ಡಿವೈಸ್‌ಗಳಿಗೆ ದಾಸರಾಗಬೇಡಿ: ನಿಲೇಕಣಿ ಕಿವಿಮಾತು

By Kannadaprabha NewsFirst Published Jan 23, 2023, 1:30 AM IST
Highlights

ಜಗತ್ತಿನಲ್ಲಿ ಕ್ರಾಂತಿಗಳಾಗಿವೆ. ಆದರೆ ಅವೆಲ್ಲವೂ ನಿಧಾನವಾಗಿ ಆದ ಬದಲಾವಣೆಗಳು. ಆದರೆ ತಂತ್ರಜ್ಞಾನದ ಬೆಳವಣಿಗೆ ಅತ್ಯಂತ ವೇಗವಾಗಿ ನಡೆಯುತ್ತಿದೆ. ಈ ಕ್ಷಿಪ್ರಕ್ರಾಂತಿಯ ಕಾರಣದಿಂದ ಮುಂದೇನಾಗುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಕಾದು ನೋಡುವುದೊಂದೇ ಮಾರ್ಗ: ನಂದನ್‌ ನಿಲೇಕಣಿ 

ಜೈಪುರ(ಜ.23):  ‘ತಂತ್ರಜ್ಞಾನದ ಬಳಕೆಯಲ್ಲಿ ಮೂರು ಮಾದರಿಗಳಿವೆ. ಅಮೆರಿಕ ಖಾಸಗೀತನವನ್ನು ಅಳವಡಿಸಿಕೊಂಡರೆ, ಚೀನಾದ ತಂತ್ರಜ್ಞಾನವನ್ನು ದೇಶ ನಿರ್ಧರಿಸುತ್ತದೆ. ಯುರೋಪಿನಲ್ಲಿ ತಂತ್ರಜ್ಞಾನಕ್ಕೆ ಕಟ್ಟುಪಾಡುಗಳು ನಿರ್ಧರಿಸುತ್ತವೆ, ಭಾರತ ಮಾತ್ರ ತಂತ್ರಜ್ಞಾನವನ್ನು ಸಬಲೀಕರಣಕ್ಕೆ ಬಳಸುತ್ತಿದೆ’ ಎಂದು ನಂದನ್‌ ನಿಲೇಕಣಿ ಹೇಳಿದರು. ‘ಜಗತ್ತಿನಲ್ಲಿ ಕ್ರಾಂತಿಗಳಾಗಿವೆ. ಆದರೆ ಅವೆಲ್ಲವೂ ನಿಧಾನವಾಗಿ ಆದ ಬದಲಾವಣೆಗಳು. ಆದರೆ ತಂತ್ರಜ್ಞಾನದ ಬೆಳವಣಿಗೆ ಅತ್ಯಂತ ವೇಗವಾಗಿ ನಡೆಯುತ್ತಿದೆ. ಈ ಕ್ಷಿಪ್ರಕ್ರಾಂತಿಯ ಕಾರಣದಿಂದ ಮುಂದೇನಾಗುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಕಾದು ನೋಡುವುದೊಂದೇ ಮಾರ್ಗ’ ಎಂದು ಅವರು ಅಭಿಪ್ರಾಯಪಟ್ಟರು.

‘ತಂತ್ರಜ್ಞಾನ ನಮ್ಮನ್ನು ಹೆಚ್ಚು ಹೆಚ್ಚು ಖಾಸಗಿ ವ್ಯಕ್ತಿಗಳನ್ನಾಗಿ ಮಾಡಿದೆ. ಮಕ್ಕಳು ಕೂಡ ಊಟಕ್ಕೆ ಕುಳಿತಾಗ ಮತ್ತೊಬ್ಬರ ಜತೆ ಮಾತಾಡುವ ಪದ್ಧತಿ ಮಾಯವಾಗಿದೆ. ಸಾವಿರಾರು ಮಂದಿ ಒಂದೇ ಕಡೆ ಸೇರಿದರೂ ಸಮೂಹವಾಗದೇ, ವೈಯಕ್ತಿಕವಾಗಿಯೇ ಉಳಿಯುತ್ತಾರೆ. ಎಲ್ಲರೂ ಡಿವೈಸ್‌ಗಳಿಗೆ ದಾಸರಾಗಿದ್ದಾರೆ’ ಎಂದು ಅವರು ವಿವರಿಸಿದರು.

ಎರಡನೇ ತಲೆಮಾರಿಗೆ ಅವಕಾಶ ನೀಡದಿರುವ ಬಗ್ಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಬೇಸರ

‘ತಂತ್ರಜ್ಞಾನದಲ್ಲಿ ಪುಷ್‌ ಮಾಡೆಲ್‌ ಮತ್ತು ಪುಲ್‌ ಮಾಡೆಲ್‌ ಎಂಬ ಎರಡು ಕ್ರಮಗಳಿವೆ. ಪುಲ್‌ ಮಾಡೆಲ್‌ ಅಂದರೆ ನಮಗೆ ಬೇಕಾದ ವೆಬ್‌ಸೈಟುಗಳನ್ನು ಹುಡುಕಿಕೊಂಡು ಹೋಗಿ ನಮಗೆ ಬೇಕಾದ ಮಾಹಿತಿಗಳನ್ನು ಸೆಳೆದುಕೊಳ್ಳುವುದು. ಪುಷ್‌ ಮಾಡೆಲ್‌ ಅಂದರೆ ಬೇರೆಯವರು ನಮಗೆ ಅವರಿಗೆ ಬೇಕಾದ ಮಾಹಿತಿಗಳನ್ನು ಕಳಿಸುವುದು. ಎರಡನೆಯದನ್ನು ಜಾಹೀರಾತುಗಳು ಸಮರ್ಥವಾಗಿ ಬಳಸಿಕೊಳ್ಳುತ್ತವೆ. ಆದರೆ ನಾವು ತಂತ್ರಜ್ಞಾನವನ್ನು ಮೆಟ್ಟಿನಿಲ್ಲಬೇಕೇ ಹೊರತು ಅದು ನಮ್ಮನ್ನು ದಾಸರಾಗಿ ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕು’ ಎಂದವರು ಕಿವಿಮಾತು ಹೇಳಿದರು.

ದಿ ಆರ್ಟ್‌ ಆಫ್‌ ಬಿಟ್‌ಫುಲ್‌ನೆಸ್‌-ಕೀಪಿಂಗ್‌ ಕಾಮ್‌ ಇನ್‌ ಡಿಜಿಟಲ್‌ ವಲ್ಡ್‌ರ್‍ ಗೋಷ್ಠಿಯಲ್ಲಿ ನಂದನ್‌ ನಿಲೇಕಣಿಯವರ ಜತೆ ತನುಜ್‌ ಭೋಜ್ವಾನಿ ಹಾಗೂ ಅನಿರುದ್ಧ ಸೂರಿ ಸಂವಾದ ನಡೆಸಿದರು. ‘ನನಗೆ ಗೊತ್ತಿರುವ ಮಹಿಳೆಯಯೊಬ್ಬರು 2022ರ ತಾಯಂದಿರು ಎಂಬ ವಾಟ್ಸ್ಯಾಪ್‌ ಗ್ರೂಪ್‌ ಮಾಡಿಕೊಂಡು ಪರಸ್ಪರ ಮಾತಾಡುತ್ತಾ ಮಕ್ಕಳನ್ನು ಬೆಳೆಸುವ ಬಗ್ಗೆ ಅರಿವು ಪಡೆದುಕೊಳ್ಳುತ್ತಿದ್ದರು. ಇದು ತಂತ್ರಜ್ಞಾನದ ಲಾಭ. ಅಲ್ಲಿ ರೀಲ್ಸ್‌ ನೋಡಿಕೊಂಡು ಸಮಯ ಕಳೆಯಲೂ ಸಾಧ್ಯ, ಸಮರ್ಥವಾಗಿ ಬಳಸಿಕೊಂಡು ಲಾಭ ಮಾಡಿಕೊಳ್ಳಲೂ ಸಾಧ್ಯ’ ಎಂದು ತನುಜ್‌ ಭೋಜ್ವಾನಿ ವಿವರಿಸಿದರು.

ಭಾರತದ ಎಲಾನ್ ಮಸ್ಕ್ ಯಾರು? ಇಲ್ಲಿದೆ ನೋಡಿ ಸ್ನ್ಯಾಪ್ ಡೀಲ್ ಸಿಇಒ ಕುನಾಲ್ ಬಹ್ಲ್ ನೀಡಿರುವ ಉತ್ತರ

‘ಭಾರತದಲ್ಲಿ ತಂತ್ರಜ್ಞಾನದ ವಿಚಾರದಲ್ಲಿ ವಿರೋಧಾಭಾಸ ಇದೆ. ಡ್ರೋನ್‌ ತಂತ್ರಜ್ಞಾನ ಬರುತ್ತಿದ್ದಂತೆ ಅದನ್ನು ನಿರ್ಬಂಧಿಸಬೇಕು ಅನ್ನುತ್ತಾರೆ. ಬಯೋಟೆಕ್ನಾಲಜಿಯಲ್ಲಿ ಹೊಸದು ಬರುತ್ತಿದ್ದಂತೆ ವಿರೋಧಿಸುತ್ತಾರೆ. ಆರ್ಟಿಫಿಷಿಯಲ… ಇಂಟೆಲಿಜೆನ್ಸ್‌ ಬಂದಾಗ ಅದನ್ನೂ ಬೇಡ ಎನ್ನುತ್ತಾರೆ. ಇದು ನಮ್ಮ ಮನೋಭಾವಕ್ಕೆ ಸಾಕ್ಷಿ’ ಎಂದು ಅನಿರುದ್‌್ಧ ಸೂರಿ ಹೇಳಿದಾಗ, ‘ಅನುಮತಿ ಬೇಡದ ಸಂಶೋಧನೆ ಮತ್ತು ಅನುಮತಿ ಬಯಸುವ ಸಂಶೋಧನೆ ಎಂಬ ಎರಡು ವಿಭಾಗಗಳಿವೆ. ಎರಡನೆಯ ವಿಭಾಗಕ್ಕೆ ಸರ್ಕಾರದ ಅನುಮತಿ ಬೇಕಾಗುತ್ತದೆ. ಭಾರತದಲ್ಲಿ ತಂತ್ರಜ್ಞಾನ ವ್ಯಕ್ತಿಗಳಿಗೆ ನೆರವಾಗುತ್ತದೆ. ಒಬ್ಬ ಸಣ್ಣ ವ್ಯಾಪಾರಿ ತನ್ನ ಕ್ರೆಡಿಟ್‌ ರೆಕಾರ್ಡ್‌ ಇಟ್ಟುಕೊಳ್ಳಬಹುದು. ಸಂವಹನ ಸುಲಭವಾಗಿದೆ. ಅನಗತ್ಯವಾದ ಓಡಾಟ ಕಡಿಮೆಯಾಗಿದೆ’ ಎಂದು ನಿಲೇಕಣಿ ವಿವರಿಸಿದರು.

‘ತಂತ್ರಜ್ಞಾನ ತನ್ನ ಲಾಭಕ್ಕಾಗಿ ಮನುಷ್ಯನ ಭಾವನೆಗಳ ಜತೆ ಆಟ ಆಡುತ್ತದೆ. ಗುಂಪುಗಾರಿಕೆಗೆ ಅವಕಾಶ ಮಾಡಿಕೊಡುತ್ತದೆ. ನಾವು ಯಾವುದಾದರೂ ಒಂದು ಕಡೆ ಇರಲೇಬೇಕೆಂದು ಒತ್ತಾಯಿಸುತ್ತದೆ. ಇದರಿಂದ ನಾವು ತಪ್ಪಿಸಿಕೊಳ್ಳಬೇಕು’ ಎಂದು ಅನಿರುದ್ಧ ಸೂರಿ ಹೇಳಿದರು.

click me!