
ಲಖನೌ: ಒಬ್ಬನೇ ವ್ಯಕ್ತಿ 6 ಜಿಲ್ಲೆಗಳ, 6 ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೇ ಕಾಲಕ್ಕೆ ಎಕ್ಸರೇ ಟೆಕ್ನೀಶಿಯನ್ ಆಗಿ 9 ವರ್ಷಗಳಿಂದ ಮಾಡುತ್ತಿದ್ದ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಪ್ರಕರಣದ ಬೆನ್ನುಹತ್ತಿ ಹೋದ ಪೊಲೀಸರಿಗೆ ಇದರ ಹಿಂದೆ ದೊಡ್ಡ ವಂಚಕ ಜಾಲ ಇರುವುದು ಕಂಡುಬಂದಿದೆ. ಅರ್ಪಿತ್ ಹೆಸರಿನಲ್ಲಿ ಮಾತ್ರವಲ್ಲದೇ, ಹರ್ದೋಯ್ ಜಿಲ್ಲೆಯಲ್ಲಿ ಇನ್ನೊಂದು ಹುದ್ದೆಗೆ ಅಂಕಿತ್ ಸಿಂಗ್ ಹೆಸರಿನಲ್ಲಿ 6 ಜನರು, ಮೈನ್ಪುರಿಯಲ್ಲಿ ಒಂದೇ ಹೆಸರಿನ ಇಬ್ಬರು ಅಕ್ರಮವಾಗಿ ಸರ್ಕಾರಿ ಹುದ್ದೆಗೆ ಸೇರಿಕೊಂಡು ವೇತನ ಪಡೆಯುತ್ತಿದ್ದ ವಿಷಯವೂ ಬೆಳಕಿಗೆ ಬಂದಿದೆ.
ಆಗಿದ್ದೇನು?:
2016ರಲ್ಲಿ ಯುಪಿ ಸರ್ಕಾರವು, ಎಕ್ಸರೇ ತಂತ್ರಜ್ಞರ ಹುದ್ದೆಗೆ 403 ಅಭ್ಯರ್ಥಿಗಳನ್ನು ಆಯ್ಕೆ ಮಾಡಿತ್ತು. ಆಗ್ರಾ ಮೂಲದ ಅರ್ಪಿತ್ ಸಿಂಗ್ ಕೂಡ ಇವರಲ್ಲಿ ಒಬ್ಬರಾಗಿದ್ದರು. ವರ್ಷ ಕಳೆದಂತೆ ಇನ್ನೂ 5 ಜಿಲ್ಲೆಗಳಲ್ಲಿ ಅದೇ ರೀತಿಯ ಹುದ್ದೆಗೆ ಅರ್ಪಿತ್ ನೇಮಕವಾಗಿದ್ದರು. ಇದು ಹೇಗೆಂದರೆ, ಅರ್ಪಿತ್ರ ಅಸಲಿ ಆಧಾರ್ ಮಾಹಿತಿ, ನೇಮಕ ಪತ್ರ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ನಕಲಿಸಿ ವಂಚಕರ ತಂಡವೊಂದು ಇತರೆ 5 ಜಿಲ್ಲೆಗಳಲ್ಲಿ ಎಕ್ಸರೇ ತಂತ್ರಜ್ಞರ ಕೆಲಸ ಗಿಟ್ಟಿಸಿಕೊಂಡಿತ್ತು. ಅದಕ್ಕೆ ಪ್ರತಿ ತಿಂಗಳೂ ಪ್ರತಿ ಹುದ್ದೆಗೆ ಮಾಸಿಕ 69,595 ರು. ಸಂಬಳವನ್ನೂ ಪಡೆಯುತ್ತಿತ್ತು. ಹೀಗೆ ಇಷ್ಟು ವರ್ಷದಲ್ಲಿ ಒಟ್ಟು 4.5 ಕೋಟಿ ರು. ವೇತನವನ್ನು ವಂಚಕರ ತಂಡ ದೋಚಿದೆ.
ಬಯಲಾಗಿದ್ದು ಹೇಗೆ?:
ಇತ್ತೀಚೆಗೆ ಮಾನವ ಸಂಪನ್ಮೂಲ ನಿರ್ವಹಣೆಗೆ ರಾಜ್ಯ ಸರ್ಕಾರ ಬಳಸುವ ‘ಮಾನವ ಸಂಪದ ಪೋರ್ಟಲ್’ನಲ್ಲಿ ಆನ್ಲೈನ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಒಂದೇ ವೈಯಕ್ತಿಕ ಮಾಹಿತಿ ಇರುವ ಅರ್ಪಿತ್ ಹೆಸರಿನ 6 ಜನ ಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿ ಪೊಲೀಸರು ವಂಚಕರನ್ನು ಪತ್ತೆಹಚ್ಚಿ ಬಲೆ ಬೀಸುವ ಹೊತ್ತಿಗಾಗಲೇ ಅವರೆಲ್ಲ ಮನೆ ಬದಲಿಸಿ, ಫೋನ್ಗಳನ್ನು ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ