ಓಡಿ ಬರುವುದು ಬಿಟ್ಟರೆ ಬೇರೇನು ಮಾರ್ಗ?: ಸೋನ್‌ದಾಸ್ ಪ್ರಕಾರ ಭಾರತವೇ ಸ್ವರ್ಗ!

By nikhil vkFirst Published Dec 19, 2019, 3:23 PM IST
Highlights

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆ| ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಧಾರ್ಮಿಕಅಲ್ಪಸಂಖ್ಯಾತರಿಗೆ ನೆರಳಾಗಲಿದೆ ಭಾರತ| ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರಿಗೆ ನೆರವು| ನಿರ್ಭಿತ ಹಾಗೂ ಸ್ವಚ್ಛಂದ ಸಮಾಜದಲ್ಲಿ ಸ್ವತಂತ್ರ್ಯವಾಗಿ ಉಸಿರಾಡುವ ಅವಕಾಶ|ಪಾಕಿಸ್ತಾನಿ ಶರಣಾರ್ಥಿಗಳ ಬದುಕು ಬವಣೆಯ ಕುರಿತು ನಿಮ್ಮ ಸುವರ್ಣನ್ಯೂಸ್.ಕಾಂ ವಿಸ್ತೃತ ವರದಿ| ಪಾಕಿಸ್ತಾನಿ ಹಿಂದೂ ಶರಣಾರ್ಥಿ ಸೋನ್‌ದಾಸ್ ಮನದಾಳದ ಮಾತುಗಳು|

ಬೆಂಗಳೂರು(ಡಿ.19):ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆ ಭಾರತದಲ್ಲಿ ಸಂಚಲನ ಮೂಡಿಸಿದೆ. ದಶಕಗಳಿಂದ ನಮ್ಮ ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೆ ಗುರಿಯಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತ ನೆರಳಾಗುವ ಭರವಸೆ ನೀಡಿದೆ. ಆದರೆ ಈ ಕಾಯ್ದೆ ಭಾರತದಲ್ಲೇ ಧಾರ್ಮಿಕ ಕಂದಕಕ್ಕೆ ಮುನ್ನಡಿ ಬರೆಯಲಿದೆ ಎಂಬ ವಾದವೂ ಮುನ್ನೆಲೆಗೆ ಬಂದಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿರುವ ಹಿಂದೂ, ಬೌದ್ಧ, ಕ್ರಿಶ್ಚಿಯನ್ ಹಾಗೂ ಜೋರಾಸ್ಟ್ರಿಯನ್ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವುದು ಪೌರತ್ವ ತಿದ್ದುಪಡಿ ಕಾಯ್ದೆಯ ಸದುದ್ದೇಶ.

ಪೌರತ್ವ ತಿದ್ದುಪಡಿ ಕುರಿತು ಭಾರತದಲ್ಲೇಕೆ ಚರ್ಚೆ ಶುರುವಾಗಿದೆ? ಕೆಲವರಿಗೇಕೆ ಭೀತಿ ಎದುರಾಗಿದೆ? ಅಷ್ಟಕ್ಕೂ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾರೆಂದರೆ ಯಾರು? ಈ ರಾಷ್ಟ್ರಗಳಲ್ಲಿ ಅವರು ಅನುಭವಿಸುತ್ತಿರುವ ಸಂಕಷ್ಟಗಳೇನು? ಈ ಎಲ್ಲವುಗಳ ಕುರಿತು ನಿಮ್ಮ ಸುವರ್ಣನ್ಯೂಸ್.ಕಾಂ ಸರಣಿ ಲೇಖನ ಪ್ರಕಟಿಸಲಿದೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಅದರಲ್ಲೂ ಹಿಂದೂ ಧರ್ಮೀಯರು ಭಯದ ನೆರಳಲ್ಲೇ ಬದುಕುತ್ತಿದ್ದಾರೆ. ಧರ್ಮದ ಅಧಾರದ ಮೇಲೆಯೇ ರಚನೆಯಾಗಿರುವ ಪಾಕಿಸ್ತಾನದಲ್ಲಿ ಅನ್ಯ ಕೋಮಿನ ಜನರಿಗೆ ನೀಡುವ ಕಿರುಕುಳ ಹೇಳ ತೀರದು.

ಈ ಅನ್ಯಾಯವನ್ನು ಸಹಿಸಲಾಗದೇ ಪಾಕಿಸ್ತಾನದಿಂದ ಓಡಿ ಬಂದು ಭಾರತದಲ್ಲಿ ಹಲವು ಜನರು ಆಶ್ರಯ ಪಡೆದಿದ್ದಾರೆ. ಅವರಲ್ಲಿ ದೆಹಲಿಯ ಮಜ್ನು ಕಾ ಟೀಲಾ ಪ್ರದೇಶದಲ್ಲಿ ಆಶ್ರಯ ಪಡೆದಿರುವ ಸೋನ್‌ದಾಸ್, ಏಶಿಯಾನೆಟ್ ನ್ಯೂಸ್ ಕನ್ನಡದೊಂದಿಗೆ ಸಂವಾದ ನಡೆಸಿದ್ದಾರೆ.

ಪಾಕಿಸ್ತಾನಿ ಹಿಂದೂ ಶರಣಾರ್ಥಿಗಳು: ಕಷ್ಟ ಹೇಳುವ ಸರಣಿ ಲೇಖನಗಳು!

ಓವರ್ ಟು ಸೋನ್‌ದಾಸ್:

2012ರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಹೈದರಾಬಾದ್‌ನಿಂದ ಭಾರತಕ್ಕೆ ಓಡಿಬಂದ ಸೋನ್‌ದಾಸ್, ದೆಹಲಿಯಲ್ಲಿ ಪರಿವಾರ ಸಮೇತರಾಗಿ ಶರಣಾರ್ಥಿಗಳ ಕ್ಯಾಂಪ್‌ನಲ್ಲಿ ಜೀವನ ನಡೆಸುತ್ತಿದ್ದಾರೆ.

ಧಾರ್ಮಿಕ ವೀಸಾ ಪಡೆದು ಭಾರತಕ್ಕೆ ತೀರ್ಥಯಾತ್ರೆಗೆ ಬಂದ ನಾವು, ಮರಳಿ ಪಾಕಿಸ್ತಾನಕ್ಕೆ ಹೋಗದೇ ಭಾರತದಲ್ಲೇ ಆಶ್ರಯ ಪಡೆದಿದ್ದೇವೆ. ಪಾಕಿಸ್ತಾನದಲ್ಲಿ ನಮ್ಮ ಮೇಲಾದ ದೌರ್ಜನ್ಯವನ್ನು ನೆನೆಸಿಕೊಂಡರೇ ಭಯವಾಗುತ್ತದೆ. 

ಪಾಕಿಸ್ತಾನದಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ತೀರ ಸಾಮಾನ್ಯ. ಏಕಾಏಕಿ ಮನೆಗೆ ನುಗ್ಗುವ ದುರುಳರು, ಹೆಣ್ಣುಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ ಮಾಡುತ್ತಾರೆ. 

ನಮ್ಮ ವ್ಯಾಪಾರ-ವಹಿವಾಟುಗಳ ಮೇಲೆ ದಾಳಿ ಮಾಡುವ ಮುಸ್ಲಿಂ ಮೂಲಭೂತವಾದಿಗಳು, ನಮ್ಮಿಂದ ಬದುಕನ್ನೇ ಕಸಿಯುತ್ತಾರೆ. ಅಲ್ಲಿಂದ ಓಡಿ ಬಂದು ಭಾರತದಲ್ಲಿ ಆಶ್ರಯ ಪಡೆಯುವುದನ್ನು ಬಿಟ್ಟರೆ ನಮಗೆ ಬೇರೇನೂ ಮಾರ್ಗವಿಲ್ಲ.

ಹೆಣ್ಣುಮಕ್ಕಳನ್ನು ಹೊತ್ತೊಯ್ದು..ಗಂಗಾರಾಮ್ ಮಾತಿಗೆ ಕಣ್ಣಂಚು ತೊಯ್ದು!

ಕಳೆದ 7-8 ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ವಿರುದ್ಧದ ಹಿಂಸಾಚಾರ ಹೆಚ್ಚಾಗಿದ್ದು, ಇನ್ನೂ ಸಾಕಷ್ಟು ಹಿಂದೂ ಭಾಂಧವರು ಅಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ನಮಗೆ ನಿರಾಳತೆ ನೀಡಿದ್ದು, ಗೌರವದ ಬದುಕಿನ ಕನಸು ತೋರಿಸಿದೆ. ಈ ಕಾಯ್ದೆಯಿಂದ ಪಾಕಿಸ್ತಾನದ ಹಿಂದೂ ಸಮುದಾಯದಲ್ಲಿ ಹೊಸ ಭರವಸೆಯ ಬೆಳಕು ಮೂಡಿದೆ.

click me!