
ಬಿಹಾರದ ಪಾಟ್ನಾದ ಚಿತ್ರಗುಪ್ತ ನಗರ ಪ್ರದೇಶದಲ್ಲಿ ನೀಟ್(NEET)ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯ ನಿಗೂಢ ಸಾವಿನಲ್ಲಿ ಅತಿದೊಡ್ಡ ವಿಷಯ ಬೆಳಕಿಗೆ ಬಂದಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಯು ವಿದ್ಯಾರ್ಥಿನಿಯ ಒಳ ಉಡುಪಿನಲ್ಲಿ ವೀರ್ಯ ಇರುವುದನ್ನು ದೃಢಪಡಿಸಿದ್ದು, ಮರಣೋತ್ತರ ಪರೀಕ್ಷಾ ವರದಿಯು ಲೈಂಗಿಕ ದೌರ್ಜನ್ಯದ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ. ಈ ವರದಿಯು ಬಿಹಾರ ಪೊಲೀಸರ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲ, ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಇಬ್ಬರು ಆಫೀಸರ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಕಾಲದಲ್ಲಿ ಮಾಹಿತಿ ಸಂಗ್ರಹಿಸದಿರುವುದು ಮತ್ತು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡಿರುವ ಆರೋಪ ಈ ಇಬ್ಬರ ಮೇಲಿದೆ.
ಪೊಲೀಸ್ ಮೂಲಗಳ ಪ್ರಕಾರ, ವಿದ್ಯಾರ್ಥಿನಿಯ ಬಟ್ಟೆಯ ಮೇಲೆ ಕಂಡುಬಂದ ಪುರಾವೆಗಳು ಲೈಂಗಿಕ ದೌರ್ಜನ್ಯವನ್ನು ಸೂಚಿಸುತ್ತವೆ ಎಂದು ವಿಧಿವಿಜ್ಞಾನ ವರದಿಯು ಸ್ಪಷ್ಟವಾಗಿ ಹೇಳುತ್ತದೆ. ಇದರರ್ಥ ಈ ಪ್ರಕರಣವು ಕೇವಲ ಅನುಮಾನಾಸ್ಪದ ಸಾವು ಅಥವಾ ಆತ್ಮ*ಹ*ತ್ಯೆಯಾಗಿರದೆ, ಗಂಭೀರ ಅಪರಾಧ ಕೃತ್ಯವಾಗಿರಬಹುದು. ಪೊಲೀಸರು ಈಗ ಎದುರಿಸುತ್ತಿರುವ ದೊಡ್ಡ ಸವಾಲು ಎಂದರೆ ವಿದ್ಯಾರ್ಥಿನಿಯ ವಿರುದ್ಧ ಈ ಅಪರಾಧ ಎಸಗಿದ ಶಂಕಿತನನ್ನು ಗುರುತಿಸುವುದು.
ಪೊಲೀಸರ ನಿರ್ಲಕ್ಷ್ಯವೇ ಕಾರಣ: ಆರೋಪ
ಪೊಲೀಸರು ಆರಂಭಿಕ ಹಂತದಲ್ಲಿ ಸಾಕಷ್ಟು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲಿಲ್ಲ ಮತ್ತು ಸಕಾಲಿಕ ಹಾಗೂ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಕಂಡುಬಂದಿದೆ. ಇದರ ಆಧಾರದ ಮೇಲೆ ಇಬ್ಬರು ಅಧಿಕಾರಿಗಳನ್ನು ಸಹ ಅಮಾನತುಗೊಳಿಸಲಾಗಿದೆ.
ಜನವರಿ 9 ರಂದು ಪಾಟ್ನಾದ ಚಿತ್ರಗುಪ್ತ ನಗರದ ಶಂಭು ಬಾಲಕಿಯರ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಹಲವು ದಿನಗಳ ಕಾಲ ಕೋಮಾದಲ್ಲಿದ್ದ ಆಕೆ ಜನವರಿ 11 ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನಳಾದಳು. ಆರಂಭದಲ್ಲಿ ಪೊಲೀಸರು ಇದನ್ನು ಆತ್ಮ*ಹ*ತ್ಯೆ ಪ್ರಕರಣವೆಂದು ಘೋಷಿಸಿದರು. ವಿದ್ಯಾರ್ಥಿನಿ ನಿದ್ರೆ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ್ದಾಳೆ ಮತ್ತು ಟೈಫಾಯ್ಡ್ನಿಂದ ಬಳಲುತ್ತಿದ್ದಾಳೆ ಎಂದು ಹೇಳಿದರು. ಆದರೆ ಮರಣೋತ್ತರ ಪರೀಕ್ಷೆ ಮತ್ತು ಈಗ ಎಫ್ಎಸ್ಎಲ್ ವರದಿಯಿಂದ ಇಡೀ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ.
ಕುಟುಂಬದ ಆರೋಪವೇನು?
ಮೃತಳ ಕುಟುಂಬವು ಆರಂಭದಿಂದಲೂ ಅ*ತ್ಯಾ*ಚಾರ ಮತ್ತು ಕೊ*ಲೆ ಆರೋಪ ಮಾಡುತ್ತಲೇ ಬಂದಿದೆ. ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಮತ್ತು ಸಾಕ್ಷ್ಯಗಳನ್ನು ತಿರುಚಿದ್ದಾರೆ. ನಿಜವಾದ ಅಪರಾಧಿಗಳನ್ನು ರಕ್ಷಿಸಲು ತನಿಖೆಯನ್ನು ತಪ್ಪು ದಿಕ್ಕಿನಲ್ಲಿ ನಿರ್ದೇಶಿಸಲಾಗಿದೆ ಎಂದು ಕುಟುಂಬವು ಆರೋಪಿಸಿದೆ. ಇದೀಗ ಪೊಲೀಸರು ಹಾಸ್ಟೆಲ್ ಮಾಲೀಕ ಮನೀಶ್ ರಂಜನ್ ಅವರನ್ನು ಬಂಧಿಸಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಆದರೆ ಕುಟುಂಬವು ಎಸ್ಐಟಿಯಿಂದ ತೃಪ್ತರಾಗಿಲ್ಲ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ.
ಪ್ರಕರಣದಲ್ಲಿ ಇಲ್ಲಿಯವರೆಗೆ ಏನಾಗಿದೆ?
*ಜನವರಿ 9 ರಂದು ವಿದ್ಯಾರ್ಥಿನಿ ಹಾಸ್ಟೆಲ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ.
*ಜನವರಿ 11 ರಂದು ಚಿಕಿತ್ಸೆಯ ಸಮಯದಲ್ಲಿ ನಿಧನ.
*ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂದು ಹೇಳಿಕೆ.
*ಮರಣೋತ್ತರ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯದ ಶಂಕೆ.
*FSL ವರದಿಯಲ್ಲಿ ಒಳುಡುಪಿನಲ್ಲಿ ವೀರ್ಯ ಇರುವುದು ಕನ್ಫರ್ಮ್.
*ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು.
*ಹಾಸ್ಟೆಲ್ ಮಾಲೀಕನ ಬಂಧನ
*ಎಸ್ಐಟಿ ರಚನೆ.
* ಸಿಬಿಐ ತನಿಖೆಗೆ ಕುಟುಂಬದಿಂದ ಒತ್ತಾಯ.
ಪಪ್ಪು ಯಾದವ್ ದಾಳಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪಪ್ಪು ಯಾದವ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಪಾಟ್ನಾದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಯಾರು ಮುಚ್ಚಿಹಾಕುತ್ತಿದ್ದಾರೆ?. ತನಿಖೆಯಲ್ಲಿ ನಿಜವಾದ ಅಪರಾಧಿಯನ್ನ ಕಂಡುಹಿಡಿಯದೆ ಹಾಸ್ಟೆಲ್ ಮಾಲೀಕರನ್ನು ತರಾತುರಿಯಲ್ಲಿ ಜೈಲಿಗೆ ಕಳುಹಿಸಲಾಗಿದೆ ಆರೋಪಿಸಿದರು. ಮನೀಶ್ ರಂಜನ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಕೂಲಂಕಷವಾಗಿ ವಿಚಾರಣೆ ನಡೆಸಬೇಕೆಂದು ಸಹ ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ