Hijab Row:ಹಿಜಾಬ್‌ ಅಡಿ ಮುಸ್ಲಿಂ ಮಹಿಳೆಯರ ಸಮಾಧಿ: ಕೇರಳ ಗವರ್ನರ್‌

By Kannadaprabha NewsFirst Published Feb 12, 2022, 3:30 AM IST
Highlights

ಈ ಹಿಂದೆ ಮುಸ್ಲಿಂ ಮಹಿಳೆಯರನ್ನು ನೆಲದ ಅಡಿ ಹೂತು ಹಾಕಲಾಗುತ್ತಿತ್ತು. ಈಗ ಅವರನ್ನು ಹಿಜಾಬ್‌, ಬುರ್ಖಾ ಹಾಗೂ ತ್ರಿವಳಿ ತಲಾಖ್‌ ಅಡಿಯಲ್ಲಿ ಹೂತು ಹಾಕಲಾಗುತ್ತಿದೆ ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಕಿಡಿಕಾರಿದ್ದಾರೆ. 

ತಿರುವನಂತಪುರ (ಫೆ.12): ಈ ಹಿಂದೆ ಮುಸ್ಲಿಂ ಮಹಿಳೆಯರನ್ನು (Muslim Womens) ನೆಲದ ಅಡಿ ಹೂತು ಹಾಕಲಾಗುತ್ತಿತ್ತು. ಈಗ ಅವರನ್ನು ಹಿಜಾಬ್‌, ಬುರ್ಖಾ ಹಾಗೂ ತ್ರಿವಳಿ ತಲಾಖ್‌ ಅಡಿಯಲ್ಲಿ ಹೂತು ಹಾಕಲಾಗುತ್ತಿದೆ ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ (Arif Mohammed Khan) ಕಿಡಿಕಾರಿದ್ದಾರೆ. ಜೊತೆಗೆ ಹಿಜಾಬ್‌ (Hijab Row) ವಿರುದ್ಧ ಮುಸ್ಲಿಂ ಮಹಿಳೆಯರು ಹೋರಾಟ ನಡೆಸಿದ ಹಲವು ಇತಿಹಾಸಗಳೇ ಇವೆ ಎಂದಿದ್ದಾರೆ. ಜೊತೆಗೆ ‘ವಸ್ತ್ರಸಂಹಿತೆ ಎಂಬುದು ಸಂಸ್ಥೆಗಳ ಅವಿಭಾಜ್ಯ ಅಂಗ. ಸಂಸ್ಥೆಗಳಲ್ಲಿ ಇರುವವರು ಅದನ್ನು ಪಾಲಿಸಲೇಬೇಕು’ ಎಂದೂ ಹೇಳಿದ್ದಾರೆ.

ಸುದ್ದಿವಾಹಿನಿಯೊಂದು ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ‘ವಿದ್ಯಾರ್ಥಿಗಳು ಆಯಾ ಶೈಕ್ಷಣಿಕ ಸಂಸ್ಥೆಗಳ ಸಮವಸ್ತ್ರದ ಅರಿವು ಇದ್ದೇ ಪ್ರವೇಶ ಪಡೆದಿರುತ್ತಾರೆ. ಹೀಗೆ ಏಕಾಏಕಿ ಬಂಡೇಳಲು ಸಾಧ್ಯವಿಲ್ಲ. ನಿಮ್ಮನ್ನು (ವಿದ್ಯಾರ್ಥಿಗಳನ್ನು) ರಾಜಕೀಯ ಲಾಭಕ್ಕೆ ಹಾಗೂ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಎಚ್ಚರಿಸಿದರು.

Hijab Controversy: ರಾಜಸ್ಥಾನ ಕಾಲೇಜಿನಲ್ಲೂ ಹಿಜಾಬ್‌ ವಿವಾದ

‘ಇದೊಂದು (ಹಿಜಾಬ್‌ ವಿವಾದ) ವಿಷಯವೇ ಅಲ್ಲ. ಅವರು (ವಿದ್ಯಾರ್ಥಿಗಳು) ‘ಕುರಾನ್‌’ ಉಲ್ಲೇಖಿಸುತ್ತಿಲ್ಲ. ಕೇವಲ ಧರ್ಮದಲ್ಲಿದೆ ಎನ್ನುತ್ತಿದ್ದಾರೆ. ಆದರೆ ಕುರಾನ್‌ನಲ್ಲಿ ಎಲ್ಲಿಯೂ ಹಿಜಾಬ್‌ ಪದ ಬಳಕೆ ಇಲ್ಲ. ಕುರಾನ್‌ನಲ್ಲಿ ಖಿಮರ್‌ (ದುಪಟ್ಟಾ/ಪರದೆ) ಎಂಬ ಪದವಿದೆ. ಜಿಜಾಬ್‌ (ಅಂಗಿ) ಎಂಬ ಪದವೂ ಉಂಟು. ಅಂಗಿಯ ಮೇಲೆ ಪರದೆ ಹಾಕಿಕೊಳ್ಳಿ ಎಂದಿದೆಯೇ ವಿನಾ ಮುಖದ ಮೇಲೆ ಹಾಕಿಕೊಳ್ಳಿ ಎಂದು ಹೇಳಿಲ್ಲ’ ಎಂದರು.

‘ಹಿಜಾಬ್‌ ಎಂಬ ಪದವನ್ನು ಪರದೆ ಎಂದು ವಿಶ್ಲೇಷಿಸಲಾಗಿದೆ. ಪರದೆಯನ್ನು ಒಬ್ಬರಿಂದ ಇನ್ನೊಬ್ಬರನ್ನು ಪ್ರತ್ಯೇಕಿಸುವ ಬಗ್ಗೆ ಉಲ್ಲೇಖವಿದೆ. 7 ಸಲ ಇದನ್ನು ಕುರಾನ್‌ನಲ್ಲಿ ಬಳಸಲಾಗಿದೆ. ಆದರೆ ಅದನ್ನು ವಸ್ತ್ರ ಎಂದು ಎಲ್ಲೂ ಪರಿಗಣಿಸಿಲ್ಲ’ ಎಂದು ಅವರು ವ್ಯಾಖ್ಯಾನಿಸಿದರು. ಇಂದು ದೇಶದಲ್ಲಿ ಧರ್ಮವನ್ನು ಏಕತೆಯ ಬದಲು ಒಡಕು ಸೃಷ್ಟಿಸಲು ಬಳಸಲಾಗುತ್ತಿದೆ ಎಂದು ವಿಷಾದಿಸಿದರು.

ಕರ್ನಾಟಕವು ಧಾರ್ಮಿಕ ಮತಾಂಧತೆಗೆ ಇಳಿದಿದೆ ಎಂದ ಯುವ ಕಾಂಗ್ರೆಸ್: ರಾಜ್ಯದಲ್ಲಿ ಹಿಜಾಬ್ ಪ್ರಕರಣದ ಕುರಿತು ಹೈಕೋರ್ಟ್ ನಲ್ಲಿ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿರುವಾಗಲೇ, ಹೈಕೋರ್ಟ್ (High Court) ನೀಡಿದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಯುವ ಮುಖಂಡ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ. ಮುಸ್ಲಿಂ ಹುಡುಗಿರುವ ತಲೆಗೆ ಹಿಜಾಬ್ ಧರಿಸುವುದು ಅವರ ಮೂಲಭೂತ ಹಕ್ಕು ಎಂದು ಬಿವಿ ಶ್ರೀನಿವಾಸ್ ಹೇಳಿದ್ದಾರೆ.

Hijab Row : ಸರ್ಕಾರದ ಸುರಕ್ಷಾತ್ಮಕ ತಂತ್ರ,  ಮತ್ತೆ 3  ದಿನ ಕಾಲೇಜಿಗೆ ರಜೆ

ಯಾವುದೇ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ತಡೆಯುವುದಿಲ್ಲ ಮತ್ತು ಧರ್ಮದ ಹೆಸರಿನಲ್ಲಿ ಬೆದರಿಕೆ ಹಾಕದಂತೆ ರಾಜ್ಯಗಳಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಸೋಮವಾರದ ವಿಚಾರಣೆ ಮುಂದುವರಿಯಲಿದ್ದು ಅಲ್ಲಿಯವರೆಗೂ ಶಾಲೆ ಕಾಲೇಜುಗಳಲ್ಲಿ ಧಾರ್ಮಿಕ ಉಡುಪುಗಳನ್ನು ತೊಡಬೇಡಿ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋದ ದಿನವೇ ಯುವ ಕಾಂಗ್ರೆಸ್ ಈ ನಿರ್ಧಾರ ಮಾಡಿದೆ. 

ಇನ್ನೊಂದೆಡೆ ಸುಪ್ರೀಂ ಕೋರ್ಟ್ ಕೂಡ, ಪರೀಕ್ಷೆಗಳಿಗೆ ಇದರಿಂದ ಅಡ್ಡಿಯಾಗುತ್ತಿದೆ ಎನ್ನುವ ಸಂದರ್ಭಗಳಿದ್ದರೆ ಮಾತ್ರವೇ ಈ ವಿಷಯದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿ ಸಲ್ಲಿಸಿದ ಮನವಿಯಲ್ಲಿ ಮೂಲಭೂತ ಹಕ್ಕುಗಳ ನೇರ ಉಲ್ಲಂಘನೆಯಾಗುತ್ತಿದೆ ಮತ್ತು ಹಲವಾರು ರಾಜ್ಯಗಳಲ್ಲಿ ಘಟನೆಗಳು ನಡೆಯುತ್ತಿವೆ ಮತ್ತು ಮತ್ತಷ್ಟು ಹರಡುವ ಸಾಧ್ಯತೆಯಿರುವುದರಿಂದ ಈ ಸಮಸ್ಯೆಯ ಕುರಿತು ಸುಪ್ರೀಂ ಕೋರ್ಟ್ ಗಮನ ಹರಿಸುವುದು ಉತ್ತಮ ಹಾಗೂ ಸರಿಯಾದುದಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

click me!