
ರಾಯ್ಪುರ (ಡಿಸೆಂಬರ್ 1, 2023): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಇಂದು ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಗೆದ್ದರೆ ಭಾರತ ಸರಣಿ ಗೆಲ್ಲಲಿದೆ. ಆದರೆ, ಈ ನಿರ್ಣಾಯಕ ಪಂದ್ಯಕ್ಕೆ ಕೆಲವೇ ಗಂಟೆಗಳಿರುವಾಗ, ಕ್ರೀಡಾಂಗಣದ ಕೆಲವು ಭಾಗಗಳಲ್ಲಿ ವಿದ್ಯುತ್ ಇಲ್ಲ.
ಇದಕ್ಕೆ ಕಾರಣ 2009 ರಿಂದ ಇವರು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ತಿಳಿದುಬಂದಿದೆ. ಕ್ರೀಡಾಂಗಣಕ್ಕೆ 3.16 ಕೋಟಿ ರೂ. ಕರೆಂಟ್ ಬಿಲ್ ಬಾಕಿ ಇದ್ದು, ಈ ಹಿನ್ನೆಲೆ 5 ವರ್ಷಗಳ ಹಿಂದೆಯೇ ಸ್ಟೇಡಿಯಂನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಛತ್ತೀಸ್ಗಢ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಮೇರೆಗೆ ತಾತ್ಕಾಲಿಕ ಸಂಪರ್ಕವನ್ನು ಸ್ಥಾಪಿಸಲಾಗಿದ್ದರೂ, ಅದು ಪ್ರೇಕ್ಷಕರ ಗ್ಯಾಲರಿ ಮತ್ತು ಬಾಕ್ಸ್ಗಳನ್ನು ಮಾತ್ರ ಒಳಗೊಂಡಿದೆ. ಈ ಹಿನ್ನೆಲೆ ಇಂದಿನ ಪಂದ್ಯದ ವೇಳೆ ಫ್ಲಡ್ಲೈಟ್ಗಳನ್ನು ಜನರೇಟರ್ ಬಳಸಿ ಓಡಿಸಬೇಕಾಗುತ್ತದೆ ಎನ್ನಲಾಗಿದೆ.
ಇದನ್ನು ಓದಿ: ಇಂದು ಭಾರತ-ಆಸೀಸ್ 4ನೇ ಟಿ20; ಕಾಂಗರೂ ಪಡೆ ಗೆದ್ದರಷ್ಟೇ ಸರಣಿ ಕನಸು ಜೀವಂತ
ಇನ್ನು, ಈ ಸಂಬಂಧ ಮಾಹಿತಿ ನೀಡಿದ ರಾಯ್ಪುರ ಗ್ರಾಮಾಂತರ ವೃತ್ತದ ಉಸ್ತುವಾರಿ ಅಶೋಕ್ ಖಂಡೇಲ್ವಾಲ್, ಸ್ಟೇಡಿಯಂನ ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯವನ್ನು ಹೆಚ್ಚಿಸಲು ಕಾರ್ಯದರ್ಶಿ ಕ್ರಿಕೆಟ್ ಸಂಸ್ಥೆಯು ಅರ್ಜಿ ಸಲ್ಲಿಸಿದೆ ಎಂದು ಹೇಳಿದ್ದಾರೆ. ಪ್ರಸ್ತುತ, ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯವನ್ನು 200 ಕೆ.ವಿ. ಯಿಂದ 1 ಸಾವಿರ ಕೆ.ವಿ.ಗೆ ಮೇಲ್ದರ್ಜೆಗೇರಿಸಲು ಅರ್ಜಿ ಸಲ್ಲಿಕೆಯಾಗಿದ್ದರೂ, ಈ ಕಾಮಗಾರಿ ಆರಂಭವಾಗಿಲ್ಲ.
2018ರಲ್ಲಿ ಹಾಫ್ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ ಅಥ್ಲೀಟ್ಗಳು ಸ್ಟೇಡಿಯಂನಲ್ಲಿ ವಿದ್ಯುತ್ ಪೂರೈಕೆ ಇಲ್ಲ ಎಂದು ತಿಳಿದಾಗ ಕೋಲಾಹಲ ಉಂಟಾಯಿತು. ನಂತರ 2009 ರಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ ಮತ್ತು ಬಾಕಿ ಬಿಲ್ 3.16 ಕೋಟಿ ರೂ. ಗೆ ಏರಿದೆ ಎಂದು ಘೋಷಿಸಲಾಯಿತು. ಕ್ರೀಡಾಂಗಣದ ನಿರ್ಮಾಣದ ನಂತರ, ಅದರ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯೂಡಿ) ಗೆ ಹಸ್ತಾಂತರಿಸಲಾಗಿದ್ದು, ಉಳಿದ ವೆಚ್ಚವನ್ನು ಕ್ರೀಡಾ ಇಲಾಖೆ ಭರಿಸಬೇಕಾಗಿತ್ತು. ಈಗ ವಿದ್ಯುತ್ ಬಿಲ್ ಪಾವತಿಯಾಗದ ಕಾರಣ ಎರಡು ಇಲಾಖೆಗಳು ಪರಸ್ಪರ ಆರೋಪ ಮಾಡುತ್ತಿವೆ.
ಇಂಡೋ-ಆಸೀಸ್ ಬೆಂಗಳೂರು ಟಿ20 ಪಂದ್ಯದ ಟಿಕೆಟ್ ಮಾರಾಟ ಗೊಂದಲ..!
ಬಾಕಿ ಪಾವತಿಗಾಗಿ ವಿದ್ಯುತ್ ಕಂಪನಿಯು ಪಿಡಬ್ಲ್ಯುಡಿ ಮತ್ತು ಕ್ರೀಡಾ ಇಲಾಖೆಗೆ ಹಲವು ಬಾರಿ ನೋಟಿಸ್ ಕಳುಹಿಸಿದ್ದರೂ ಹಣ ಕಟ್ಟಿಲ್ಲ. 2018ರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರವೂ ಕ್ರೀಡಾಂಗಣದಲ್ಲಿ 3 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದೆ.
ಈ ಸಮಸ್ಯೆ ಬಗ್ಗೆ ಮಾತನಾಡಿದ ಛತ್ತೀಸ್ಗಢ ರಾಜ್ಯ ಕ್ರಿಕೆಟ್ ಸಂಘದ ಮಾಧ್ಯಮ ಸಂಯೋಜಕ ತರುಣೇಶ್ ಸಿಂಗ್ ಪರಿಹಾರ್, ಸಮಸ್ಯೆ ಎದುರಾಗುವುದರಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಸಂಶಯವಿದೆ. ದೊಡ್ಡ ಪಂದ್ಯಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಜನರೇಟರ್ ಬಳಸುತ್ತಾರೆ ಎಂದರು. ಹಾಗೂ, ಸ್ಟೇಡಿಯಂ ದೀಪಗಳಿಗೆ ಸಂಬಂಧಿಸಿದಂತೆ, ಎಷ್ಟು ಬಿಲ್ ಬಾಕಿ ಇದೆ ಎಂದು ನನಗೆ ತಿಳಿದಿಲ್ಲ. ಆದರೆ CSCS ಹೆಸರಿನಲ್ಲಿ ತಾತ್ಕಾಲಿಕ ಸಂಪರ್ಕವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ