
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜಕೀಯ ಜಿದ್ದಾಜಿದ್ದಿ ಹೊಸ ಹಂತಕ್ಕೆ ತಲುಪಿದೆ. ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಇಂದು ಸಂಸತ್ತಿಗೆ ಆಗಮಿಸಿದ ರೀತಿ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ತಮ್ಮ ವಿಶಿಷ್ಟ ವ್ಯಂಗ್ಯ ಮತ್ತು ಚುಚ್ಚುಮಾತುಗಳಿಗೆ ಹೆಸರಾದ ಅವರು, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಗುರಿಯಾಗಿಸಿಕೊಂಡು 'ಕನ್ನಡಕ'ದ ಮೂಲಕ ಹೊಸ ರೀತಿಯ ವಿಡಂಬನೆ ಮಾಡಿದ್ದಾರೆ.
ರೇಣುಕಾ ಚೌಧರಿ ಅವರು ಧರಿಸಿದ್ದ ಕನ್ನಡಕದ ಎರಡು ಗಾಜುಗಳ ಮೇಲೆ 'ಮೋದಿಯಾ' (Modiya) ಮತ್ತು 'ಬಿಂದ್' (Bind) ಎಂದು ಬರೆಯಲಾಗಿತ್ತು. ಹಿಂದಿಯಲ್ಲಿ ಕಣ್ಣಿನ ಪೊರೆಯನ್ನು 'ಮೋಟಿಯಾಬಿಂದ್' (Motiyabind) ಎಂದು ಕರೆಯಲಾಗುತ್ತದೆ. ಇದನ್ನೇ ಬಳಸಿಕೊಂಡು ಮೋದಿ ಹೆಸರನ್ನು ಸೇರಿಸಿ 'ಮೋದಿಯಾ-ಬಿಂದ್' ಎಂದು ಬರೆಯುವ ಮೂಲಕ ಅವರು ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
ಈ ವಿಚಿತ್ರ ಕನ್ನಡಕದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ರೇಣುಕಾ ಚೌಧರಿ ಅವರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಸಮಸ್ಯೆಗಳು ಈ ಸರ್ಕಾರದ ಅವಧಿಯಲ್ಲಿ ಯಾರಿಗೂ ಕಾಣಿಸುತ್ತಿಲ್ಲ. ವಿಶೇಷವಾಗಿ ಮೋದಿಯವರ ಅಂಧಭಕ್ತರಿಗೆ ದೇಶದ ವಾಸ್ತವ ಕಾಣುತ್ತಿಲ್ಲ. ಅವರಿಗೆ ಈ ಮೋದಿಯಾ-ಬಿಂದ್ ಕನ್ನಡಕ ಬೇಕೇ ಬೇಕು ಎಂದು ವ್ಯಂಗ್ಯವಾಡಿದರು. ಅಷ್ಟೇ ಅಲ್ಲದೆ, ಈ ಕನ್ನಡಕವನ್ನು ನಾನೇ ತಯಾರು ಮಾಡಿದ್ದಲ್ಲ, ಜನರು ರಸ್ತೆಗಳಲ್ಲಿ ಇದನ್ನು ಉಚಿತವಾಗಿ ಹಂಚುತ್ತಿದ್ದಾರೆ ಎಂದು ಹೇಳುವ ಮೂಲಕ ಮೋದಿ ಸರ್ಕಾರದ ಬಗ್ಗೆ ಜನಸಾಮಾನ್ಯರಲ್ಲಿ ಆಕ್ರೋಶವಿದೆ ಎಂಬರ್ಥದಲ್ಲಿ ಚುಚ್ಚುಮಾತುಗಳನ್ನಾಡಿದರು.
ಸದ್ಯ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ವಿವಿಧ ವಿಚಾರಗಳ ಬಗ್ಗೆ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ನಡುವೆ ರೇಣುಕಾ ಚೌಧರಿ ಅವರ ಈ ವಿನೂತನ ಮತ್ತು ಹಾಸ್ಯಭರಿತ ಪ್ರತಿಭಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಶಬ್ದಗಳ ಮೂಲಕ ಮಾಡುವ ಟೀಕೆಗಿಂತಲೂ, ಈ ರೀತಿ ದೃಶ್ಯ ರೂಪದಲ್ಲಿ ನೀಡಿದ 'ರಾಜಕೀಯ ಪಂಚ್' ಬಿಜೆಪಿ ಪಾಳೆಯಕ್ಕೆ ಕೆರಳುವಂತೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ