಡೆ ಮಾಡಿರುವ ಆರೋಗ್ಯಕರವಾದ ಮತ್ತು ಔಷಧೀಯ ಗುಣ ಉಳ್ಳ ಸಾಂಪ್ರಾದಾಯಿಕ ಅಡುಗೆ ರೆಸಿಪಿಗಳ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಹೆಚ್ಚಾಗಿ ಬಳಸುವ ಹಲವು ಅಡುಗೆಗಳೂ ಸೇರಿವೆ. ಅವುಗಳೆಂದರೆ
* ಪತ್ರೊಡೆ, ರಾಗಿ ಮತ್ತು ಬಾಳೆ ಹಣ್ಣಿನ ಜ್ಯೂಸ್
* ಕೆಂಪಕ್ಕಿಯ ಗಂಜಿ, ಬೀಟ್ರೂಟ್ ಹಲ್ವಾ
* ತಿಳಿ ಮಜ್ಜಿಗೆ, ಗೆಣಸಲೆ (ರೈಸ್ ಪಾನ್ ಕೇಕ್)
* ಸೋರೆಕಾಯಿ ಕಡುಬು, ಮೆಣಸಿಕಾಯಿ ಚಟ್ನಿ
* ನವಣೆ ನುಗ್ಗೆ ಸೊಪ್ಪಿನ ದೋಸೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ