
ಚೆನ್ನೈ: ವಿಚ್ಛೇದನ ನಂತರವೂ ಮರುಮದುವೆಯಾಗಲು ವರ್ಷಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಇಂದಿನ ಕಾನೂನು ವ್ಯವಸ್ಥೆಯಲ್ಲಿದೆ. ಆದರೆ ಮದ್ರಾಸ್ ಹೈಕೋರ್ಟ್ ಈ ಬಗ್ಗೆ ಅತ್ಯಂತ ಪ್ರಮುಖವಾದ ತೀರ್ಪೊಂದನ್ನು ನೀಡಿದೆ. ಮದುವೆಯಾಗುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಮಾನವ ಹಕ್ಕು. ನ್ಯಾಯಾಲಯದಲ್ಲಿ ಮೇಲ್ಮನವಿ ಬಾಕಿ ಇದೆ ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯ ಜೀವನವನ್ನು ವರ್ಷಗಟ್ಟಲೆ ಅಮಾನತಿನಲ್ಲಿ ಇಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಎಂ.ಡಿ. ಸುಮತಿ ಅವರಿದ್ದ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. 2021ರಲ್ಲಿ ಕೌಟುಂಬಿಕ ನ್ಯಾಯಾಲಯವೊಂದು ಕ್ರೌರ್ಯದ ಆಧಾರದ ಮೇಲೆ ಮಹಿಳೆಗೆ ವಿಚ್ಛೇದನ ನೀಡಿತ್ತು. ಇದನ್ನು ಪ್ರಶ್ನಿಸಿ ಆಕೆಯ ಪತಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಕಾನೂನು ಪ್ರಕ್ರಿಯೆ ವರ್ಷಗಟ್ಟಲೆ ಎಳೆದಾಡಿತು. ಈ ನಡುವೆ ಮಹಿಳೆ ಮತ್ತೊಂದು ಮದುವೆಯಾದರು. ಇದನ್ನು ಪ್ರಶ್ನಿಸಿದ ಪತಿಗೆ ಹೈಕೋರ್ಟ್ ತಪರಾಕಿ ನೀಡಿದೆ.
ಕೆಳಹಂತದ ನ್ಯಾಯಾಲಯ ವಿಚ್ಛೇದನ ನೀಡಿದ ನಂತರ ಆ ತೀರ್ಪಿಗೆ ತಡೆ (Stay) ತರಲು ಮೇಲ್ಮನವಿ ಸಲ್ಲಿಸಲು ಕೇವಲ ಎರಡು ತಿಂಗಳ ಕಾಲಾವಕಾಶ ನೀಡಬೇಕು. ಈ ಅವಧಿಯಲ್ಲಿ ತಡೆ ಸಿಗದಿದ್ದರೆ, ಆ ವ್ಯಕ್ತಿ ಕಾನೂನುಬದ್ಧವಾಗಿ ಮರುಮದುವೆಯಾಗಲು ಮುಕ್ತನಾಗಿರಬೇಕು ಎಂದು ಕೋರ್ಟ್ ಹೇಳಿದೆ.
1955ರ ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ವಿಚ್ಛೇದನದ ಮೇಲ್ಮನವಿಗಳು ವರ್ಷಗಟ್ಟಲೆ ಬಾಕಿ ಉಳಿಯುವುದರಿಂದ ಜನರ ವೈಯಕ್ತಿಕ ಬದುಕು ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಕಾನೂನುಬದ್ಧವಾಗಿ ಈಗಾಗಲೇ ಸತ್ತು ಹೋಗಿರುವ ಮದುವೆಯ ಬಂಧವನ್ನು ಕೇವಲ ಕಾಗದದ ಮೇಲೆ ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇದು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಧೀಶರು ಕಟುವಾಗಿ ಹೇಳಿದ್ದಾರೆ.
ಬಹಳಷ್ಟು ಪ್ರಕರಣಗಳಲ್ಲಿ ಒಬ್ಬರು ವಿಚ್ಛೇದನ ನೀಡಿದರೂ, ಮತ್ತೊಬ್ಬರು ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತಾರೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂತಹ ಮೇಲ್ಮನವಿಗಳ ವಿಲೇವಾರಿಗೆ ದಶಕಗಳೇ ಬೇಕಾಗುತ್ತವೆ. ಅಲ್ಲಿಯವರೆಗೆ ವಿಚ್ಛೇದನ ಪಡೆದವರು ಮರುಮದುವೆಯಾಗದೆ ಕಾಯುವುದು ಅವರ ಜೀವನದ ಅಮೂಲ್ಯ ವರ್ಷಗಳನ್ನು ವ್ಯರ್ಥ ಮಾಡಿದಂತೆ ಎಂದು ನ್ಯಾಯಾಲಯ ಹೇಳಿದೆ.
ಮದ್ರಾಸ್ ಹೈಕೋರ್ಟ್ನ ಈ ಅವಲೋಕನವು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತಂದಲ್ಲಿ, ವಿಚ್ಛೇದನ ಪಡೆದ ಸಾವಿರಾರು ಜನರಿಗೆ ಮರುಮದುವೆಯಾಗಲು ಸುದೀರ್ಘ ಕಾಯುವಿಕೆಯಿಂದ ಮುಕ್ತಿ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ