
ಅಮೇಥಿ(ಫೆ.07) ಮಗನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. 11 ವಯಸ್ಸಿನಲ್ಲಿ ಮಾರ್ಬಲ್ನಲ್ಲಿ ಆಡವಾಟಡುತ್ತಿದ್ದ ಮಗನ ಮೇಲೆ ಪೋಷಕರು ರೇಗಾಡಿದ್ದಾರೆ. ಕ್ಷುಲ್ಲಕ ಜಗಳಕ್ಕೆ ಮಗ ನಾಪತ್ತೆಯಾಗಿದ್ದ. ಪೊಲೀಸ್ ದೂರು ನೀಡಲಾಗಿತ್ತು, ಹುಡಕಾಟ ನಡೆದಿತ್ತು. ಪೋಷಕರು, ಕುಟುಂಬಸ್ಥರು ಹುಡುಕಾಡಿದ್ದರು. ಆದರೆ ಪತ್ತೆ ಇರಲಿಲ್ಲ. ಕಳೆದ 2 ದಶಕಗಳಿಂದ ಹುಡುಕಿದ್ದಾರೆ. ಮಗ ಇಲ್ಲದ ನೋವಿನಲ್ಲಿ ಬದುಕು ಸಾಗಿಸಿದ್ದಾರೆ. ಆದರೆ ಬರೋಬ್ಬರಿ 22 ವರ್ಷಗಳ ಬಳಿಕ ಮಗ ಇದಕ್ಕಿದ್ದಂತೆ ಮರಳಿ ಬಂದಿದ್ದಾನೆ. ಆದರೆ ಸನ್ಯಾಸಿಯಾಗಿ ಮರಳಿದ್ದಾನೆ. ಮಗನ ನೋಡಲು ಓಡೋಡಿ ಬಂದ ಪೋಷಕರಿಗೆ ಮಗನ ಮುದ್ದಾಡಲು ಸಾಧ್ಯವಾಗದೇ, ಸನ್ಯಾಸತ್ವ ಒಪ್ಪಿಕೊಳ್ಳಲು ಸಾಧ್ಯವಾಗದೇ ಕಣ್ಣೀರಿಟ್ಟ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.
ರತಿಪಾಲ್ ಸಿಂಗ್ ತನ್ನ ಕುಟುಂಬದ ಜೊತೆ ದೆಹಲಿಯಲ್ಲಿ ವಾಸವಿದ್ದಾರೆ. ಕೆಲಸ, ವ್ಯವಾಹರದ ಮೂಲಕ ಪತ್ನಿ, ಮಗ ಸೇರಿದ ಕುಟುಂಬ ಖುಷಿಯಾಗಿ ಸಾಗುತ್ತಿತ್ತು. 2002ರಲ್ಲಿ ರತಿಪಾಲ್ ಸಿಂಗ್ ಹಾಗೂ ಭಾನುಮತಿ ಪುತ್ರ ಪಿಂಕು ಸಿಂಗ್ ಪೋಷಕರ ವಿರುದ್ದ ಆಕ್ರೋಶಗೊಂಡಿದ್ದ. ಮಾರ್ಬಲ್ನಲ್ಲಿ ಆಟವಾಡುತ್ತಿದ್ದ ಮಗನಿಗೆ ರತಿಪಾಲ್ ಸಿಂಗ್ ಗದರಿದ್ದಾರೆ. ಇತ್ತ ತಾಯಿ ಕೂಡ ಬೈದಿದ್ದಾರೆ. ಈ ಆಕ್ರೋಶಕ್ಕೆ 11ನೇ ವಯಸ್ಸಿನ ಪಿಂಕು ಸಿಂಗ್ ಮನೆ ಬಿಟ್ಟು ಹೋಗಿದ್ದ.
ಪಿಂಕು ಸಿಂಗ್ ಹುಡುಕಾಟಕ್ಕೆ ಎಲ್ಲಾ ಪ್ರಯತ್ನ ಮಾಡಿದ್ದರು. ಪೊಲೀಸರ ನೆರವು, ಕುಟುಂಬಸ್ಥರು, ಆಪ್ತರ ನೆರವು ಪಡೆದಿದ್ದರು. ಆದರೆ ಎಲ್ಲೂ ಸುಳಿವು ಇರಲಿಲ್ಲ. ಇತ್ತ ರತಿಪಾಲ್ ಸಿಂಗ್ ಅವರ ಮೂಲ ಮನೆ ಅಮೇಥಿಯ ಖರೌಲಿ ಗ್ರಾಮ, ಪಟ್ಟಣ ಸೇರಿದಂತೆ ಎಲ್ಲೆಡೆ ಹುಡುಕಾಡಿದ್ದರು. ಆದರೆ ಸುಳಿವು ಪತ್ತೆಯಾಗಲಿಲ್ಲ. ಹೀಗೆ ಹುಡುಕಾಟದಲ್ಲಿ 2 ದಶಕಗಳೇ ಕಳೆದಿದೆ. ಮಗನ ನೆನಪಿನಲ್ಲೇ ಪೋಷಕರು ಬದುಕು ಸಾಗಿಸಿದ್ದಾರೆ.
ಹೀಗಿರುವಾಗ ದೆಹಲಿಯಲ್ಲಿರುವ ರತಿಪಾಲ್ ಹಾಗೂ ಭಾನುಮತಿಗೆ ತನ್ನ ಊರಾದ ಖರೌಲಿಯಿಂದ ಕರೆಯೊಂದು ಬಂದಿತ್ತು. ನಿಮ್ಮ ಮಗ ಮೂಲ ಮನೆಗೆ ಮರಳಿದ್ದಾನೆ. ತಕ್ಷಣವೇ ಬನ್ನಿ ಎಂಬ ಮಾಹಿತಿ ಆದಾಗಿತ್ತು. ಪೋಷಕರ ಸಂತಸಕ್ಕೆ ಪಾರವೇ ಇರಲಿಲ್ಲ. ದೆಹಲಿಯಿಂದ ಓಡೋಡಿ ಬಂದ ಪೋಷಕರಿಗೆ ಆಘಾತ ಕಾದಿತ್ತು.
ಕಾರಣ ಮಗ ಸನ್ಯಾಸಿಯಾಗಿದ್ದ. ಸಂತಸದಲ್ಲಿ ಆಗಮಿಸಿದ ಪೋಷಕರಿಗೆ ಮಗನನ್ನು ಅಪ್ಪಿಕೊಳ್ಳಲು, ಮುದ್ದಾಡಲು ಸಾಧ್ಯವಾಗಲಿಲ್ಲ. ತಾಯಿ ಮುಂದೆ ಸನ್ಯಾಸಿ ಭಿಕ್ಷೆಯ ಜಾನಪದ ಹಾಡು ಹೇಳಿದ್ದಾನೆ. ಇತ್ತ ತಾಯಿ ಹಾಗೂ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಾಯಿಯಿಂದ ಭಿಕ್ಷೆ ಪಡೆದು ಮರಳಿದ್ದಾನೆ. ಪೋಷಕರು, ಕುಟುಂಬಸ್ಥರು ಅದೆಷ್ಟೇ ಒತ್ತಾಯಿಸಿದರೂ ಮಗ ಮಾತ್ರ ಮನೆಯಲ್ಲಿ ಉಳಿಯುವ ನಿರ್ಧಾರ ಮಾಡಲಿಲ್ಲ.
ಇದೇ ವೇಳೆ ತನ್ನ ಪುತ್ರ ಸದ್ಯಕ್ಕೆ ಆಶ್ರಯ ಪಡೆದಿರುವ ಧಾರ್ಮಿಕ ಕೇಂದ್ರ 11 ಲಕ್ಷ ರೂಪಾಯಿಗೆ ಬೇಡಿಕೆ ಇಡುತ್ತಿದೆ. 11 ಲಕ್ಷ ರೂಪಾಯಿ ನೀಡಿದರೆ ಮಗನನ್ನು ಸನ್ಯಾಸತ್ವದಿಂದ ಮಕ್ತಿಕೊಡಿಸುವುದಾಗಿ ಹೇಳಿದೆ ಎಂದಿದ್ದಾರೆ. ನನ್ನ ಬಳಿ ಅಷ್ಟು ಮೊತ್ತವಿಲ್ಲ, ನಾನು ಹೇಗೆ ಪಾವತಿ ಮಾಡಲಿ. ಪೊಲೀಸರು ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ನಮಗೆ ಪುತ್ರನ ಮರಳಿಸಿ ಎಂದು ತಂದೆ ರಿತಿಲಾಲ್ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ