
ನವದೆಹಲಿ (ಜ.26): ಹಿಂದಿ ವಾಹಿನಿ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ನಡೆಸಿದ್ದು, ಇದರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಕಾರ್ಯವೈಖರಿ ಬಗ್ಗೆ ದೇಶದ ಜನರ ಚಿತ್ತ ಅರಿಯುವ ಪ್ರಯತ್ನ ನಡೆಸಲಾಗಿದೆ. ಜನವರಿ 2023 ರಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದಾರೆ. ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಜನರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಮೋದಿ ಸರ್ಕಾರದ ಒಟ್ಟಾರೆ ಕಾರ್ಯವೈಖರಿಯಿಂದ ನೀವು ಎಷ್ಟು ತೃಪ್ತರಾಗಿದ್ದೀರಿ, ಎನ್ಡಿಎ ಸರ್ಕಾರದ ದೊಡ್ಡ ಸಾಧನೆ ಏನು ಮತ್ತು ಮೋದಿ ಸರ್ಕಾರದ ದೊಡ್ಡ ವೈಫಲ್ಯ ಯಾವುದು ಎಂದು ಜನರನ್ನು ಪ್ರಶ್ನೆ ಮಾಡಲಾಗಿದೆ. ಅದರೊಂದಿಗೆ ಸಾಕಷ್ಟು ವಿವಾದಿತ ವಿಷಯಗಳಲ್ಲಿ ಮೋದಿ ಸರ್ಕಾರದ ನಿರ್ಧಾರಗಳ ಬಗ್ಗೆಯೂ ಪ್ರಶ್ನೆ ಮಾಡಲಾಗಿದೆ. ಕೆಲವು ಪ್ರಮುಖ ವಿಚಾರಗಳಲ್ಲಿ ದೇಶದ ಮನಸ್ಥಿತಿ ಹೇಗಿತ್ತು ಹಾಗೂ ಅವರ ಅಭಿಪ್ರಾಯ ಏನು ಎನ್ನುವುದರ ವಿವರ ಇಲ್ಲಿದೆ.
ಕೊರೋನಾ ನಿಯಂತ್ರಣ ಮೋದಿ ಸರ್ಕಾರದ ದೊಡ್ಡ ಸಾಧನೆ: ಮೂಡ್ ಆಫ್ ದ ನೇಷನ್ ಸರ್ವೇಯಲ್ಲಿ ಶೇ. 67ರಷ್ಟು ಮಂದಿ ಮೋದಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರೆ, ಶೇ.11 ರಷ್ಟು ಮಂದಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಇನ್ನು ಶೇ. 18 ರಷ್ಟು ಮಂದಿ ಮೋದಿ ಸರ್ಕಾರದ ಕೆಲಸ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. ಕರೋನಾ ವಿರುದ್ಧದ ಹೋರಾಟದ ವಿಜಯವನ್ನು ಜನರು ಮೋದಿ ಸರ್ಕಾರದ ದೊಡ್ಡ ಸಾಧನೆ ಎಂದು ಪರಿಗಣಿಸಿದ್ದಾರೆ. 20 ರಷ್ಟು ಜನರು ಕರೋನಾವನ್ನು ನಿಭಾಯಿಸಿದ್ದೇ ಮೋದಿ ಸರ್ಕಾರದ ದೊಡ್ಡ ಯಶಸ್ಸು ಎಂದಿದ್ದಾರೆ. 14 ಪ್ರತಿಶತ ಜನರು 370 ನೇ ವಿಧಿಯನ್ನು ತೆಗೆದುಹಾಕಿದ್ದೇ ದೊಡ್ಡ ಸಾಧನೆ ಎಂದಿದ್ದಾರೆ. 11 ಪ್ರತಿಶತದಷ್ಟು ಜನರು ರಾಮ ಮಂದಿರ ನಿರ್ಮಾಣ ಮತ್ತು 8 ಪ್ರತಿಶತ ಜನರು ಜನ ಕಲ್ಯಾಣ ಯೋಜನೆ ಮೋದಿ ಸರ್ಕಾರದ ದೊಡ್ಡ ಸಾಧನೆ ಎಂದು ಹೇಳಿದ್ದಾರೆ.
ಇದೇ ವೇಳೆ ಮೋದಿ ಸರ್ಕಾರದ ದೊಡ್ಡ ವೈಫಲ್ಯ ಯಾವುದು ಎನ್ನುವ ಪ್ರಶ್ನೆಗೆ ಶೇ. 25ರಷ್ಟು ಜನರು ಹಣದುಬ್ಬರ ಎಂದು ಹೇಳಿದ್ದರೆ, ಶೇ. 17ರಷ್ಟು ಮಂದಿ ನಿರುದ್ಯೋಗ ಎಂದಿದ್ದಾರೆ. ಕೋವಿಡ್-19 ವಿಚಾರದಲ್ಲಿ ಸರ್ಕಾರದ ಹೋರಾಟವನ್ನು ವಿಫಲವಾಗಿದೆ ಎಂದು ಶೇ. 8ರಷ್ಟು ಮಂದಿ ಹೇಳಿದ್ದಾರೆ. ಇನ್ನು ಆರ್ಥಿಕ ಅಭಿವೃದ್ಧಿ ವೈಫಲ್ಯ ಎಂದು ಶೇ. 6ರಷ್ಟು ಮಂದಿ ಹೇಳಿದ್ದಾರೆ. ಇನ್ನು ವಿರೋಧಪಕ್ಷವಾಗಿ ಕಾಂಗ್ರೆಸ್ನ ಕೆಲಸ ಯಾವ ರೀತಿ ಇದೆ ಎನ್ನುವ ಪ್ರಶ್ನೆಗೆ, ಶೇ.19ರಷ್ಟು ಜನರು ಅತ್ಯುತ್ತಮ ಎಂದು ಹೇಳಿದ್ದರೆ, ಶೇ.15ರಷ್ಟು ಜನ ಉತ್ತಮ ಎಂದಿದ್ದಾರೆ, ಶೇ.19ರಷ್ಟು ಮಂದಿ ಸರಾಸರಿ ಎಂದಿದ್ದರೆ, ಶೇ.25ರಷ್ಟು ಮಂದಿ ಕೆಟ್ಟದಾಗಿದೆ ಎಂದಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಬಗ್ಗೆಯೂ ಜನ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಶೇ. 27ರಷ್ಟು ಮಂದಿ ಇದು ಉತ್ತಮ ನಿರ್ಧಾರ ಎಂದು ಹೇಳಿದ್ದಲ್ಲದೆ, ಜನರೊಂದಿಗೆ ಕನೆಕ್ಟ್ ಆಗಿರಲು ಉತ್ತಮ ಮಾರ್ಗ ಎಂದಿದ್ದಾರೆ. ಇನ್ನು ಶೇ. 37ರಷ್ಟು ಮಂದಿ ಪಕ್ಷವನ್ನು ಬಲಪಡಿಸಲು ಇದು ಉಪಯುಕ್ತ ಎಂದಿದ್ದಾರೆ. ಇನ್ನು ಶೇ. 13ರಷ್ಟು ಮಂದಿ ಮಾತ್ರವೇ ಇದರಿಂದ ರಾಹುಲ್ ಗಾಂಧಿ ಇಮೇಜ್ ಹೆಚ್ಚಾಗಲಿದೆ ಎಂದಿದ್ದಾರೆ. ಶೇ. 9 ಮಂದಿ ಮಾತ್ರವೇ ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ನಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ ಎಂದಿದ್ದಾರೆ.
ವಿವಾದದ ನಡುವೆ ಕೇರಳದಲ್ಲಿ ಕಾಂಗ್ರೆಸ್ನಿಂದ ಮೋದಿ ವಿರುದ್ದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ!
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆ ತರಲು ಯಾರು ಸೂಕ್ತ ಎನ್ನುವ ಪ್ರಶ್ನೆಗೆ, ಶೇ. 26ರಷ್ಟು ಮಂದಿ ರಾಹುಲ್ ಗಾಂಧಿ ಎಂದು ಹೇಳಿದ್ದರೆ, ಶೇ. 16ರಷ್ಟು ಮಂದಿ ಸಚಿನ್ ಪೈಲಟ್, ಶೇ.12ರಷ್ಟು ಮಂದಿ ಮನಮೋಹನ್ ಸಿಂಗ್, ಶೇ. 8ರಷ್ಟು ಮಂದಿ ಪ್ರಿಯಾಂಕಾ ಗಾಂಧಿ ಎಂದು ಹೇಳಿದ್ದರೆ ಶೇ. 3ರಷ್ಟು ಮಂದಿ ಮಾತ್ರವೇ ಹಾಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರು ತೆಗೆದುಕೊಂಡಿದ್ದಾರೆ.
Republic Day: ರಾಜಸ್ಥಾನಿ ಬಂದೇಜ್ ಟರ್ಬನ್ನಲ್ಲಿ ಮಿಂಚಿದ ಪ್ರಧಾನಿ ನರೇಂದ್ರ ಮೋದಿ!
ಇನ್ನು ವಿರೋಧಪಕ್ಷದಲ್ಲಿ ನಾಯಕರಾಗಿ ಯಾರು ಸೂಕ್ತ ಎನ್ನುವ ಪ್ರಶ್ನೆಗೆ, ಶೇ. 24ರಷ್ಟು ಮಂದಿ ಅರವಿಂದ್ ಕೇಜ್ರಿವಾಲ್ ಹೆಸರು ಹೇಳಿದ್ದರೆ, ಶೇ. 20ರಷ್ಟು ಮಂದಿ ಮಮತಾ ಬ್ಯಾನರ್ಜಿ, ಶೇ. 13ರಷ್ಟು ಮಂದಿ ರಾಹುಲ್ ಗಾಂಧಿ ಹಾಗೂ ಶೇ. 5ರಷ್ಟು ಮಂದಿ ನವೀನ್ ಪಟ್ನಾಯಕ್ ಹೆಸರನ್ನು ತೆಗೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ