ಗಾಂಧಿನಗರ: ಅಹಮದಾಬಾದ್ ವಿಮಾನ ದುರಂತಕ್ಕೆ ಬಲಿಯಾದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹದ ಡಿಎನ್ಎ ಮಾದರಿಗಳು ಅವರ ಕುಟುಂಬಸ್ಥರ ಡಿಎನ್ಎ ಮಾದರಿಗಳೊಂದಿಗೆ ಹೊಂದಿಕೆಯಾಗಿವೆ.
ಅದನ್ನು ಅವರ ಕುಟುಂಸ್ಥರಿಗೆ ಹಸ್ತಾಂತರಿಸಲಾಗಿದೆ ಹಾಗೂ ಸೋಮವಾರ ರಾಜಕೋಟ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.‘ಭಾನುವಾರ ಬೆಳಿಗ್ಗೆ 11.10ಕ್ಕೆ ನಡೆಸಿದ ಪರೀಕ್ಷೆಯಲ್ಲಿ ರೂಪಾನಿಯವರ ಮೃತದೇಹದ ಡಿಎನ್ಎ ಮಾದರಿ ಅವರ ಕುಟುಂಬಸ್ಥರ ಡಿಎನ್ಎ ಮಾದರಿಯೊಂದಿಗೆ ಹೊಂದಿಕೆಯಾಗಿದೆ’ ಎಂದು ಸರ್ಕಾರ ಹೇಳಿದೆ.
ವಿಮಾನ ದುರಂತ: 47 ಶವಗಳ ಗುರುತು ಪತ್ತೆ, 24 ಶವಗಳ ಹಸ್ತಾಂತರ
ಅಹಮದಾಬಾದ್: ಜೂ.12ರಂದು ಗುಜರಾತ್ ವಿಮಾನ ದುರಂತಕ್ಕೆ ಬಲಿಯಾದವರ ಪೈಕಿ 47 ಜನರ ಮೃತದೇಹಗಳನ್ನು ಎನ್ಡಿಎ ಪರೀಕ್ಷೆ ಮೂಲಕ ಪತ್ತೆ ಹಚ್ಚಲಾಗಿದೆ. 24 ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‘ಮೃತದೇಹಗಳು ಗುರುತು ಸಿಗದಷ್ಟು ಸುಟ್ಟುಹೋದ ಕಾರಣ ಎನ್ಡಿಎ ಪರೀಕ್ಷೆ ಮಾಡಿ ಗುರುತು ಪತ್ತೆ ಮಾಡಲಾಗುತ್ತಿದೆ.
ಈಗಾಗಲೇ 47 ಶವಗಳ ಗುರುತು ಪತ್ತೆ ಹಚ್ಚಲಾಗಿದ್ದು, 24 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇವರೆಲ್ಲ ಗುಜರಾತ್ನ ಉದಯಪುರ, ವಡೋದರಾ, ಖೇಡ, ಮೆಹ್ಸಾನಾ, ಅರವಲ್ಲೀ, ಅಹಮದಾಬಾದ್ ಹಾಗೂ ಬೋಟಾದ್ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ’ ಎಂದು ಹೆಚ್ಚುವರಿ ಸಿವಿಲ್ ಅಧೀಕ್ಷಕ ಡಾ. ರಜನೀಶ್ ಪಟೇಲ್ ತಿಳಿಸಿದ್ದಾರೆ.
ದುರಂತ ಸಂತ್ರಸ್ತ ಕುಟುಂಬಗಳಿಗೆ 230 ತಂಡಗಳಿಂದ ಆಪ್ತ ಸಮಾಲೋಚನೆ
ಅಹಮದಾಬಾದ್: ಗುಜರಾತ್ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಾನಸಿಕ ಆಘಾತವನ್ನು ನಿಭಾಯಿಸಲು ಮತ್ತು ಆತ್ಮಸ್ಥೈರ್ಯ ತುಂಬಲು ಗುಜರಾತ್ ಸರ್ಕಾರ ಆಪ್ತ ಸಮಾಲೋಚಕರನ್ನು ನಿಯೋಜಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‘ದುರಂತದಲ್ಲಿ ಬಲಿಯಾದ ಪ್ರತಿಯೊಬ್ಬರ ಕುಟುಂಬಕ್ಕೂ ಆಪ್ತ ಸಮಾಲೋಚಕರನ್ನು ನಿಯೋಜಿಸಲಾಗಿದೆ.
ಸಂತ್ರಸ್ತರ ಕುಟುಂಬಗಳೊಂದಿಗೆ ಸಮನ್ವಯ ಸಾಧಿಸಲು 230 ತಂಡಗಳನ್ನು ರಚಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ 11 ವಿದೇಶಿ ಪ್ರಜೆಗಳ ಕುಟುಂಬಗಳ ಜತೆಗೂ ಸಂಪರ್ಕ ಸಾಧಿಸಲಾಗಿದೆ. ಅವರ ಕುಟುಂಬಗಳಿಗಾಗಿಯೇ ಒಂದು ತಂಡವನ್ನು ಮೀಸಲಿರಿಸಲಾಗಿದೆ’ ಎಂದು ಗುಜರಾತ್ ಆಯುಕ್ತ ಮತ್ತು ಕಂದಾಯ ಕಾರ್ಯದರ್ಶಿ ಅಲೋಕ್ ಪಾಂಡೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ