ಸಂಸತ್ತಿನ ಭದ್ರತಾ ವ್ಯವಸ್ಥೆ ಮುಖ್ಯಸ್ಥ ಹುದ್ದೆ 45 ದಿನದಿಂದ ಖಾಲಿ: ಶೇ. 40 ರಷ್ಟು ಸಿಬ್ಬಂದಿ ಕೊರತೆ!

By Kannadaprabha NewsFirst Published Dec 18, 2023, 9:23 AM IST
Highlights

ಸಂಸತ್ತಿನ ಭದ್ರತಾ ವ್ಯವಸ್ಥೆಗೆ ಜಂಟಿ ಕಾರ್ಯದರ್ಶಿ (ಭದ್ರತೆ) ಮುಖ್ಯಸ್ಥರಾಗಿದ್ದಾರೆ. ಈವರೆಗೆ ಇದ್ದ ಜಂಟಿ ಕಾರ್ಯದರ್ಶಿ ರಘುಬೀರ್‌ ಲಾಲ್‌ ನವೆಂಬರ್‌ ಆರಂಭದಲ್ಲಿ ತಮ್ಮ ಮಾತೃ ರಾಜ್ಯ ಉತ್ತರ ಪ್ರದೇಶಕ್ಕೆ ವರ್ಗಾವಣೆಯಾಗಿದ್ದಾರೆ. ಅಲ್ಲಿಂದ ಈವರೆಗೆ ನಿರ್ದೇಶಕರ ಮಟ್ಟದ ಅಧಿಕಾರಿ ಬ್ರಿಜೇಶ್‌ ಸಿಂಗ್‌ ಎಂಬುವರು ಭದ್ರತಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನೋಡಿಕೊಳ್ಳುತ್ತಿದ್ದಾರೆ.

ನವದೆಹಲಿ (ಡಿಸೆಂಬರ್ 18, 2023): ನೂತನ ಸಂಸತ್‌ ಭವನದಲ್ಲಿ ದುಷ್ಕರ್ಮಿಗಳು ಹೊಗೆ ಬಾಂಬ್‌ ಸಿಡಿಸಿದ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಸಂಸತ್‌ ಭವನದ ಭದ್ರತಾ ವ್ಯವಸ್ಥೆಯಲ್ಲಿರುವ ಹಲವು ಲೋಪಗಳು ಬೆಳಕಿಗೆ ಬಂದಿವೆ. ಸಂಸತ್ತಿನ ಭದ್ರತಾ ವ್ಯವಸ್ಥೆಯ ಮುಖ್ಯಸ್ಥನ ಹುದ್ದೆ 45 ದಿನಗಳಿಂದ ಖಾಲಿಯಿದೆ ಹಾಗೂ ಭದ್ರತಾ ವಿಭಾಗದಲ್ಲಿ ಶೇ.40ರಷ್ಟು ಸಿಬ್ಬಂದಿ ಕೊರತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನ ಭದ್ರತಾ ವ್ಯವಸ್ಥೆಗೆ ಜಂಟಿ ಕಾರ್ಯದರ್ಶಿ (ಭದ್ರತೆ) ಮುಖ್ಯಸ್ಥರಾಗಿದ್ದಾರೆ. ಈವರೆಗೆ ಇದ್ದ ಜಂಟಿ ಕಾರ್ಯದರ್ಶಿ ರಘುಬೀರ್‌ ಲಾಲ್‌ ನವೆಂಬರ್‌ ಆರಂಭದಲ್ಲಿ ತಮ್ಮ ಮಾತೃ ರಾಜ್ಯ ಉತ್ತರ ಪ್ರದೇಶಕ್ಕೆ ವರ್ಗಾವಣೆಯಾಗಿದ್ದಾರೆ. ಅಲ್ಲಿಂದ ಈವರೆಗೆ ನಿರ್ದೇಶಕರ ಮಟ್ಟದ ಅಧಿಕಾರಿ ಬ್ರಿಜೇಶ್‌ ಸಿಂಗ್‌ ಎಂಬುವರು ಭದ್ರತಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮುಖ್ಯಸ್ಥನ ಹುದ್ದೆ ಖಾಲಿ ಉಳಿದಿದೆ ಎಂದು ಮೂಲಗಳು ಹೇಳಿವೆ.

Latest Videos

ಸಂಸತ್‌ ಸ್ಮೋಕ್‌ ಬಾಂಬ್ ದಾಳಿ ಮಾಸ್ಟರ್‌ ಮೈಂಡ್‌ ಲಲಿತ್ ಝಾ ಅರೆಸ್ಟ್‌

ಇನ್ನು, ಸಂಸತ್ತಿನ ಭದ್ರತಾ ವ್ಯವಸ್ಥೆ ನೋಡಿಕೊಳ್ಳುವ ಒಟ್ಟು ಸಿಬ್ಬಂದಿಯಲ್ಲಿ ಶೇ.40ರಷ್ಟು ಸಿಬ್ಬಂದಿ ಕೊರತೆಯಿದೆ. ಸದ್ಯ 230 ಸಿಬ್ಬಂದಿ ಮಾತ್ರ ಭದ್ರತೆಗೆ ನಿಯೋಜನೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಅದೇ ರೀತಿ, ಇತ್ತೀಚೆಗೆ ಲೋಕಸಭೆಯೊಳಗೆ ಇಬ್ಬರು ದುಷ್ಕರ್ಮಿಗಳು ಸ್ಮೋಕ್‌ ಕ್ಯಾನ್‌ಗಳನ್ನು ಸಿಡಿಸಿ ಹೊಗೆ ಎಬ್ಬಿಸಿದಾಗ ಅಲ್ಲಿ ಸ್ಮೋಕ್‌ ಅಲಾರ್ಮ್‌ಗಳು ಮೊಳಗಿಲ್ಲ. ಹೊಸ ಸಂಸತ್ತಿನಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಅಳವಡಿಸಿದ್ದರೂ ಅದು ಹೊಗೆಯ ಬಗ್ಗೆ ಎಚ್ಚರಿಕೆ ನೀಡುವಲ್ಲಿ ವಿಫಲವಾಗಿದೆ ಎಂದು ಮೂಲಗಳು ಹೇಳಿವೆ.

 

ಸಂಸತ್‌ ದಾಳಿಕೋರರ ಗುರಿ ಪ್ರಧಾನಿ ಮೋದಿ! ದಾಳಿಗೆ ಅಸಲಿ ಕಾರಣ ಇದೇನಾ?

ಪತ್ರಿಕಾ ವರದಿಯೊಂದರ ಪ್ರಕಾರ, ಈ ವರ್ಷ ಸಂಸತ್ತಿನ ಭದ್ರತಾ ಬಜೆಟ್‌ನಲ್ಲಿ 30 ಕೋಟಿ ರೂ. ಕಡಿತಗೊಳಿಸಲಾಗಿದೆ. ಅದು ಕೂಡ ಈಗ ಚರ್ಚೆಗೆ ಕಾರಣವಾಗಿದೆ.

ಹಾಗೆಯೇ, ಸಂಸದರಿಂದ ಪಾಸ್‌ ಪಡೆದು ಸಂಸತ್ತಿಗೆ ಬರುವ ಸಂದರ್ಶಕರ ಸಂಖ್ಯೆಯೀಗ ಹೆಚ್ಚಾಗಿದೆ. ಹೀಗಾಗಿ ಭದ್ರತಾ ಸಿಬ್ಬಂದಿಗೆ ಎಲ್ಲರನ್ನೂ ಸರಿಯಾಗಿ ತಪಾಸಣೆ ಮಾಡಿ ಒಳಗೆ ಬಿಡಲು ಸಾಧ್ಯವಾಗುತ್ತಿಲ್ಲ. ಅದರ ಲಾಭ ಪಡೆದು ಇಬ್ಬರು ದುಷ್ಕರ್ಮಿಗಳು ಒಳಗೆ ಪ್ರವೇಶಿಸಿದರು ಎಂದು ಹೇಳಲಾಗುತ್ತಿದೆ.

ಇನ್ನೂ ಒಂದು ಸಮಸ್ಯೆ ಬೆಳಕಿಗೆ ಬಂದಿದ್ದು, ಅದು ಸಂಸದರ ವಾಹನಗಳಿಗೆ ಸಂಬಂಧಿಸಿದ್ದಾಗಿದೆ. ಸಂಸದರನ್ನು ಸಂಸತ್ತಿನ ಬಾಗಿಲಿನ ಬಳಿ ಇಳಿಸಿ ಪಾರ್ಕಿಂಗ್‌ ಪ್ರದೇಶಕ್ಕೆ ಹೋದ ವಾಹನಗಳನ್ನು ನಂತರ ಸಂಸದರು ಹೊರಬಂದಾಗ ಬಾಗಿಲಿಗೆ ಕರೆಸುವ ಕಾರ್ಯವನ್ನು ಸಂಸತ್ತಿನ ಭದ್ರತಾ ವಿಭಾಗದ ಬದಲು ಸಚಿವಾಲಯ ನೋಡಿಕೊಳ್ಳುತ್ತಿದೆ. ಇದು ಸಮನ್ವಯದ ಸಮಸ್ಯೆಯನ್ನು ಹುಟ್ಟುಹಾಕುತ್ತಿದೆ ಎಂದು ಹೇಳಲಾಗಿದೆ.

click me!