
ಮುಂಬೈ (ಸೆ.25): ತಮ್ಮ ಮನೆ ಕೆಡವಿದ್ದನ್ನು ಪ್ರಶ್ನಿಸಿ ನಟಿ ಕಂಗನಾ ರಾಣಾವತ್ ಸಲ್ಲಿಸಿರುವ ಅರ್ಜಿ ಕುರಿತು ಸೋಮವಾರದೊಳಗೆ ಉತ್ತರ ನೀಡುವಂತೆ ಬೃಹನ್ಮುಂಬೈ ಪಾಲಿಕೆ ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್ ಸೂಚಿಸಿದೆ. ಕಂಗನಾ ಅರ್ಜಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಾಲಯ, ನಗರದಲ್ಲಿ ಭಾರೀ ಮಳೆ ಸುರಿಯುತ್ತಿದೆ.
ಇಂಥ ಹಂತದಲ್ಲಿ ಕೆಡವಿದ ಮನೆಯನ್ನು ಹಾಗೇ ಬಿಡಲಾಗದು. ಕಂಗನಾ ಸಲ್ಲಿಸಿರುವ ಅರ್ಜಿ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ನ್ಯಾಯಾಲಯ ಬಿಎಂಸಿ ಅಧಿಕಾರಿಗಳನ್ನು ಪ್ರಶ್ನಿಸಿತು. ಈ ವೇಳೆ ಉತ್ತರಿಸಲು ನಮಗೆ ಸಮಯಾವಕಾಶದ ಅಗತ್ಯವಿದೆ ಎಂದು ಹೇಳಿದಾಗ, ಈಗ ನೀವು ಹೆಚ್ಚಿನ ಸಮಯ ಕೇಳುತ್ತೀರಿ, ಬೇರೆ ಸಮಯದಲ್ಲಾದರೆ ನೀವು ಭಾರೀ ಆತುರದಲ್ಲಿರುತ್ತೀರಿ ಎಂದು, ಕೇವಲ ಒಂದು ದಿನದ ನೋಟಿಸ್ ನೀಡಿ, ಕಂಗನಾ ಮನೆ ಕೆಡವಿದ ಅಧಿಕಾರಿಗಳ ಕ್ರಮದ ಬಗ್ಗೆ ನ್ಯಾಯಾಧೀಶರು ಪರೋಕ್ಷವಾಗಿ ತಿವಿದರು.
'ಡ್ರಗ್ಸ್ ತೆಗೆದುಕೊಂಡಿದ್ದರೆ ಕಂಗನಾಗೂ ವಿಚಾರಣೆಯಾಗಲಿ' ಬಿಜೆಪಿ ನಾಯಕ! ..
ಗುಡುಗಿದ್ದ ಕಂಗನಾ
ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಹಾಗೂ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಶಿವಸೇನೆ ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿದಿರುವ ನಟಿ ಕಂಗನಾ ರಾಣಾವತ್ ಅವರು ಕೂಡ ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ‘ಉದ್ಧವ್ ಠಾಕ್ರೆ ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಅಡಗಿಸಿದಷ್ಟೂನನ್ನ ಧ್ವನಿ ಮತ್ತಷ್ಟುಪ್ರತಿಧ್ವನಿಗೊಳ್ಳುತ್ತದೆ’ ಎಂದು ಕಂಗನಾ ಗುಡುಗಿದ್ದರು.
ಶಿವಸೇನೆ ಹಾಗೂ ಉದ್ಧವ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕಂಗನಾ, ‘ಬಾಳಾ ಠಾಕ್ರೆ ಅವರು ಯಾವ ಚಿಂತನೆ ಆಧರಿಸಿ ಶಿವಸೇನೆಯನ್ನು ಸ್ಥಾಪಿಸಿದರೋ ಇಂದು ಆ ಚಿಂತನೆಯನ್ನು ಅಧಿಕಾರಕ್ಕಾಗಿ ಮಾರಿಕೊಳ್ಳಲಾಗಿದೆ. ಶಿವಸೇನೆ ಇಂದು ಸೋನಿಯಾ ಸೇನೆ ಆಗಿ ಬದಲಾಗಿದೆ. ಇದೊಂದು ಕಲಬೆರಕೆ ಸರ್ಕಾರ. ನನ್ನ ಮನೆ ಕೆಡವಿದವರನ್ನು ಪಾಲಿಕೆ ಸಿಬ್ಬಂದಿ ಎನ್ನಬೇಡಿ. ಗೂಂಡಾ ಎನ್ನಿ. ಸಂವಿಧಾನಕ್ಕೆ ಅವಮಾನ ಮಾಡಬೇಡಿ’ ಎಂದಿದ್ದರು.
‘ನಿಮ್ಮ ಅಪ್ಪನ (ಬಾಳಾ ಠಾಕ್ರೆ) ಅವರ ಉತ್ತಮ ಕೆಲಸಗಳು ನಿಮಗೆ ಸಂಪತ್ತು ತಂದುಕೊಟ್ಟವು. ನೀವು ನನ್ನ ಬಾಯಿ ಮುಚ್ಚಿಸಬಹುದು. ಆದರೆ ನನ್ನ ಧ್ವನಿ ಲಕ್ಷಾಂತರ ದನಿಗಳಾಗಿ ಪ್ರತಿಧ್ವನಿಸಲಿವೆ. ಎಷ್ಟುಬಾಯಿ ನೀವು ಮುಚ್ಚಿಸುತ್ತೀರಿ’ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ