Navjot singh sidhu:ಇಮ್ರಾನ್ ಖಾನ್ ನನ್ನ ಅಣ್ಣ, ನಮಗೆ ಗಡಿ ಯಾಕಣ್ಣ; ಸಿಧು ಮತ್ತೊಂದು ವಿವಾದ!

By Suvarna NewsFirst Published Nov 20, 2021, 5:59 PM IST
Highlights
  • ಮತ್ತೆ ವಿವಾದ ಸೃಷ್ಟಿಸಿದ ನವಜೋತ್ ಸಿಂಗ್ ಸಿಧು
  • ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ತಂದ ಸಿಧು, ಬಿಜೆಪಿ ಟೀಕೆ
  • ಕರ್ತಾರ್‌ಪುರ್ ಭೇಟಿಯಲ್ಲಿ ಸಿಧು ವಿವಾದ, ಹೆಚ್ತಾಯ್ತು ಆಕ್ರೋಶ

ನವದೆಹಲಿ(ನ.20):  ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು(navjot singh sidhu) ಹಾಗೂ ವಿವಾದಕ್ಕೂ(controversy) ಅವಿನಾಭಾವ ಸಂಬಂಧವಿದೆ. ಕಳೆದ ಕೆಲ ತಿಂಗಳುಗಳಿಂದ ಪಂಜಾಬ್ ಕಾಂಗ್ರೆಸ್‌ನಲ್ಲಿ(Punjab Congress) ಕೋಲಾಹಲ ಎಬ್ಬಿಸಿದ ಸಿಧು ಸೈಲೆಂಟ್ ಆಗಿದ್ದಾರೆ ಅನ್ನುವಷ್ಟರಲ್ಲೇ ಮತ್ತೆ ಬಹುದೊಡ್ಡ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್(Imran Khan) ನನ್ನ ಅಣ್ಣ ಎಂದು ಹೊಸ ವಿವಾದ ಸೃಷ್ಟಿಸಿದ್ದಾರೆ. ಸಿಧು ಪಾಕಿಸ್ತಾನ ಪ್ರೀತಿಯನ್ನು ಬಿಜೆಪಿ ಟೀಕಿಸಿದೆ.

ಕೇಂದ್ರ ಸರ್ಕಾರ ಪಾಕಿಸ್ತಾನದಲ್ಲಿರುವ ಸಿಖ್ ಪವಿತ್ರ ಕ್ಷೇತ್ರ ಕರ್ತಾರ್‌ಪುರ್‌ಗೆ(Kartarpur) ಭೇಟಿ ನೀಡಲು ಅವಕಾಶ ನೀಡಿದೆ. ಪಾಕಿಸ್ತಾನ ಜೊತೆ ಮಾತುಕತೆ ನಡೆಸಿ ಕರ್ತಾರ್‌ಪುರ್ ಕ್ಷೇತ್ರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಇತ್ತ ಕರ್ತಾರ್‌ಪುರ್ ಭೇಟಿ ನೀಡಿದ ಕಾಂಗ್ರೆಸ್ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಪಾಕಿಸ್ತಾನ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್  ಮೆಚ್ಚಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಷ್ಟೇ ಅಲ್ಲ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣ(bada bhai). ಕ್ರಿಕೆಟ್ ದಿನದಿಂದ ಆತ್ಮೀಯರಾಗಿರುವ ಇಮ್ರಾನ್ ನನ್ನ ಅಣ್ಣನಂತೆ ಎಂದು ವಿವಾದ ಸೃಷ್ಟಿಸಿದ್ದಾರೆ.

ನವಜೋತ್‌ ಸಿಂಗ್‌ ಸಿಧು ಹೊಸ ಕ್ಯಾತೆ!

ಪಾಕಿಸ್ತಾನ ಹೊಗಳಲು ಸಿಧು ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ. ಈ ಬಾರಿಯ ಪ್ರವಾಸದಲ್ಲಿ ಒಂದು ಹೆಜ್ಜೆ ಹೆಜ್ಜೆ ಮುಂದೇ ಹೋಗಿರುವ ಸಿಧು, ಪಾಕಿಸ್ತಾನ ಹಾಗೂ ಪಂಜಾಬ್ ನಡುವೆ ಗಡಿಯ(Border) ಅವಶ್ಯಕತೆ ಇಲ್ಲ. ಗಡಿಯಿಂದ ಪಂಜಾಬ್‌ನ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಉತ್ತರ ದಕ್ಷಿಣ ಹೇಳಿಕೆ ನೀಡಿದ್ದಾರೆ.  ಫೆನ್ಸಿಂಗ್, ಭಾರತೀಯ ಸೇನೆ, ಡ್ರೋನ್ ಸೇರಿದಂತೆ ಎಲ್ಲಾ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಗಡಿ ಕಾಯುತ್ತಿದ್ದರೂ ಉಗ್ರರ ಉಪಟಳ, ಪಾಕಿಸ್ತಾನ ಸೇನೆಯ ಅಪ್ರಚೋದಿತ ದಾಳಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಸಿಧು ಗಡಿಯ ಅವಶ್ಯಕತೆ ಇಲ್ಲ. ಗಡಿ ತೆರೆದು ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ. 

ಪಾಕಿಸ್ತಾನ ಜೊತೆ ವ್ಯಾಪಾರ ವಹಿವಾಟು ಮಾಡಲು ಕೇವಲ 21 ಕಿ.ಮೀ ಅಂತರವಿದೆ. ಆದರೆ ಗಡಿಗಳನ್ನು ಮುಚ್ಚಿರುವ ಕಾರಣ ಮುಂದ್ರಾ ಬಂದರಿನ ಮೂಲಕ ಸಾಗಬೇಕು ಇದು 2,100 ಕಿ.ಮೀ ಪ್ರಯಾಣ ಮಾಡಬೇಕಿದೆ. ಹೀಗಾಗಿ ಪಾಕಿಸ್ತಾನ ಜೊತೆ ಗಡಿ ತೆರೆಯಲು ಪ್ರಧಾನಿ ಮೋದಿ ಹಾಗೂ ಇಮ್ರಾನ್ ಖಾನ್ ಮಾತುಕತೆ ನಡೆಸಬೇಕು ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು ಹೇಳಿಕೆಗೆ ಬಿಜೆಪಿ(BJP) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನ ಪ್ರೇಮಿ ನವಜೋತ್ ಸಿಂಗ್ ಸಿಧು ಈ ಬಾರಿ ಇಮ್ರಾನ್ ಖಾನ್‌ನ್ನು ಅಣ್ಣ ಎಂದು ಕರೆದಿದ್ದಾರೆ. ಈ ಹಿಂದೆ ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಂಡ ಸಿಧು, ಇದೀಗ ಪಾಕ್ ಪ್ರೀತಿಯನ್ನು ಮತ್ತೆ ತೋರಿದ್ದಾರೆ. ದೇಶ ಪ್ರೇಮಿ ಕ್ಯಾಪ್ಟನ್ ಅಮರಿಂದರ್ ಬದಲು ಪಾಕಿಸ್ತಾನ ಪ್ರೇಮಿ ಸಿಧುರನ್ನು ನೆಚ್ಚಿಕೊಂಡಿರುವುದು ಯಾಕೆ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

Navjot Singh Sidhu ಯು ಟರ್ನ್; ರಾಜೀನಾಮೆ ಹಿಂತೆಗೆದೆ ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ!

ನವಜೋತ್ ಸಿಂಗ್ ಸಿಧು ಪಾಕಿಸ್ತಾನ ಮೇಲೆ ಅತೀವ ಪ್ರೀತಿ ತೋರುತ್ತಿರುವುದು ಇದೇ ಮೊದಲಲ್ಲ ಹಲವು ಭಾರಿ ಈ ರೀತಿ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಸಮಾರಂಭಕ್ಕೆ ಪಾಕಿಸ್ತಾನ ತೆರಳಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಭಾಜ್ವರನ್ನು ಅಪ್ಪಿಕೊಂಡಿದ್ದರು. ಭಾರತೀಯ ಯೋಧರ ಗುರಿಯಾಗಿಸಿ ಅಪ್ರಚೋದಿತ ದಾಳಿ, ಉಗ್ರರಿಗೆ ನೆರವು ನೀಡುವ ಪಾಕಿಸ್ತಾನ ಸೇನೆ ಮುಖ್ಯಸ್ಥರನ್ನು ಅಪ್ಪಿಕೊಂಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಭಾರತೀಯ ಸೇನಾ ಯೋಧರನ್ನು ಬಲಿಪಡೆಯುವ ಪಾಕಿಸ್ತಾನ ಸೇನಾ ಮುಖ್ಯಸ್ಥರ ಜೊತೆಗಿನ ಅಪ್ಪುಗೆಗೆ ಸ್ವತಃ ಕಾಂಗ್ರೆಸ್ ಪಕ್ಷವೇ ವಿರೋಧ ವ್ಯಕ್ತಪಡಿಸಿತ್ತು. 

click me!