ಡ್ರಗ್ ಕೇಸ್‌ನಲ್ಲಿ ಶಾರುಖ್ ಪುತ್ರನಿಗೆ ಕ್ಲೀನ್ ಚಿಟ್ ನೀಡಿದ್ದ ಎನ್‌ಸಿಬಿ ಅಧಿಕಾರಿ ಸ್ವಯಂ ನಿವೃತ್ತಿ

By Anusha KbFirst Published Apr 19, 2024, 11:01 AM IST
Highlights

ಡ್ರಗ್ ಕೇಸ್‌ನಲ್ಲಿ ಸಿಲುಕಿಕೊಂಡಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಕ್ಲೀನ್‌ ಚಿಟ್ ನೀಡಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಉಪ ಮಹಾನಿರ್ದೇಶಕ (DDG) ಸಂಜಯ್ ಸಿಂಗ್‌ ಈಗ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ

ಮುಂಬೈ: ಡ್ರಗ್ ಕೇಸ್‌ನಲ್ಲಿ ಸಿಲುಕಿಕೊಂಡಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಕ್ಲೀನ್‌ ಚಿಟ್ ನೀಡಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಉಪ ಮಹಾನಿರ್ದೇಶಕ (DDG) ಸಂಜಯ್ ಸಿಂಗ್‌ ಈಗ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಇವರು 1996ರ ಬ್ಯಾಚ್‌ನ ಒಡಿಶಾ ಕೆಡರ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಎನ್‌ಸಿಬಿ ಉಪ ಮಹಾನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. 

2021ರಲ್ಲಿ ನಟ ಶಾರುಖ್ ಖಾನ್ ಪುತ್ರ ಡ್ರಗ್ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದರು. ಇದು  ಕ್ರೂಸ್ ಡ್ರಗ್ಸ್ ಪ್ರಕರಣ (Cruise Drugs Case) ಎಂದು ಫೇಮಸ್ ಆಗಿತ್ತು. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು.  ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್​ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್​ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್​ ಕ್ಲೀನ್​ ಚಿಟ್​ ನೀಡಿತ್ತು. ಅಂತಿಮವಾಗಿ ಅವರು ಅಕ್ಟೋಬರ್ 30 ರಂದು ತಮ್ಮ ತಂದೆಯ ಹುಟ್ಟುಹಬ್ಬದ (Birthday) ಸಮಯದಲ್ಲಿ ಜೈಲಿನಿಂದ ಹೊರಬಂದಿದ್ದರು.

ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​: ಅಪ್ಪ ಶಾರುಖ್​ ಕುರಿತು ತನಿಖಾಧಿಕಾರಿ ವಾಂಖೆಡೆಯಿಂದ ಭಾರಿ ಹೇಳಿಕೆ!

ತಮ್ಮ ಸ್ವಯಂ ನಿವೃತ್ತಿಗೆ ಸಂಬಂಧಿಸಿದಂತೆ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಫೇಬ್ರವರಿ 29 ರಂದು ನಾನು ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯುತ್ತೇನೆ ಎಂದು ವಿನಂತಿ ಮಾಡಿದ್ದೆ. ನನ್ನ ಮನವಿಯನ್ನು ಅನುಮೋದಿಸಲು ಒಡಿಶಾ ರಾಜ್ಯ ಸರ್ಕಾರವೂ ಸಮರ್ಥ ಪ್ರಾಧಿಕಾರವಾಗಿದೆ ಎಂದು  ಗೃಹ ವ್ಯವಹಾರಗಳ ಸಚಿವಾಲಯ (MHA) ಹೇಳಿತ್ತು. ಅದರಂತೆ ಇಂದು ನನ್ನ ಮನವಿಯನ್ನು ಅಂಗೀಕರಿಸಲಾಗಿದೆ ಎಂದು ಮಾಹಿತಿ ಸಿಕ್ಕಿದ್ದು, ಏಪ್ರಿಲ್ 30 ನನ್ನ ವೃತ್ತಿಯ ಕೊನೆ ದಿನವಾಗಿದೆ. ಮೂರು ತಿಂಗಳ ನೋಟೀಸ್ ಪಿರೇಡ್‌ನಲ್ಲಿ ನಾನು ರಿಲ್ಯಾಕ್ಸ್ ಆಗಿದ್ದೇನೆ ಎಂದು ಹೇಳಿದ್ದಾರೆ.

ಎನ್‌ಸಿಬಿ ಜೊತೆಗಿನ ನನ್ನ ಅವಧಿಯೂ ಸಂಪೂರ್ಣವಾಗಿ ಕಲಿಕೆಯಿಂದ ಕೂಡಿತ್ತು. ನಾನು ಬಹಳ ಕೆಲ ಸಮಯದಿಂದ ವಿಆರ್‌ಎಸ್ ತೆಗೆದುಕೊಳ್ಳಬೇಕು ಎಂದು ನೋಡುತ್ತಿದೆ ಹಾಗೂ ಇದು ಒಳ್ಳೆಯ ಸಮಯ ಎಂದು ಅನಿಸಿತು. ಸೇವೆ ಸಲ್ಲಿಸುವುದಾದರೆ ಇನ್ನೂ ಒಂದು ವರ್ಷ ಸಲ್ಲಿಸಬಹುದಿತ್ತು ಎಂದು ಸಂಜಯ್ ಸಿಂಗ್ ಅವರು ಹೇಳಿದ್ದಾರೆ. 

ಅರ್ಜಿಯಲ್ಲಿ ಉಲ್ಲೇಖಿಸಿದ ಆಡಿಯೋ ಸುಳ್ಳು, ಸಮೀರ್ ವಾಂಖೆಡೆ ವಿರುದ್ದ NCB ಕಾನೂನು ಸಲಹೆಗಾರ ದೂರು!

ಸಂಜಯ್ ಸಿಂಗ್ ಅವರು 2021ರಿಂದಲೂ ಎನ್‌ಸಿಬಿಯ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಆರ್ಯನ್ ಖಾನ್ ಆರೋಪಿಯಾಗಿದ್ದ ಡ್ರಗ್ ಪ್ರಕರಣದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದರು.  ಮೊದಲಿಗೆ ಈ ತನಿಖೆಯನ್ನು ವಹಿಸಿಕೊಂಡಿದ್ದ ಸಮೀರ್ ವಾಂಖೆಡೆ ವಿರುದ್ಧ ವಿವಾದ ಸೃಷ್ಟಿಯಾದ ಹಿನ್ನೆಲೆ ಈ ಪ್ರಕರಣದ ತನಿಖೆ ಸಂಜಯ್ ಸಿಂಗ್ ನೇತೃತ್ವದ ತಂಡಕ್ಕೆ ವಹಿಸಲಾಗಿತ್ತು. ಇದರ ಜೊತೆಗೆ ಸಂಜಯ್ ಸಿಂಗ್ ಅವರು 2008ರಿಂದ 2015ರವರೆಗೆ ಸಿಬಿಐನ ಭಾಗವಾಗಿಯೂ ಕೆಲಸ ಮಾಡಿದ್ದಾರೆ. ಒಡಿಶಾ ಪೊಲೀಸ್ ಇಲಾಖೆಯಲ್ಲೂ ಕೆಲಸ ಮಾಡಿದ್ದು,  ಹಲವು ಹೈ ಪ್ರೊಫೈಲ್ ಕೇಸ್‌ಗಳನ್ನು ಹ್ಯಾಂಡಲ್ ಮಾಡಿದ್ದಾರೆ. 

ಮೇ 2022 ರಲ್ಲಿ ಎಸ್‌ಐಟಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ಆರ್ಯನ್ ಖಾನ್ ಸೇರಿದಂತೆ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರು ಜನರಿಗೆ ಕ್ಲೀನ್ ಚಿಟ್ ನೀಡಿ ಉಳಿದ 14 ಜನರನ್ನು ಆರೋಪಿಗಳೆಂದು ಎನ್‌ಸಿಬಿ ಗುರುತಿಸಿದೆ.

ಶಾರುಖ್​ಗೆ ಚಾಟಿ ಬೀಸಿದ್ದ ಎನ್​ಸಿಬಿ ಅಧಿಕಾರಿ ವಾಂಖೆಡೆಗೆ ಜಯ! ಜವಾನ್​ ರಿಲೀಸ್​ ಬೆನ್ನಲ್ಲೇ ಕ್ಲೀನ್​ ಚಿಟ್​

ಆರ್ಯನ್​ ಖಾನ್​ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದರು. ಆದರೆ ಕುತೂಹಲದ ಬೆಳವಣಿಗೆಯಲ್ಲಿ,  ಆರ್ಯನ್‌ ಖಾನ್‌ಗೆ ಕ್ಲೀನ್‌ಚಿಟ್‌ (Cleanchit) ಅಂದರೆ ಅವರ ನಿರಪರಾಧಿ ಎಂದು ಸಾಬೀತು ಮಾಡಲು  ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳದ ಹಿಂದಿನ ಅಧಿಕಾರಿ ಸಮೀರ್‌ ವಾಂಖೇಡೆ 25 ಕೋಟಿ ರೂ. ಲಂಚ ಕೇಳಿದ್ದ ಗಂಭೀರ ಆರೋಪ ಕೇಳಿಬಂದಿತ್ತು.  ಡ್ರಗ್ಸ್‌ ಪ್ರಕರಣದಲ್ಲಿ ತಾವೇ ಹಿಡಿದಿದ್ದ ಆರ್ಯನ್‌ ಖಾನ್‌ಗೆ ಕ್ಲೀನ್‌ಚಿಟ್‌ ಕೊಡಿಸಲು ಸಮೀರ್‌ ವಾಂಖೇಡೆ ತಂತ್ರ ರೂಪಿಸಿದ್ದರು. ಇದಕ್ಕಾಗಿ 25 ಕೋಟಿ ರೂ. ಕೇಳಿದ್ದರು ಎನ್ನಲಾಗಿತ್ತು.  ಆದರೆ ಆರ್ಯನ್​ ಖಾನ್​ ಅವರನ್ನು ಅರೆಸ್ಟ್​ ಮಾಡಿದುದಕ್ಕಾಗಿ ತಮ್ಮನ್ನು ಹೇಗೆ ಸಿಲುಕಿಸುತ್ತಿದ್ದಾರೆ ಎಂದು ವಾಂಖೆಡೆ ಈ ಹಿಂದೆಯೇ ಹೇಳಿದ್ದರು. ನಿಯತ್ತಾಗಿ ಕೆಲಸ ಮಾಡಿದರೆ ಸಿಗುವ ಶಿಕ್ಷೆ ಇದು ಎಂದು ಅವರ ಪತ್ನಿ ಕ್ರಾಂತಿ ರೆಡ್ಕಾರ್ (Kranti Redkar)  ಕೂಡ ದುಃಖಿತರಾಗಿದ್ದರು. ಇದೊಂದು ದೊಡ್ಡ ಷಡ್ಯಂತ್ರ ಎಂದು ವರದಿಯಾಗಿತ್ತು.

click me!