ಪಂಜಾಬ್‌ ಸರ್ಕಾರದ ವಿರುದ್ಧವೇ ಸಿಧು ಬೌನ್ಸರ್‌!

By Suvarna NewsFirst Published Sep 30, 2021, 12:24 PM IST
Highlights

* ಕಳಂಕಿತರು ಮತ್ತೆ ಹುದ್ದೆಗೆ ಮರಳಲು ನಾನು ಬಿಡುವುದಿಲ್ಲ

* ಹುದ್ದೆ ಬೇಕಾದರೂ ಬಿಟ್ಟೇನು ಆದರೆ ಸಿದ್ಧಾಂತ ತ್ಯಜಿಸಲ್ಲ

* ರಾಜೀನಾಮೆ ಮರುದಿನವೇ ವಿಡಿಯೋ ಹೇಳಿಕೆ ಬಿಡುಗಡೆ

* ಪಂಜಾಬ್‌ ಸರ್ಕಾರದ ವಿರುದ್ಧವೇ ಸಿಧು ಬೌನ್ಸರ್‌

ಚಂಡೀಗಢ(ಸೆ.30): ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ(Punjab Congress Prresident) ಹುದ್ದೆಗೆ ರಾಜೀನಾಮೆ ನೀಡಿದ ಮರುದಿನವೇ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು(Navjot Singh Sidhu) ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ತಮ್ಮ ಆಪ್ತ ಚರಣಜಿತ್‌ ಸಿಂಗ್‌ ಚನ್ನಿ(Charanjit Singh Channi) ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಕಳಂಕಿತ ನಾಯಕರು ಹಾಗೂ ಅಧಿಕಾರಿಗಳನ್ನು ವ್ಯವಸ್ಥೆಯಿಂದ ದೂರ ಇಡಲು ಹೋರಾಡಿದ್ದೆವು. ಆದರೆ ಅವರೆಲ್ಲರೂ ಮರಳಿದ್ದಾರೆ. ಅದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.

ಯಾವುದೇ ಹುದ್ದೆ ಬಿಡುವ ಪರಿಸ್ಥಿತಿ ಬಂದರೆ ಅದನ್ನು ಬಿಟ್ಟುಬಿಡುತ್ತೇನೆ. ಆದರೆ ಸಿದ್ಧಾಂತಗಳ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಬುಧವಾರ ವಿಡಿಯೋ ಹೇಳಿಕೆ ಬಿತ್ತರಿಸಿದ್ದಾರೆ.

हक़-सच की लड़ाई आखिरी दम तक लड़ता रहूंगा … pic.twitter.com/LWnBF8JQxu

— Navjot Singh Sidhu (@sherryontopp)

ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹೀಬ್‌ಗೆ(Guru Grantha Saheb) ಬರ್ಗಾರಿಯಲ್ಲಿ ಅಪಮಾನ ಮಾಡಿದ ಪ್ರಕರಣವನ್ನೂ ಸಿಧು ವಿಡಿಯೋದಲ್ಲಿ ಪ್ರಸ್ತಾಪಿಸಿದ್ದಾರೆ. ಆ ಪ್ರಕರಣದಲ್ಲಿ ಬಾದಲ್‌ಗಳಿಗೆ (ಪಂಜಾಬ್‌ ಮಾಜಿ ಸಿಎಂ ಕುಟುಂಬ) ಕ್ಲೀನ್‌ಚಿಟ್‌ ನೀಡಿದವರು, ಮಾಜಿ ಡಿಜಿಪಿ ಸುಮೇಧ್‌ ಸಿಂಗ್‌ ಸೈನಿಗೆ ಜಾಮೀನುಗಳನ್ನು ನೀಡಿದವರು ಅಡ್ವೋಕೇಟ್‌ ಜನರಲ್‌ ಆಗಿ ವ್ಯವಸ್ಥೆಗೆ ನೇಮಕವಾಗಿದ್ದಾರೆ. ಈ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ಯಾವ ತ್ಯಾಗಕ್ಕೂ ಸಿದ್ಧ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದ, ಸಿಧು ಅವರ ರಾಜಕೀಯ ವಿರೋಧಿಯಾಗಿರುವ ಉಪಮುಖ್ಯಮಂತ್ರಿ ಸುಖ್‌ಜಿಂದರ್‌ ಸಿಂಗ್‌ ರಾಂಧವ ಅವರಿಗೆ ಖಾತೆ ಹಂಚಿಕೆ ವೇಳೆ ಗೃಹ ಖಾತೆ ನೀಡಲಾಗಿತ್ತು. ಇದು ಸಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು. ಪಂಜಾಬ್‌ ಸಂಪ್ರದಾಯದಂತೆ ಗೃಹ ಖಾತೆ ಮುಖ್ಯಮಂತ್ರಿಗಳ ಬಳಿಯೇ ಇರಬೇಕು ಎಂಬುದು ಸಿಧು ವಾದವಾಗಿತ್ತು.

ಮತ್ತೊಂದೆಡೆ, ಕಾಂಗ್ರೆಸ್‌ ಸರ್ಕಾರ ಹಿರಿಯ ವಕೀಲ ಎಪಿಎಸ್‌ ಡಿಯೋಲ್‌ ಅವರನ್ನು ಅಡ್ವೋಕೇಟ್‌ ಜನರಲ್‌ ಆಗಿ ನೇಮಕ ಮಾಡಿತ್ತು. ಆದರೆ ಸಿಖ್ಖರ ಪವಿತ್ರ ಗ್ರಂಥಗಳಿಗೆ ಅಪಮಾನವಾದಾಗ, ಅದನ್ನು ಪ್ರತಿಭಟಿಸಿದವರ ಮೇಲೆ ಗುಂಡಿನ ದಾಳಿ ನಡೆದಾಗ ಡಿಜಿಪಿ ಆಗಿದ್ದ ಸುಮೇಧ್‌ ಸಿಂಗ್‌ ಸೈನಿ ಅವರಿಗೆ ಡಿಯೋಲ್‌ ಜಾಮೀನು ಕೊಡಿಸಿದ್ದರು. ಇದು ಸಿಧು ಆಕ್ರೋಶಕ್ಕೆ ಕಾರಣವಾಗಿತ್ತು. ಬೇಸರಗೊಂಡು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದರು.

click me!