ಸಿಎಎ ಜಾರಿ ‘ಮೋದಿ ಗ್ಯಾರಂಟಿ’: ಪ್ರಧಾನಿ ನರೇಂದ್ರ ಮೋದಿ ಗುಡುಗು

By Kannadaprabha NewsFirst Published Apr 5, 2024, 6:03 AM IST
Highlights

‘ಸಿಎಎ ಜಾರಿ ಬಗ್ಗೆ ವಿಪಕ್ಷಗಳೆಲ್ಲ ಸುಮ್ಮನೇ ಪುಕಾರು ಹಬ್ಬಿಸುತ್ತಿದೆ. ಆದರೆ ತಾಯಿ ಭಾರತಿ ಮೇಲೆ ನಂಬಿಕೆ ಇರುವವರಿಗೆ ಪೌರತ್ವ ನೀಡುವ ಸಿಎಎ ಎಂಬುದು ಮೋದಿ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. 

ಕೂಚ್‌ ಬೆಹಾರ್‌ (ಬಂಗಾಳ (ಏ.05): ‘ಸಿಎಎ ಜಾರಿ ಬಗ್ಗೆ ವಿಪಕ್ಷಗಳೆಲ್ಲ ಸುಮ್ಮನೇ ಪುಕಾರು ಹಬ್ಬಿಸುತ್ತಿದೆ. ಆದರೆ ತಾಯಿ ಭಾರತಿ ಮೇಲೆ ನಂಬಿಕೆ ಇರುವವರಿಗೆ ಪೌರತ್ವ ನೀಡುವ ಸಿಎಎ ಎಂಬುದು ಮೋದಿ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಪಶ್ಚಿಮ ಬಂಗಾಳದ ಕೋಚ್‌ ಬೆಹಾರ್‌ನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ,‘ಇಂಡಿಯಾ ಕೂಟದ ನಾಯಕರು ಎಂದಿಗೂ ಶ್ರಮಿಕರ ಒಳಿತಿಗೆ ಸ್ಪಂದಿಸಿಲ್ಲ. ನಾವು ಈಗ ಸಿಎಎ ಜಾರಿಗೆ ತಂದಿದ್ದು, ಇದರ ಬಗ್ಗೆಯೂ ಸುಳ್ಳುಸುದ್ದಿಗಳನ್ನು ಹಬ್ಬಿಸಿ ಜನರಲ್ಲಿ ತಪ್ಪು ಅಭಿಪ್ರಾಯ ಸೃಷ್ಟಿಸುತ್ತಿದೆ. 

ತಾಯಿ ಭಾರತಿ ಮೇಲೆ ನಂಬಿಕೆ ಇರಿಸಿದವರಿಗೆ ಪೌರತ್ವ ನೀಡುವುದು ಮೋದಿ ಗ್ಯಾರಂಟಿ’ ಎಂದರು. ವಿಪಕ್ಷಗಳು ಹಾಗೂ ಸಂದೇಶ್‌ ಖಾಲಿ ಬಗ್ಗೆ ಮಾತನಾಡಿದ ಪ್ರಧಾನಿ,‘ವಿಪಕ್ಷಗಳೆಲ್ಲ ಭ್ರಷ್ಟಾಚಾರವನ್ನು ರಕ್ಷಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ ನಾವು ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ. ನಮ್ಮ ಮುಂದಿನ ಅವಧಿಯಲ್ಲಿ ಭ್ರಷ್ಟರ ಶಿಕ್ಷೆಗೆ ಇನ್ನು ಕಠಿಣ ಕಾನೂನುಗಳನ್ನು ತರಲಾಗುತ್ತದೆ. ಬಂಗಾಳದಲ್ಲಿ ಸಂದೇಶ್‌ಖಾಲಿ ಪೀಡಕರನ್ನು ರಕ್ಷಿಸಲು ಟಿಎಂಸಿ ಸರ್ಕಾರ ಸರ್ವಪ್ರಯತ್ನಗಳನ್ನು ಮಾಡಿರುವುದನ್ನು ಇಡೀ ದೇಶವೇ ನೋಡಿದೆ. ನಾವು ಇಂಥಹವರಿಗೆ ಶಿಕ್ಷೆ ಕೊಡದೇ ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪಟ್ಟಣಂತಿಟ್ಟದಲ್ಲಿ ಪಟ್ಟಕ್ಕೆ ಆ್ಯಂಟನಿ v/s ಆ್ಯಂಟನಿ ಹಣಾಹಣಿ: ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್‌ ಸಾಹಸ

ಸಿಎಎ ಅಡಿ ಪೌರತ್ವ ಕೇಳುವವರ ಸುನ್ನತ್‌ ಪರೀಕ್ಷೆ ಮಾಡಿ: ‘ಕಳೆದ ವಾರ ಜಾರಿಗೊಳಿಸಲಾದ ಪೌರತ್ವ (ತಿದ್ದುಪಡಿ) ಕಾಯ್ದೆಯಡಿ ಪೌರತ್ವ ಬಯಸುವ ಪುರುಷನ ಧರ್ಮವನ್ನು ನಿರ್ಧರಿಸಲು ಸುನ್ನತಿ ಪರೀಕ್ಷೆ ನಡೆಯಬೇಕು’ ಎಂದು ಪ.ಬಂಗಾಳ ಬಿಜೆಪಿ ಹಿರಿಯ ನಾಯಕ ಹಾಗೂ ಮೇಘಾಲಯ ಮಾಜಿ ರಾಜ್ಯಪಾಲ ತಥಾಗತ ರಾಯ್ ಸಲಹೆ ನೀಡಿದ್ದಾರೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಟ್ವೀಟ್‌ ಮಾಡಿರುವ ಅವರು, ‘ಪುರುಷನು ಸುನ್ನತಿ ಮಾಡಿಸಿಕೊಂಡಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ದೊಡ್ಡ ವಿಷಯ. ಸಿಎಎ ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ಬಂದ ಮುಸ್ಲಿಮರಿಗೆ ಪೌರತ್ವಕ್ಕೆ ಅವಕಾಶವಿಲ್ಲ. ಅಲ್ಲಿಂದ ಬಂದ ಮುಸ್ಲಿಮೇತರರಿಗೆ ಮಾತ್ರ ಅವಕಾಶವಿದೆ. ಆದ್ದರಿಂದ, ಅನುಮಾನವಿದ್ದಲ್ಲಿ ಈ ಪರೀಕ್ಷೆ ಮಾಡಬಹುದು’ ಎಂದಿದ್ದಾರೆ. ರಾಯ್‌ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್‌ ಖಂಡಿಸಿದೆ. ಇದು ಮತಾಂಧತೆಯ ಅತಿರೇಕ ಎಂದು ಕಿಡಿಕಾರಿದೆ.

click me!