ಹಿಂದಿ ಅಧಿಕಾರಿ ‘ಹೇರಿಕೆ’ಗೆ ಮಿಜೋರಂ ಸಿಎಂ ವಿರೋಧ!

By Suvarna NewsFirst Published Nov 10, 2021, 7:42 AM IST
Highlights

* ಸಚಿವರಿಗೆ ಹಿಂದಿ ಗೊತ್ತಿಲ್ಲ, ಮಿಜೋ ಭಾಷಿಕ ಸಿಎಸ್‌ ಕಳಿಸಿ

* ಹಿಂದಿ ಅಧಿಕಾರಿ ‘ಹೇರಿಕೆ’ಗೆ ಮಿಜೋರಂ ಸಿಎಂ ವಿರೋಧ

* ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಎನ್‌ಡಿಎ ಸಿಎಂ ಪತ್ರ

ಗುವಾಹಟಿ(ನ.10): ಕರ್ನಾಟಕ (Karnataka) ಸೇರಿದಂತೆ ಇತರೆಡೆ ಒತ್ತಾಯ ಪೂರ್ವಕವಾಗಿ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೇ, ಮಿಜೋರಂ ಮುಖ್ಯಮಂತ್ರಿ ಪು ಝೊರಾಮ್‌ತಂಗಾ (Mizoram Chief Minister Pu Zoramthang) ಅವರು, ‘ಮಿಜೋ ಭಾಷೆ (Mizo Language) ಗೊತ್ತಿರುವ ಅಧಿಕಾರಿಗಳನ್ನು ಮಾತ್ರವೇ ರಾಜ್ಯದ ಮುಖ್ಯ ಕಾರ್ಯದರ್ಶಿಗಳ (Chief Secretary) ಸ್ಥಾನಕ್ಕೆ ನೇಮಿಸಬೇಕು. ಈಗ ನೇಮಕವಾಗಿರುವ ಹಿಂದಿ ಭಾಷಿಕ ಅಧಿಕಾರಿ ಬೇಡ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Home Minister Amit Shah) ಅವರಿಗೆ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರವು ರೇಣು ಶರ್ಮಾ(Renu Sharma) ಅವರನ್ನು ಮಿಜೋರಂ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ನಿಯೋಜಿಸಿತ್ತು. ರೇಣು ಅವರಿಗೆ ಹಿಂದಿ ಹಾಗೂ ಇಂಗ್ಲಿಷ್‌ ಮಾತ್ರ ಗೊತ್ತಿದ್ದು, ಮಿಜೋ ಭಾಷೆಯ ಜ್ಞಾನ ಅಷ್ಟಿಲ್ಲ. ಇದು ವಿವಾದದ ಮೂಲವಾಗಿದೆ.

ಈ ಸಂಬಂಧ ಶಾ ಅವರಿಗೆ ಪತ್ರ ಬರೆದಿರುವ ಎನ್‌ಡಿಎ (NDA) ಮೈತ್ರಿಕೂಟದ ಮುಖ್ಯಮಂತ್ರಿ ಝೊರಾಮ್‌ತಂಗಾ ಅವರು, ‘ರಾಜ್ಯದ ಜನರು ಮತ್ತು ಸಚಿವರಿಗೆ ಹಿಂದಿ ಭಾಷೆ ಗೊತ್ತಿಲ್ಲ. ಜತೆಗೆ ಕೆಲವು ಸಚಿವರಿಗೆ ಇಂಗ್ಲಿಷ್‌ ಭಾಷೆಯೂ ಗೊತ್ತಿಲ್ಲ. ಹೀಗಾಗಿ ಮಿಜೋ ಭಾಷೆ ಗೊತ್ತಿಲ್ಲದ 1998ರ ಬ್ಯಾಚ್‌ ಐಎಎಸ್‌ ಅಧಿಕಾರಿ ರೇಣು ಶರ್ಮಾ ಅವರನ್ನು ಬದಲಿಸಿ, ಅವರ ಸ್ಥಾನಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ.ಸಿ.ರಾಮ್‌ತಂಗಾ (J.C. Ramthanga) ಅವರನ್ನು ನಿಯೋಜಿಸಬೇಕು. ಕೇಂದ್ರ ಸರ್ಕಾರ ಹೊರಡಿಸಿದ ತನ್ನ ಆದೇಶದಲ್ಲಿ ಮಾರ್ಪಾಡು ಮಾಡಬೇಕು’ ಎಂದು ಕೋರಿದ್ದಾರೆ.

‘ಸ್ಥಳೀಯ ಭಾಷೆ ಗೊತ್ತಿಲ್ಲದ ಮುಖ್ಯ ಕಾರ್ಯದರ್ಶಿಗಳು ಪರಿಣಾಮಕಾರಿ ಮತ್ತು ಸಮರ್ಥ ಅಧಿಕಾರಿ ಎನ್ನಿಸಿಕೊಳ್ಳುವುದಿಲ್ಲ. ಇದೇ ಕಾರಣಕ್ಕೆ ಕೇಂದ್ರದಲ್ಲಿ ಯುಪಿಎ ಅಥವಾ ಎನ್‌ಡಿಎ ಪಕ್ಷಗಳೇ ಆಡಳಿತದಲ್ಲಿದ್ದರೂ ಈವರೆಗೆ ಸ್ಥಳೀಯ ಭಾಷೆ ಗೊತ್ತಿಲ್ಲದ ಅಧಿಕಾರಿಗಳನ್ನು ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಿರಲಿಲ್ಲ. ಇತರೆ ರಾಜ್ಯಗಳಿಗೂ ಇದೇ ನಿಯಮ ಅನ್ವಯವಾಗಬೇಕು’ ಎಂದು ಮುಖ್ಯಮಂತ್ರಿ ಆಗ್ರಹಿಸಿದ್ದಾರೆ.

ಮಿಜೋರಾಂ ಮುಖ್ಯಮಂತ್ರಿ ಝೋರಾಮ್‌ತಂಗ ತಮ್ಮ ಪತ್ರದಲ್ಲಿ ಅಮಿತ್ ಶಾ ಅವರಿಗೆ 'ತಾವು ಮೊದಲಿನಿಂದಲೂ NDA ಯ ನಿಷ್ಠಾವಂತ ಪಾಲುದಾರ' ಎಂಬ ವಿಚಾರವನ್ನು ನೆನಪಿಸಿ,. ಜೊತೆಗೆ ತಮ್ಮ ವಿನಂತಿಯನ್ನು ಪರಿಶೀಲಿಸಲಾಗುವುದು ಎಂದು ಆಶಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ 'ಈಶಾನ್ಯ ರಾಜ್ಯಗಳಲ್ಲಿ ನಾನು ಮೊದಲಿನಿಂದಲೂ ಈ ಸಮಯದವರೆಗೆ ಎನ್‌ಡಿಎಯ ನಿಷ್ಠಾವಂತ ಪಾಲುದಾರನಾಗಿದ್ದೇನೆ. ಆದ್ದರಿಂದ, ಎನ್‌ಡಿಎ ಜೊತೆಗಿನ ಈ ನಿಷ್ಠಾವಂತ ಸ್ನೇಹಕ್ಕಾಗಿ ನಾನು ವಿಶೇಷ ಅನುಗ್ರಹ ಮತ್ತು ಪರಿಗಣನೆಗೆ ಅರ್ಹನಾಗಿದ್ದೇನೆ ಎಂದು ನಾನು ನಂಬುತ್ತೇನೆ. ನನ್ನ ಮನವಿಯನ್ನು ಕಡೆಗಣಿಸಿದರೆ ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿಯವರಿಗೂ ನೀಡಲಾದ ಮುಖ್ಯ ಕಾರ್ಯದರ್ಶಿಯ ಪ್ರಸ್ತಾಪವನ್ನು ನನಗೆ ನಿರಾಕರಿಸಿದರೆ, ಕಾಂಗ್ರೆಸ್ ಪಕ್ಷ ಮತ್ತು ಇತರ ಎಲ್ಲಾ ವಿರೋಧ ಪಕ್ಷಗಳು ಎನ್‌ಡಿಎ ಪಾಲುದಾರಿಕೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ನನ್ನನ್ನು ಅಪಹಾಸ್ಯ ಮಾಡುತ್ತವೆ. ಆದ್ದರಿಂದ ಆದೇಶವನ್ನು ಮಾರ್ಪಡಿಸಲು ಮತ್ತು ನನ್ನ ಪ್ರಸ್ತಾವನೆಯನ್ನು ದಯೆಯಿಂದ ಸ್ವೀಕರಿಸಲು ನಾನು ನಿಮ್ಮನ್ನು ಮನಃಪೂರ್ವಕವಾಗಿ ವಿನಂತಿಸುತ್ತೇನೆ'ಎಂದು ಜೊರಾಮ್‌ತಂಗಾ ಹೇಳಿದರು.

ಎಲ್ಲ ರಾಜ್ಯಗಳಿಗೂ ಸ್ಥಳೀಯ ಅಧಿಕಾರಿ

ನಮ್ಮ ರಾಜ್ಯದ ಜನರಿಗೆ ಮತ್ತು ಸಚಿವರಿಗೆ ಹಿಂದಿ ಗೊತ್ತಿಲ್ಲ. ಕೆಲ ಸಚಿವರಿಗೆ ಇಂಗ್ಲಿಷ್‌ ಕೂಡ ಗೊತ್ತಿಲ್ಲ. ಹೀಗಾಗಿ ಮಿಜೋ ಭಾಷೆಯ ಮುಖ್ಯ ಕಾರ್ಯದರ್ಶಿಯನ್ನು ನೇಮಿಸಿ. ಎಲ್ಲ ರಾಜ್ಯಗಳಿಗೂ ಇಂತಹುದೇ ನಿಯಮ ಅನ್ವಯವಾಗುವಂತೆ ನೋಡಿಕೊಳ್ಳಿ.

- ಪುಝೊರಾಮ್‌ತಂಗಾ, ಮಿಜೋರಂ ಮುಖ್ಯಮಂತ್ರಿ

ಯಾರು ಈ ರೇಣು ಶರ್ಮಾ?

1988 ರ ಬ್ಯಾಚ್‌ನ AGMUT ಕೇಡರ್ ಐಎಎಸ್ ಅಧಿಕಾರಿಯಾಗಿರುವ ರೇಣು ಶರ್ಮಾ ಅವರನ್ನು ನವೆಂಬರ್ 1 ರಿಂದ ಮಿಜೋರಾಂನ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲು ಅಕ್ಟೋಬರ್ 28 ರಂದು ಕೇಂದ್ರವು ನೇಮಿಸಿತು. ಅದೇ ದಿನ, ಮಿಜೋರಾಂ ಸರ್ಕಾರವು ಜೆಸಿ ರಾಮತಂಗ ಅವರನ್ನು ನವೆಂಬರ್ 1 ರಿಂದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲು ಆದೇಶಿಸಿತು, ಹೀಗಾಗಿ ಮಿಜೋರಾಂ ಈಗ ಇಬ್ಬರು ಮುಖ್ಯ ಕಾರ್ಯದರ್ಶಿಗಳನ್ನು ಹೊಂದಿದೆ.

click me!