
ನವದೆಹಲಿ: ದೇವಿ ದುರ್ಗೆಗೂ ಹುಲಿಗೂ ಅವಿನಾಭಾವ ಸಂಬಂಧ, ದುರ್ಗೆಯ ವಾಹನ ಹುಲಿ... ನಾವು ಈಗ ಹೇಳ್ತಿರುವ ಘಟನೆಗೂ ಇದಕ್ಕೂ ಅಂತಹ ಸಂಬಂಧವೇನು ಇಲ್ಲ ಬಿಡಿ. ಆದರೂ ನಿನ್ನೆ ರಾಷ್ಟ್ರಪತಿ ಭವನದಲ್ಲಿ ವಿಚಿತ್ರವೊಂದು ನಡೆಯಿತು. ಪ್ರಧಾನಿ ಹಾಗೂ 72 ಸಚಿವರ ಪ್ರಮಾಣವಚನ ಸಮಾರಂಭದ ವೇಳೆ ರಾಷ್ಟ್ರಪತಿ ಭವನದ ಒಳಭಾಗದಲ್ಲಿ ನಿಗೂಢವಾದ 4 ಕಾಲಿನ ಪ್ರಾಣಿಯೊಂದು ತೆರೆಮರೆಯಲ್ಲಿ ರಾಜ ಗಾಂಭೀರ್ಯದಿಂದ ನಡೆದು ಹೋಗುತ್ತಿರುವ ದೃಶ್ಯವೊಂದು ಕಾರ್ಯಕ್ರಮದ ವೀಡಿಯೋವೊಂದರಲ್ಲಿ ಸೆರೆ ಆಗಿದ್ದು, ಈಗ ವೈರಲ್ ಆಗಿದೆ.
ನಿನ್ನೆ ವಿವಿಧ ದೇಶಗಳ ಅಧ್ಯಕ್ಷರು, ವಿದೇಶಿ ಗಣ್ಯರು, ಬಾಲಿವುಡ್ ನಟನಟಿಯರು ಉದ್ಯಮಿಗಳು ಸೇರಿದಂತೆ 8 ಸಾವಿರಕ್ಕೂ ಅಧಿಕ ಗಣ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋದಲ್ಲಿ ಆಹ್ವಾನಿಸದ ಅತಿಥಿಯೊಬ್ಬರು ಈ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ಮಧ್ಯಪ್ರದೇಶದ ಬೇತುಲ್ನ ಬಿಜೆಪಿ ಸಂಸದ ದುರ್ಗಾದಾಸ್ ಯುಕಿ ಅಲಿಯಾಸ್ ಡಿಡಿ ಯುಕಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಕುರ್ಚಿಯಲ್ಲಿ ಕುಳಿತು ಸಹಿ ಹಾಕುವ ವೇಳೆ ಅವರ ಹಿಂಭಾಗದಲ್ಲಿ ರಾಷ್ಟ್ರಪತಿ ಭವನದ ಕಾರಿಡಾರ್ನಲ್ಲಿ ನಾಲ್ಕು ಕಾಲಿನ ಪ್ರಾಣಿಯೊಂದು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿರುವ ದೃಶ್ಯ ಸೆರೆ ಆಗಿದೆ. ವೀಡಿಯೋ ನೋಡಿದ ಅನೇಕರು ಈ ಪ್ರಾಣಿಯನ್ನು ಒಂದೊಂದು ರೀತಿಯಲ್ಲಿ ಬಣ್ಣಿಸಿದ್ದಾರೆ. ಕೆಲವರು ಇದನ್ನು ಬೆಕ್ಕು ಎಂದರೆ, ಮತ್ತೆ ಕೆಲವರು ನಾಯಿ ಎಂದು ಹೇಳಿದ್ದಾರೆ. ಆದರೆ ಇನ್ನು ಕೆಲವರು ಇದು ಸಿಂಹ, ಚಿರತೆಯಂತೆ ಎಂದೆಲ್ಲಾ ಬಣ್ಣಿಸಿದ್ದಾರೆ. ಮತ್ತೆ ಕೆಲವರು ಇದು ಎಡಿಟೆಡ್ ವೀಡಿಯೋ ಆಗಿರಬಹುದೇ ಎಂದು ಅನುಮಾನ ಪಟ್ಟಿದ್ದಾರೆ. ಕೆಲವರು ಇದರ ಬಾಲ ಉದ್ದವಾಗಿ ಕಾಣಿಸ್ತಿರೋದ್ರಿಂದ ಅದನ್ನು ಚಿರತೆ ಎಂದು ಬಣ್ಣಿಸಿದ್ದಾರೆ.
ಆ ವೀಡಿಯೋವನ್ನು ನೀವು ನೋಡಿ
ನಿನ್ನೆ ರಾಷ್ಟ್ರಪತಿ ದ್ರೌಪರಿ ಮುರ್ಮು ಅವರು 30 ಕ್ಯಾಬಿನೆಟ್ ಸಚಿವರು, 36 ರಾಜ್ಯ ಖಾತೆ ಸಚಿವರು ಮತ್ತು ಸ್ವತಂತ್ರ ಉಸ್ತುವಾರಿ ಹೊಂದಿರುವ ಐದು ರಾಜ್ಯ ಖಾತೆ ಸೇರಿದಂತೆ 72 ಲೋಕಸಭಾ ಸದಸ್ಯರ ಮಂತ್ರಿ ಮಂಡಳಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು. ಮೋದಿ 3.0 ಸರ್ಕಾರದಲ್ಲಿ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಅವರಂತಹ ಪ್ರಮುಖರು ಸಂಪುಟ ಸಚಿವರಾಗಿ ಮುಂದುವರಿದಿದ್ದಾರೆ. ಇದರ ಜೊತೆಗೆ ಬಿಜೆಪಿ ಮಾತ್ರವಲ್ಲದೇ ಎನ್ಡಿಎ ಮೈತ್ರಿಕೂಟದ ಹೊಸ ಮಂತ್ರಿ ಮಂಡಳಿಯಲ್ಲಿ ಎನ್ಡಿಎ ಮೈತ್ರಿಕೂಟದ 11 ಮಂತ್ರಿಗಳು ಸೇರಿದ್ದಾರೆ.
ಮೋದಿ ಕ್ಯಾಬಿನೆಟ್ನಲ್ಲಿ ಬಿಜೆಪಿಗೆ 60, ಮಿತ್ರರಿಗೆ ಕೇವಲ 11: ಮೋದಿ ಸಂಪುಟ ಸೇರಲು ಎನ್ಸಿಪಿ ನಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ