ಇಡಿ, ಸಿಬಿಐ ಕುರಿತು ಅಮಿತ್‌ ಶಾ ಮಹತ್ವದ ಹೇಳಿಕೆ, ಅದಾನಿ-ಹಿಂಡೆನ್‌ಬರ್ಗ್‌ ಕುರಿತಾಗಿ ಏನಂದ್ರು?

By Santosh NaikFirst Published Mar 18, 2023, 3:59 PM IST
Highlights

ಅದಾನಿ ಗ್ರೂಪ್‌ ಕುರಿತಾಗಿ ನಡೆಯುತ್ತಿರುವ ತನಿಖೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಮಿತ್‌ ಶಾ, ಈಗಾಗಲೇ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ. ಯಾರಲ್ಲಿ ಏನು ಸಾಕ್ಷಿಗಳಿದೆಯೋ ಎಲ್ಲವನ್ನೂ ಅವರಿಗೆ ನೀಡಿ. ತಪ್ಪು ಮಾಡಿವರು ಯಾರೇ ಆಗಿರಲಿ ಅವರನ್ನು ಬಿಡಬಾರದು. ಪ್ರತಿಯೊಬ್ಬರು ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಂಬಿಕೆ ಇಡಬೇಕು ಎಂದಿದ್ದಾರೆ.

ನವದೆಹಲಿ (ಮಾ.18): ದೇಶದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಂಥ ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಎರಡು ಕೇಸ್‌ಗ ಹೊರತಾಗಿ ಉಳಿದೆಲ್ಲಾ ಕೇಸ್‌ಗಳು ಯುಪಿಎ ಸರ್ಕಾರ ಅವಧಿಯಲ್ಲಿ ದಾಖಲಾಗಿರುವಂಥವು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ತನಿಖಾ ಸಂಸ್ಥೆಗಳು ಏನೇ ಮಾಡಿದರೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು. ಈ ಅಧಿಕಾರ ಜನರಿಗೆ ಇದೆ ಎಂದು ಹೇಳಿದರು. 2017 ರಲ್ಲಿ, ಉತ್ತರ ಪ್ರದೇಶ ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್‌ನ ದೊಡ್ಡ ಮಹಿಳಾ ನಾಯಕಿಯೊಬ್ಬರು ನಮ್ಮ ಮೇಲೆ ಭ್ರಷ್ಟಾಚಾರ ಆರೋಪಗಳಿದ್ದರೆ, ಈ ಕುರಿತಾಗಿ ಏಕೆ ತನಿಖೆ ನಡೆಸಲಿಲ್ಲ ಎಂದು ಕೇಳಿದ್ದರು. ಅವರು ನಮ್ಮನ್ನು ಪ್ರಶ್ನೆ ಮಾಡಿದ್ದರು. ಈಗ ಅವರ ವಿರುದ್ಧವೇ ತನಿಖೆಗೆ ಹೋದಾಗ ಅವರ ಆಕ್ರಂದನ ಕೇಳಲಾಗುತ್ತಿಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ. ಈ ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕಿಂತ ಮೇಲಲ್ಲ ಮತ್ತು ಯಾವುದೇ ನೋಟಿಸ್, ಎಫ್‌ಐಆರ್ ಮತ್ತು ಚಾರ್ಜ್ ಶೀಟ್ ಅನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು ಎಂದರು.

ತನಿಖಾ ಸಂಸ್ಥೆಗಳ ಬಗ್ಗೆ ಆರೋಪ ಮಾಡುತ್ತಿರುವ ವ್ಯಕ್ತಿಗಳಿಗೆ ನಾನು ಕೇಳೋದು ಒಂದೇ ಪ್ರಶ್ನೆ. ನೀವು ನ್ಯಾಯಾಲಯಕ್ಕೆ ಹೋಗುವ ಬದಲು ಸಾರ್ವಜನಿಕವಾಗಿ ಯಾಕೆ ಕೂಗಾಡುತ್ತಿದ್ದೀರಿ? ಯಾರ ಮೇಲಾದರೂ ಭ್ರಷ್ಟಾಚಾರದ ಆರೋಪವಿದ್ದರೆ ತನಿಖೆಯಾಗಬೇಕಲ್ಲವೇ ಇದೇ ಮಾತನ್ನು ಜನರಿಗೂ ಕೇಳಬೇಕೆಂದಿದ್ದೇವೆ. ಎರಡು ಪ್ರಕರಣ ಹೊರತುಪಡಿಸಿ ತನಿಖಾ ಸಂಸ್ಥೆಗಳು ತನಿಖೆ ಮಾಡುತ್ತಿರುವ ಎಲ್ಲಾ ಪ್ರಕರಣಗಳು ಯುಪಿಎ ಅವಧಿಯಲ್ಲಿ ದಾಖಲಾಗಿತ್ತು. ಇದನ್ನು ಮೋದಿ ಸರ್ಕಾರದ ಅವಧಿಯಲ್ಲಿ ಮಾಡಿದ್ದಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ ₹ 12 ಲಕ್ಷ ಕೋಟಿ ಮೊತ್ತದ ಹಗರಣಗಳ ಬಗ್ಗೆ ಆರೋಪಗಳು ಬಂದಾಗ, ಪರಿಸ್ಥಿತಿಯನ್ನು ಶಾಂತವಾಗಿರಿಸಲು ಸರ್ಕಾರ ಸಿಬಿಐ ಮೂಲಕ ಪ್ರಕರಣವನ್ನು ದಾಖಲಿಸಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣವಿದ್ದರೆ ಇಡಿ ಆ ಪ್ರಕರಣದ ತನಿಖೆಗೆ ಬದ್ಧವಾಗಿರುತ್ತದೆ ಎಂದು ಹೇಳಿದರು.
ತನಿಖಾ ಸಂಸ್ಥೆಗಳು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುತ್ತಿವೆ ಎಂಬ ಆರೋಪಗಳ ಬಗ್ಗೆ ಉತ್ತರಿಸಿದ ಅವರು, 'ವಿರೋಧ ಪಕ್ಷಗಳ ನಾಯಕರು ಕೋರ್ಟ್‌ಗೆ ಹೋಗಬಹುದಲ್ಲ.ಅವರನ್ನು ತಡೆದವರು ಯಾರು? ಅವರ ಪಕ್ಷದಲ್ಲಿ ನಮಗಿಂತ ಉತ್ತಮ ವಕೀಲರು ಇದ್ದಾರೆ' ಎಂದು ಕಾಂಗ್ರೆಸ್‌ ಪಕ್ಷವನ್ನು ಹೇಳದೇ ಆ ಪಕ್ಷಕ್ಕೆ ತಿವಿದರು. ಏಜೆನ್ಸಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿವೆ. ನೀವು ಕಾನೂನು ಪಾಲಿಸಿ. ಅದೊಂದನ್ನೇ ನಾನು ಹೇಳುತ್ತಿದ್ದೇನೆ. ಎಲ್ಲರಿಗೂ ಇರುವುದು ಅದೊಂದೇ ಮಾರ್ಗ ಎಂದರು. 

ಸಿಬಿಐ, ಇಡಿ ಮತ್ತು ಇತರ ತನಿಖಾ ಸಂಸ್ಥೆಗಳ ಮೂಲಕ ಸರ್ಕಾರ ತನ್ನ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್, ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ, ಆರ್‌ಜೆಡಿ ನಾಯಕ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿದಂತೆ ಹಲವು ನಾಯಕರ ವಿರುದ್ಧ ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್‌ ಈಗಾಗಲೇ ಜೈಲಿನಲ್ಲಿದ್ದಾರೆ.

 

ಗೃಹ ಸಚಿವ ಅಮಿತ್‌ ಶಾ ಭದ್ರತೆಯಲ್ಲಿ ಲೋಪ, ಬೆಂಗಾಲು ವಾಹನ ಹೋಗುವಾಗ ನುಗ್ಗಿದ ಖಾಸಗಿ ಕಾರು!

ಅದಾನಿ ಗ್ರೂಪ್ ವಿರುದ್ಧದ ತನಿಖೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು,  ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿದೆ ಮತ್ತು ಪ್ರತಿಯೊಬ್ಬರೂ ಹೋಗಿ ತಮ್ಮ ಬಳಿ ಇರುವ ಪುರಾವೆಗಳನ್ನು ಈ ಸಮಿತಿಯ ಮುಂದೆ ಸಲ್ಲಿಸಬೇಕು ಎಂದರು. ಎಷ್ಟೇ ದೊಡ್ಡ ವ್ಯಕ್ತಿ ಆಗಿರಲಿ, ತಪ್ಪು ಮಾಡಿದ್ದರೆ ಯಾರನ್ನೂ ಬಿಡಬಾರದು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ನಂಬಿಕೆ ಇಡಬೇಕು ಎಂದರು. ಆಧಾರರಹಿತ ಆರೋಪಗಳನ್ನು ಯಾರೂ ಕೂಡ ಮಾಡಬಾರದು. ಇದು ಬಹಳ ಹೊತ್ತು ಉಳಿಯಲು ಸಾಧ್ಯವಿಲ್ಲ ಎಂದರು.

ಮೋದಿ ಆಯ್ತು, ಈಗ ಅಮಿತ್‌ ಶಾ ಲಿಂಗಾಯತ ದಾಳ

ಮಾರುಕಟ್ಟೆ ನಿಯಂತ್ರಕ ಸೆಬಿ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅಫಿಡವಿಟ್‌ನಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಗೃಹ ಸಚಿವರು ಹೇಳಿದರು. "ಸುಪ್ರೀಂ ಕೋರ್ಟ್ ತನ್ನ ತನಿಖೆಯನ್ನು ಮುಂದುವರಿಸಲು ಸೆಬಿಗೆ ಹೇಳಿದೆ, ಇದು ಇತರ ತನಿಖೆಗೆ ಸಮಾನಾಂತರವಾಗಿದೆ ಮತ್ತು ಅದನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುತ್ತದೆ. ಸೆಬಿಗೆ ಈಗಾಗಲೇ ತಿಳಿಸಲಾಗಿದೆ ಮತ್ತು ತಾನು ತನಿಖೆ ನಡೆಸುತ್ತಿದೆ ಎಂದು ಸೆಬಿ ತಿಳಿಸಿದೆ" ಎಂದರು.

click me!