
ದೆಹಲಿಯಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಮಿತಿಯ ಸಭೆಯಲ್ಲಿ ಅಸಮಾಧಾನ ವ್ಯಕ್ತಗೊಂಡಿದ್ದು, ರಾಜ್ಯಸಭಾ ಸದಸ್ಯರು ಸಭೆಯನ್ನು ಮಧ್ಯದಲ್ಲಿ ಬಿಟ್ಟು ಹೊರ ನಡೆದಿದ್ದಾರೆ. ಕಾರಣ, ಸಭೆಗೆ ಅವರಿಗೆ ತಿಳಿಸದೇ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಮತ್ತು ನಟ ಪ್ರಕಾಶ್ ರೈ ಅವರಿಗೆ ಆಹ್ವಾನ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಅಧಿಕಾರಿಗಳು ಸದಸ್ಯರಿಗೆ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದೇ ಇರುವುದರಿಂದ ಕೆಲ ರಾಜ್ಯಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರಹೋದರು.ಈ ಸಮಿತಿಯ ಸದಸ್ಯರಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಕೂಡ ಇದ್ದರು.
“ಇಂದು ಕೃಷಿ ಸ್ಥಾಯಿ ಸಮಿತಿ ಸಭೆ ನಡೆಯುತ್ತಿತ್ತು. ಕೃಷಿ ವಿಷಯಗಳ ಬಗ್ಗೆ ಚರ್ಚೆ ಮಾಡಲು ನಾವು ಸಭೆಗೆ ಹಾಜರಾಗಿದ್ದೇವೆ. ಯಾವುದೇ ಸರ್ಕಾರವಿರಲಿ, ಭೂಸ್ವಾಧೀನ ಸಮಸ್ಯೆ ಕುರಿತು ಮಾತನಾಡಬೇಕೆಂದು ಮೇಧಾ ಪಾಟ್ಕರ್ ಮತ್ತು ನಾನು ಇಲ್ಲಿ ಬಂದಿದ್ದೇವೆ. ದೇವನಹಳ್ಳಿ ಬಳಿಯ ರೈತರ ಸಮಸ್ಯೆಗಳ ಬಗ್ಗೆ ಹೇಳಲು ನಾವು ಹೋಗಿದ್ದೆವು. ಆದರೆ ಧೀರ್ಘಕಾಲದಿಂದಲೇ ಬಿಜೆಪಿ ಪಕ್ಷದ ಸಂಸದರು ಸಭೆಯಿಂದ ಹೊರಗೆ ನಡೆಯುತ್ತಿದ್ದರು. ಅವರ ನಡುವೆ ವಾಗ್ವಾದವೂ ನಡೆಯಿತು. ಬಿಜೆಪಿ ಸಂಸದರು ಸಭೆಯನ್ನು ರದ್ದುಗೊಳಿಸಿದರೆ, ಏಕೆ ರದ್ದು ಮಾಡಿದಿರಿ ಎಂದು ಕೇಳಿದ್ದೇವೆ. ಇದು ಜನರ ಸಮಸ್ಯೆಯಾಗಿದ್ದು, ಮೆಧಾ ಪಾಟ್ಕರ್ ಅವರನ್ನು ಕರೆದಿದ್ದು ಸರಿಯಾಗಿದೆ. ನಾನು ಕೂಡ ಸಭೆಗೆ ಹಾಜರಾದೆ. ಆದರೆ ಏಕಾಏಕಿ ಇಂತಹ ಸ್ಥಿತಿ ಉಂಟಾಯಿತು.”
“ನಾವು ಉಗ್ರವಾದಿಗಳಾ? ಬಾಂಬ್ ಹಾಕಲು ಬಂದಿರುವವರಾ? ಪ್ರಶ್ನೆ ಮಾಡುವಂತೂ ಹಕ್ಕು ನಮಗಿಲ್ಲವೇ? ಕೇಳಿಸಲು ಅವಕಾಶ ಕೊಡದೆ ಹೊರಟು ಹೋಗುವುದು ಸರಿಯೇ? ಬಿಜೆಪಿ introspection (ಆತ್ಮಪರಿಶೀಲನೆ) ಮಾಡಿಕೊಳ್ಳಬೇಕು,” ಎಂದು ಅವರು ಹೇಳಿದ್ದಾರೆ.
“ನಾನು ಹಾಗೂ ಮೇಧಾ ಪಾಟ್ಕರ್ ಮಾತ್ರವಲ್ಲ, ಉಳಿದವರನ್ನಾದರೂ ಕೇಳಬೇಕಲ್ಲವೆ? ಯಾವುದೇ ಸರ್ಕಾರವಿರಲಿ, ರೈತರ ಸಮಸ್ಯೆ ಮುಖ್ಯ. ದೇವನಹಳ್ಳಿ ರೈತರ ಸಮಸ್ಯೆಯನ್ನು ಮಂಡಿಸಲು ರಾಹುಲ್ ಗಾಂಧಿಯವರ ಭೇಟಿಗೆ ಸಮಯ ಕೇಳಿದ್ದೇವೆ. ಹೈಕಮಾಂಡ್ ಅವರನ್ನು ಭೇಟಿಯಾಗಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗುತ್ತಿದೆ. ಇಲ್ಲದಿದ್ದರೆ ನಾಳೆಯಿಂದಲೇ ನಾವು ಕೂಡ ಪ್ರತಿಭಟನೆ ಕುಳಿತೇವೆ. ಇದು ನಮ್ಮ ಹೋರಾಟ ಅಲ್ಲ, ರೈತರ ಹಕ್ಕಿಗಾಗಿ ನಡೆಯುವ ಹೋರಾಟ. ರೈತರ ಪರ ಸರ್ಕಾರಗಳು ಇರುತ್ತಿದೆಯೇ ಇಲ್ಲವೇ ಎಂಬ ಪ್ರಶ್ನೆ ನಿಲ್ಲುತ್ತದೆ,” ಎಂದು ಪ್ರಕಾಶ್ ರೈ ಹೇಳಿದ್ದಾರೆ.
“ಇಂದು ಸಭೆಯಲ್ಲಿ ದೇವೇಗೌಡರು ಕೂಡ ಇದ್ದರು. ನಾನು ಅವರನ್ನು ಕೇಳಿದೆ – ಏನಣ್ಣಾ, ಇದೆಲ್ಲಾ? ಅವರನ್ನು ಮಣ್ಣಿನ ಮಗ ಅಂತಾರೆ, ಆದರೆ ಸುಮ್ಮನೆ ಕೂತಿದ್ದರು. ಯಾರನ್ನು ನಂಬುವುದು ಎಂಬುದೇ ನಮಗೆ ತಿಳಿಯುತ್ತಿಲ್ಲ. ಭೂ ಕಾಯ್ದೆ ಬಗ್ಗೆ ಮಾತನಾಡಲು ಸಭೆ ಕರೆದಿದ್ದರು. ಆದರೆ ಜನರ ಸಮಸ್ಯೆ ಕೇಳದೆ ಸಭೆಯಿಂದ ಹೊರಟು ಹೋಗುತ್ತಾರೆ ಎಂದರೆ ಇದು ಯಾವ ರೀತಿ ನಡೆಯುತ್ತಿದೆ? ಅವರೇ ಆಹ್ವಾನ ಕೊಟ್ಟರು, ಆ ಆಹ್ವಾನಕ್ಕಾಗಿ ನಾನು ಬಂದೆ. ನಾವು ಪಾಸ್ ಇಲ್ಲದೆ ಒಳಗೆ ಹೋಗಲಾರೆವು. ನಾವು ಬೇರೆ ದೇಶದವರಾ? ನಾವು ಕೇಳಲು ಬಂದಿದ್ದೇವೆ. ಗೆಲ್ಲುವವರೆಗೂ ಪಕ್ಷ, ಗೆದ್ದ ಮೇಲೆ ಅದು ಸರ್ಕಾರ. ಇವತ್ತು ನಾವು ಕಾಂಗ್ರೆಸ್ ಸರ್ಕಾರಕ್ಕೂ ಪ್ರಶ್ನೆ ಕೇಳಲು ಬಂದಿದ್ದೇವೆ. ನೀವು ಹೇಳಿದ್ದೀರಾ ಅಂತ ರಾಹುಲ್ ಗಾಂಧಿಯನ್ನು ಕೇಳುತ್ತೇನೆ. ನೀವು ಸಭೆಗೆ ಕರೆದು ಸುಮ್ಮನಾಗಿದ್ದರೆ ಯಾರನ್ನು ಕೇಳಬೇಕು? ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಈ ವಿಚಾರವನ್ನು ತರಲಾಗುವುದು. ದೇವನಹಳ್ಳಿ ಹೋರಾಟದ ವರದಿಯನ್ನು ಹೈಕಮಾಂಡ್ಗೆ ನೀಡಬೇಕು. ಇದು ಕರ್ನಾಟಕ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಾದ ವಿಷಯ. ಇದು 13 ಹಳ್ಳಿಗಳ ರೈತರ ಹೋರಾಟ. ಕಲಾವಿದರು, ಸಾಹಿತಿಗಳು ಕೂಡ ರೈತರ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ರೈತರಿಗೆ ಅನ್ಯಾಯ ಆಗಬಾರದು. ಅವರಿಗೆ ಬೆಂಬಲ ನೀಡಬೇಕು. ಸರ್ಕಾರ ಸ್ಪಂದಿಸುವವರೆಗೂ ಹೋರಾಟ ಮುಂದುವರಿಸಲಾಗುತ್ತದೆ.”
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ