
ಚಂಡೀಘಡ(ಸೆ.23) ಭಾರತ ಹಾಗೂ ಕೆನಡಾ ನಡುವಿನ ಸಂಬಂಧ ಹಾಳುಮಾಡಿರುವ ಖಲಿಸ್ತಾನಿ ಉಗ್ರರು ಮತ್ತೆ ಬಾಲ ಬಿಚ್ಚಲು ಆರಂಭಿಸಿದ್ದಾರೆ. ಇತ್ತ ಕೆನಡಾ ಪ್ರಧಾನಿ ಜಸ್ಟಿನ್ ಟ್ರಡೋ ಕೂಡ ಉಗ್ರ ಖಲಿಸ್ತಾನಿಗಳ ಬೆಂಬಲಕ್ಕೆ ನಿಂತಿದ್ದಾರೆ. ಈ ಬೆಳವಣಿಗೆ ನಡುವೆ ಭಾರತ ಖಲಿಸ್ತಾನಿ ಉಗ್ರರ ಹೆಡೆಮುರಿ ಕಟ್ಟಲು ಕಾರ್ಯಾಚರಣೆ ಆರಂಭಿಸಿದೆ. ಖಲಿಸ್ತಾನ್ ಉಗ್ರ ಬೆಂಬಲಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಗುರುಪತ್ವಂತ್ ಪನ್ನುನ್ ಮೇಲೆ ಭಾರತ ಕ್ರಮ ಕೈಗೊಂಡಿದೆ. ಕೆನಡಾದಲ್ಲಿ ಕುಳಿತು ಭಾರತಕ್ಕೆ ಪದೇ ಪದೇ ಎಚ್ಚರಿಕೆ ನೀಡುತ್ತಿರುವ ಹಾಗೂ ಪಾಕಿಸ್ತಾನ ಸೇರಿದಂತೆ ಹಲವು ಉಗ್ರ ಸಂಘಟನೆಗಳಿಂದ ಆರ್ಥಿಕ ನೆರವು ಪಡೆಯುತ್ತಿರುವ ಗುರುಪತ್ವಂತ್ ಪನ್ನನ್ನು ಭಾರತದ ಆಸ್ತಿಯನ್ನು ಎನ್ಐಎ ಮುಟ್ಟುಗೋಲು ಹಾಕಿದೆ.
ಚಂಢಿಘಡಜಲ್ಲಿರುವ ಕೃಷಿ ಭೂಮಿ, ಅಮೃತಸರದಲ್ಲಿರುವ ಪನ್ನುನ್ ಮನೆಯನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡಿದೆ. ಇಂದು ದಿಢೀರ್ ಎನ್ಐಎ ಅಧಿಕಾರಿಗಳು ಪನ್ನುನ್ ಪಂಜಾಬ್ನ ನಿವಾಸ ಹಾಗೂ ಕೃಷಿ ಭೂಮಿ ಮೇಲೆ ದಾಳಿ ಮಾಡಿದ್ದಾರೆ. ಬಳಿಕ ಉಗ್ರಚಟುವಟಿಕೆ, ಭಾರತ ವಿರೋಧಿ ಚಟುವಟಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಎನ್ಐಎ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿರುವ ಗುರುಪತ್ವಂತ್ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಎನ್ಐಎ ಅಧಿಕಾರಿಗಳು ಬೋರ್ಡ್ ಹಾಕಿದ್ದಾರೆ.
ಖಲಿಸ್ತಾನಿಗಳ ಪರ ನಿಂತ ಕೆನಡಾ ಪ್ರಧಾನಿಗೆ ಮಂಗಳಾರತಿ, ದ್ವಿಪಕ್ಷೀಯ ಸಭೆಯಲ್ಲಿ ಮೋದಿ ವಾರ್ನಿಂಗ್!
ಕೆನಾಡ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತದ ಗಂಭೀರ ಆರೋಪ ಮಾಡಿದ್ದರು. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪ ಕೋಲಾಹಲ ಸೃಷ್ಟಿಸಿದೆ. ಈ ಹೇಳಿಕೆ ಬೆನ್ನಲ್ಲೇ ಭಾರತ ಆರೋಪ ಅಲ್ಲಗೆಳೆದು ಕೆನಾಡ ರಾಯಭಾರಿ ಅಧಿಕಾರಿಗಳನ್ನು ಕರೆಸಿ ಛೀಮಾರಿ ಹಾಕಿತ್ತು. ಇತ್ತ ಕೆನಡಾದಲ್ಲಿ ಕೆಂಡಾಮಂಡಲವಾದ ಉಗ್ರ ಗುರುಪತ್ವಂತ್ ಪನ್ನನ್, ಕೆನಡಾದಲ್ಲಿನ ಭಾರತೀಯರಿಗೆ ಎಚ್ಚರಿಕೆ ನೀಡಿದ್ದರು. ತಕ್ಷಣವೇ ಹಿಂದೂಗಳು ಕೆನಡಾ ಬಿಟ್ಟು ತೊಲಗಲು ಎಚ್ಚರಿಕೆ ನೀಡಿದ್ದ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದ.
ಕೆನಡಾದಲ್ಲಿನ ಭಾರತೀಯ ಮೂಲದ ಹಿಂದೂಗಳು ಕೂಡಲೇ ದೇಶ ಬಿಟ್ಟು ತೊರೆಯಬೇಕು ಎಂದು ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆ ‘ಸಿಖ್ಸ್ ಫಾರ್ ಜಸ್ಟೀಸ್’ ಎಸ್ಎಫ್ಜೆ ಬೆದರಿಕೆ ಹಾಕಿತ್ತು. ‘ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಹಿಂದೂಗಳು ಸಂಭ್ರಮಿಸಿದ್ದಾರೆ. ಅಲ್ಲದೆ, ಹಿಂಸಾಚಾರಕ್ಕೆ ಉತ್ತೇಜನ ನೀಡಿದ್ದಾರೆ. ಹೀಗಾಗಿ ಅವರು ಕೂಡಲೇ ದೇಶ ಬಿಡಬೇಕು’ ಎಂದು ಎಸ್ಎಫ್ಜೆ ಕಾನೂನು ಸಲಹೆಗಾರ ಗುರುಪತ್ವಂತ್ ಪನ್ನುನ್ ವಿಡಿಯೋ ಹೇಳಿಕೆ ನೀಡಿದ್ದಾನೆ. ಪನ್ನೂನ್ ಭಯೋತ್ಪಾದಕ ಎಂದು ಭಾರತ ಈಗಾಗಲೇ ಘೋಷಣೆ ಮಾಡಿದೆ.
ಖಲಿಸ್ತಾನ ಉಗ್ರ ಪನ್ನು ಸತ್ತಿಲ್ಲ, ಮೋದಿ-ಶಾ ಸೇರಿ ಹಲವರಿಗೆ ಕೊಲೆ ಬೆದರಿಕೆ ವಿಡಿಯೋ ಬಹಿರಂಗ!
ಈ ನಡುವೆ ‘ಸೌಹಾರ್ದತೆಗಾಗಿ ಕೆನಡಾದ ಹಿಂದೂಗಳು’ ಸಂಘಟನೆ ವಕ್ತಾರ ವಿಜಯ್ ಜೈನ್, ಪನ್ನುನ್ ಬೆದರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ‘ನಾವು ಕೆನಡಾದಲ್ಲಿ ಈಗ ಸಂಪೂರ್ಣವಾಗಿ ಹಿಂದೂ ವಿರೋಧಿ ಮನೋಭಾವ ನೋಡುತ್ತಿದ್ದೇವೆ. ನಿಜ್ಜರ್ ಹತ್ಯೆಯಲ್ಲಿ ಭಾರತವು ಭಾಗಿಯಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನೀಡಿರುವ ಹೇಳಿಕೆಗಳು ಖಲಿಸ್ತಾನಿಗಳ ಭಾವನೆಗಳನ್ನು ಪ್ರಚೋದಿಸಬಹುದು. ಇದು 1985ರಲ್ಲಿ ಕೆನಡಾದಲ್ಲಿ ಆದ ಹಿಂದೂ ಹತ್ಯೆಯಂಥ ಘಟನೆಗಳು ಪುನರಾವರ್ತನೆ ಆಗಲು ಇದು ಕಾರಣ ಆಗಬಹುದು’ ಎಂದು ಆತಂಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ