
ನವದೆಹಲಿ (ಮಾ.22): ಈ ಹಿಂದಿನ ಚುನಾವಣೆಗಳಲ್ಲಿ ಘೋಷಿಸಿದ್ದ ಪ್ರಮುಖ ಭರವಸೆಗಳನ್ನು ಈಡೇಸಿರುವ ಭಾರತೀಯ ಜನತಾ ಪಕ್ಷ, 2024ರ ಲೋಕಸಭಾ ಚುನಾವಣೆಗೆ ತನ್ನ ಮುಂದಿನ ಮಹತ್ವಕಾಂಕ್ಷಿ ಯೋಜನೆಗಳಾದ ‘ಒಂದು ದೇಶ, ಒಂದು ಚುನಾವಣೆ’ ಮತ್ತು ‘ಏಕರೂಪ ನಾಗರಿಕ ಸಂಹಿತೆ’ಯನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಮುಂಬರುವ ಲೋಕಸಭಾ ಚುನಾವಣಾ ಪ್ರಣಾಳಿಕೆ ಏನೇನು ಅಂಶಗಳನ್ನು ಒಳಗೊಂಡಿರಬೇಕು ಎಂಬ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿರುವ ಬಿಜೆಪಿ ಶೀಘ್ರವೇ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲು ಸಜ್ಜಾಗಿದೆ.
ಇದರಲ್ಲಿ ಸಂಸತ್, ರಾಜ್ಯಗಳ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಒಂದೇ ಬಾರಿ ಚುನಾವಣೆ ನಡೆಸುವ ಯೋಜನೆಯನ್ನು 2029ರಿಂದ ಜಾರಿಗೆ ತರುವ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಮಾಜಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಮತ್ತು ಕೇಂದ್ರ ಕಾನೂನು ಆಯೋಗ ಈಗಾಗಲೇ ಈ ಸಂಬಂಧದ ವರದಿಯನ್ನು ಕೇಂದ್ರಕ್ಕೆ ಸಲ್ಲಿಕೆ ಮಾಡಿದೆ. ಎರಡೂ ಸಮಿತಿಗಳು ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಶಿಫಾರಸು ಮಾಡಿವೆ. ಹೀಗಾಗಿ ಈ ಯೋಜನೆ ಏಕೆ ಅಗತ್ಯ ಎಂಬುದನ್ನು ಉದಾಹರಣೆ ಸಹಿತ ಪ್ರಸ್ತಾಪಿಸಿ ಅದನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಸಾಧ್ಯತೆ ಇದೆ.
ಬಿಜೆಪಿ, ಜೆಡಿಎಸ್ನ್ನು ಮರೆತು ಬಿಡಿ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಕೂಡಾ ಈ ಅಂಶ ಇತ್ತಾದರೂ, ಅದು ಖಚಿತವಾಗಿ ಜಾರಿ ಬಗ್ಗೆ ಹೇಳಿರಲಿಲ್ಲ. ಆಗ ಈ ಕುರಿತು ಸಹಮತ ಮೂಡಿಸಲು ಪ್ರಯತ್ನಿಸುವ ಭರವಸೆ ನೀಡಲಾಗಿತ್ತು. ಇನ್ನು ಎಲ್ಲಾ ಧರ್ಮಗಳಿಗೂ ವಿವಾಹ, ವಿಚ್ಛೇದನ, ಆಸ್ತಿ ಮೊದಲಾದ ವಿಷಯಗಳಲ್ಲಿ ಒಂದೇ ಕಾನೂನು ಅನ್ವಯಿಸಲು ಅವಕಾಶ ಮಾಡಿಕೊಡುವ ಏಕರೂಪ ನಾಗರಿಕ ಸಂಹಿತೆಯನ್ನು ಕೂಡಾ ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿಸಲಿದೆ ಎನ್ನಲಾಗಿದೆ. ಈಗಾಗಲೇ ಬಿಜೆಪಿ ಆಡಳಿತದ ಉತ್ತರಾಖಂಡದಲ್ಲಿ ಈ ಯೋಜನೆ ಜಾರಿಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ