ಭಾರತೀಯ ಸೇನೆ ಬಗ್ಗೆ ಕಿರಿಕ್‌ ಆಯ್ತು: ಈಗ 100 ಒಪ್ಪಂದ ಮರುಪರಿಶೀಲನೆಗೆ ಮಾಲ್ಡೀವ್ಸ್‌ ಸರ್ಕಾರ ನಿರ್ಧಾರ

By Kannadaprabha NewsFirst Published Nov 20, 2023, 9:34 AM IST
Highlights

ಶನಿವಾರ ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಝು ಹಾಗೂ ಕೇಂದ್ರ ಸಚಿವ ಕಿರಣ್‌ ರಿಜಿಜು ನಡುವೆ ನಡೆದ ಸಭೆಯಲ್ಲಿ ಮುಯಿಝು ಈ ವಿಷಯವನ್ನು ಅಧಿಕೃತವಾಗಿ ಸೂಚಿಸಿದ್ದರು. ಇದರಿಂದಾಗಿ ಭಾರತಕ್ಕೆ ಹಿಂದೂ ಮಹಾಸಾಗರದಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ.

ಮಾಹೆ (ನವೆಂಬರ್ 20, 2023): ನಿಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಭಾರತಕ್ಕೆ ಸೂಚಿಸಿದ್ದ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್‌ ಮುಯಿಝು, ಇದೀಗ ಹಿಂದಿನ ಅಧ್ಯಕ್ಷ ಸೋಲಿಹ್‌ ಅವಧಿಯಲ್ಲಿ ಭಾರತದೊಂದಿಗೆ ಮಾಡಿಕೊಂಡಿದ್ದ 100 ಒಪ್ಪಂದಗಳನ್ನೂ ಮರು ಪರಿಶೀಲನೆ ಮಾಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಮುಯಿಝು ಅವರ ಕಾರ್ಯದರ್ಶಿ ಮೊಹಮ್ಮದ್‌ ಫಿರುಝುಲ್‌ ಅಬ್ದುಲ್‌, ‘ಭಾರತ ಸರ್ಕಾರದ ಜೊತೆಗೆ ಈ ಹಿಂದೆ ಮಾಡಿಕೊಂಡಿದ್ದ 100ಕ್ಕೂ ಹೆಚ್ಚು ಒಪ್ಪಂದಗಳನ್ನು ಮರುಪರಿಶೀಲನೆ ನಡೆಸಲಾಗುತ್ತದೆ. ಮಾಲ್ಡೀವ್ಸ್‌ ದೇಶವನ್ನು ಸ್ವತಂತ್ರವಾಗಿಡುವ ನಿಟ್ಟಿನಲ್ಲಿ ವಿದೇಶಿ ಸೇನೆಯನ್ನು ಹೊರಕಳಿಸಲಾಗುತ್ತದೆ ಎಂದು ಹೇಳಿದ್ದ ಮುಯಿಝು ಮಾತಿನಂತೆ ದೇಶದಲ್ಲಿರುವ 77 ಭಾರತೀಯ ಸೈನಿಕರನ್ನು ಮರಳಿ ಕಳಿಸಲಾಗುತ್ತದೆ‘ ಎಂದರು.

ಶನಿವಾರ ಅಧ್ಯಕ್ಷ ಮುಯಿಝು ಹಾಗೂ ಕೇಂದ್ರ ಸಚಿವ ಕಿರಣ್‌ ರಿಜಿಜು ನಡುವೆ ನಡೆದ ಸಭೆಯಲ್ಲಿ ಮುಯಿಝು ಈ ವಿಷಯವನ್ನು ಅಧಿಕೃತವಾಗಿ ಸೂಚಿಸಿದ್ದರು. ಇದರಿಂದಾಗಿ ಭಾರತಕ್ಕೆ ಹಿಂದೂ ಮಹಾಸಾಗರದಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ.

ಇದನ್ನು ಓದಿ: ಸೇನೆ ಹಿಂಪಡೀರಿ: ಮಾಲ್ಡೀವ್ಸ್ ಅಧ್ಯಕ್ಷನಿಂದ ಭಾರತಕ್ಕೆ ಸೂಚನೆ :ಹಳೆಯ ನೆರವು ಮರೆತ ಮುಯಿಜ್

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ನಿಮ್ಮ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ ಭಾರತಕ್ಕೆ ಸೂಚಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರತಿನಿಧಿಯಾಗಿ ಆಗಮಿಸಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಮೂಲಕ ಈ ಸಂದೇಶ ರವಾನಿಸಲಾಗಿದೆ. ಈ ಹಿಂದೆ ಸುನಾಮಿ, ಆಂತರಿಕ ಸಂಘರ್ಷ ಮೊದಲಾದ ಸಂದರ್ಭಗಳಲ್ಲಿ ಭಾರತವೇ ಮೊದಲನೆಯದಾಗಿ ಮಾಲ್ಡೀವ್ಸ್‌ಗೆಗೆ ವಿವಿಧ ರೀತಿಯ ನೆರವು ನೀಡಿತ್ತು. ಆದರೆ ಅದನ್ನು ಮರೆತಿರುವ ಮಾಲ್ಡೀವ್ಸ್‌ ನೂತನ ಅಧ್ಯಕ್ಷ ಚೀನಾ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಹಿಂದೂ ಮಹಾಸಾಗರದ ಆಯಕಟ್ಟಿನ ಪ್ರದೇಶದಲ್ಲಿರುವ ಮಾಲೀವ್‌ಗೆ ಭಾರತ ಹಲವು ಸೇನಾ ಕಾಪ್ಟರ್, ಕಣ್ಣಾವಲು ವಿಮಾನಗಳನ್ನು ಉಡುಗೊರೆ ನೀಡಿದೆ. ಇದರ ನಿರ್ವಹಣೆಗೆಂದೇ ಅಂದಾಜು 75 ಯೋಧರು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ಇದೀಗ ಇದು ಭದ್ರತೆಗೆ ಅಪಾಯ ಎಂಬ ಕಾರಣ ನೀಡಿದೆ.

ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಭಾರತದ ಸೇನೆಯ ಸಹಾಯ ಬೇಕಿಲ್ಲ, ನಿಯೋಜಿತ ಅಧ್ಯಕ್ಷನ ಮಾತು!

click me!