ತೌಕ್ಟೆ, ಯಾಸ್‌ ಅಬ್ಬರದ ಮಧ್ಯೆ ರಕ್ಷಣಾ ಕಾರ್ಯಾಚರಣೆ ಕೈಗೊಂಡವರಿಗೆ ಮೋದಿ ಸಲಾಂ!

By Suvarna NewsFirst Published May 30, 2021, 12:03 PM IST
Highlights

* ಪ್ರಧಾನ ಮಂತ್ರಿ ನರೇಂದ್ರ ಮೋದಿ  77ನೇ ಮನ್ ಕೀ ಬಾತ್​ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತು

* ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೇರಿ 2 ವರ್ಷ ಪೂರೈಸಿದ ಬಿಜೆಪಿ

* ಕೊರೋನಾ, ಚಂಡಮಾರುತ ಅಬ್ಬರದ ಮಧ್ಯೆ ಜನರ ರಕ್ಷಣೆಗೆ ಧಾವಿಸಿದವರಿಗೆ ಮೋದಿ ಸಲಾಂ

* ತನ್ನ ವಿರುದ್ಧ ಷಡ್ಯಂತ್ರ ರೂಪಿಸುವವರಿಗೆ ಭಾರತ ತಕ್ಕ ಉತ್ತರ ಕೊಡುತ್ತೆ: ಮೋದಿ ಮನ್‌ ಕೀ ಬಾತ್‌

ನವದೆಹಲಿ(ಮೇ.30): ಪ್ರಧಾನ ಮಂತ್ರಿ ನರೇಂದ್ರ ಮೋದಿ  77ನೇ ಮನ್ ಕೀ ಬಾತ್​ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಬಿಜೆಪಿ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೇರಿ 2 ವರ್ಷ ಪೂರೈಸಿದ ಹಿನ್ನೆಲೆ ಈ ಬಾರಿಯ ಮನ್​ ಕೀ ಬಾತ್​ ಇನ್ನಷ್ಟು ಕುತೂಹಲ ಮೂಡಿಸಿದೆ. ಅಲ್ಲದೇ ಈ ಬಾರಿ ಪಿಎಂ ಮೋದಿಯ ಮನ್‌ ಕೀ ಬಾತ್‌ ಸ್ಥಳೀಯ ಭಾಷೆಗಳಲ್ಲೂ ಲಭ್ಯವಾಗಲಿದೆ. ಮೋದಿ ಮನ್‌ ಕೀ ಬಾತ್‌ ಮುಗಿದ ಕೂಡಲೇ ಪ್ರಾದೇಶಿಕ ಆಕಾಶವಾಣಿಯಲ್ಲಿ ಇದು ಪ್ರಸಾರವಾಗಲಿದ್ದು, ರಾತ್ರಿ 8ಗಂಟೆಗೆ ಮತ್ತೊಮ್ಮೆ ಪ್ರಸಾರವಾಗಲಿದೆ. 
ಮೋದಿ ಮನ್‌ ಕೀ ಬಾತ್‌ನ ಮುಖ್ಯಾಂಶಗಳು:

* ಕೊರೋನಾ ವೈರಸ್ ಎಂಬುವುದು ಕಳೆದ 100 ವರ್ಷಗಳಲ್ಲಿ ವಿಶ್ವವನ್ನು ಕಾಡಿರುವ ಅತಿದೊಡ್ಡ ಸಾಂಕ್ರಾಮಿಕ ರೋಗ. ಈ ಸಾಂಕ್ರಾಮಿಕ ಸಂಕಷ್ಟದ ಹೊತ್ತಲ್ಲೇ ಭಾರತ ತೌಕ್ಟೆ, ಯಾಸ್​ ಚಂಡಮಾರುತದಂಥ ಹಲವು ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿದೆ.

* ಆಧುನಿಕ ತಂತ್ರಜ್ಞಾನದ ಸಹಾಯದಿಂದಾಗಿ ಚಂಡಮಾರುತದಿಂದಾಗುವ ನಷ್ಟ ಕಡಿಮೆ ಮಾಡಲು ಸಹಾಯಕವಾಯ್ತು. ಕಳೆದ 10 ದಿನದಲ್ಲಿ ನಾವು ತೌಕ್ಟೆ, ಯಾಸ್ ಚಂಡಮಾರುತವನ್ನು ಎದುರಿಸಿದ್ದೇವೆ.

* ಸವಾಲು ಅದೆಷ್ಟೇ ದೊಡ್ಡದಾಗಿದ್ದರೂ ಅದರ ಜೊತೆ ಹೋರಾಡುವ ನಮ್ಮ ಸಾಮೂಹಿಕ ಶಕ್ತಿಯೂ ಅಷ್ಟೇ ದೊಡ್ಡದಾಗಿರುತ್ತದೆ. ವೈದ್ಯರು, ನರ್ಸ್‌ಗಳು 24 ಗಂಟೆಗಳ ಕಾಲ ಜನರ ಜೀವ ಉಳಿಸಲು ಹೋರಾಡುತ್ತಿದ್ದಾರೆ.

* ದೇಶದಲ್ಲಿ ಉಲ್ಬಣಗೊಂಡ ಕೊರೋನಾ ಸಂದರ್ಭದಲ್ಲಿ ಕಾಡಿದ ಆಕ್ಸಿಜನ್ ಅಭಾವ ನೀಗಿಸಲು ಆಕ್ಸಿಜನ್​ ಎಕ್ಸ್​ಪ್ರೆಸ್​ ರೈಲು ದೇಶದ ಮೂಲೆಮೂಲೆಗೆ ಅತ್ಯಂತ ವೇಗವಾಗಿ ಆಮ್ಲಜನಕ ಪೂರೈಸಿದೆ.  ಜೊತೆಗೆ ವಿದೇಶಗಳಿಂದ ನೌಕಾಪಡೆ, ವಾಯುಪಡೆ, ಡಿಆರ್​ಡಿಒ ಸಹಕಾರದಿಂದ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು, ಕ್ರಯೋಜನಿಕ್ ಟ್ಯಾಂಕರ್​ಗಳನ್ನು ಭಾರತಕ್ಕೆ ತರಲಾಗುತ್ತಿದೆ. ಇವರೆಲ್ಲರ ಶ್ರಮ ನಿಜಕ್ಕೂ ಶ್ಲಾಘನೀಯ. ಆಕ್ಸಿಜನ್ ಉತ್ಪಾದನೆ ಮತ್ತು ಅದರ ಸಾಗಣೆ ಬಹಳ ಅಪಾಯಕಾರಿಯಾದ ಕೆಲಸವಾಗಿದೆ. ಆದರೆ ಟ್ಯಾಂಕರ್ ಡ್ರೈವರ್‌ಗಳು ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿದ್ದಾರೆ.

"

* ಮನ್ ಕೀ ಬಾತ್‌ನಲ್ಲಿಉತ್ತರ ಪ್ರದೇಶದ ದಿನೇಶ್ ಬಾಲೂಲ್‌ನಾಥ್ ಉಪಾಧ್ಯಾಯ ಪ್ರಧಾನಿ ಮಾತು: 15 ವರ್ಷಗಳಿಂದ ಅವರು ಟ್ಯಾಂಕರ್ ಚಾಲಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಗುರಿಯನ್ನು ತಲುಪುವುದು ನಮ್ಮ ಉದ್ದೇಶ. ನಾವು ಸರಿಯಾದ ಸಮಯಕ್ಕೆ ಹೋದರೆ ಹಲವಾರು ಜನರ ಜೀವ ಉಳಿಯುತ್ತದೆ. ಅದು ನಮಗೆ ನೆಮ್ಮದಿಯ ಕೆಲಸವಾಗಿದೆ ಎಂದು ದಿನೇಶ್ ಬಾಲೂಲ್‌ನಾಥ್ ಉಪಾಧ್ಯಾಯ ಹೇಳಿದರು.

* ಆಕ್ಸಿಜನ್ ಸರಬರಾಜು ಮಾಡುವುದು ಮಹತ್ವದ ಕೆಲಸವಾಗಿದೆ. ಆಕ್ಸಿಜನ್ ಸಾಗಣೆಗೆ ರೈಲ್ವೆ ಕೈ ಜೋಡಿಸಿದೆ, ಮಹಿಳೆಯರೇ ಕೆಲವು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸುತ್ತಿದ್ದಾರೆ. ರಸ್ತೆ ಮಾರ್ಗಕ್ಕಿಂತ ವೇಗವಾಗಿ ರೈಲು ಆಕ್ಸಿಜನ್ ಅನ್ನು ತಲುಪಿಸುತ್ತಿದೆ

* ಆಕ್ಸಿಜನ್​ ಎಕ್ಸ್​ಪ್ರೆಸ್​ ರೈಲಿನ ಲೋಕೋ ಪೈಲೆಟ್ ಶಿರೀಷಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮನ್​ ಕೀ ಬಾತ್​​ನಲ್ಲಿ  ಫೋನ್ ಮೂಲಕ​  ಮಾತು: ದೇಶ ಕಷ್ಟವನ್ನೆದುರಿಸುತ್ತಿದ್ದಾಗ ಸೇವೆ ಸಲ್ಲಿಸಿದ ನಿಮ್ಮಂತಹ ಎಲ್ಲ ಸಹೋದರಿಯರಿಗೂ, ನಿಮ್ಮ ಹೆತ್ತವರಿಗೂ ಧನ್ಯವಾದ. ಶಿರೀಷಾ ಜೀ, ನೀವು ಕೊರೋನಾ ಕಷ್ಟದ ಸಮಯದಲ್ಲಿ ಮುಂದೆ ಬಂದು ಉತ್ತಮವಾದ ಕೆಲಸ ಮಾಡಿದ್ದೀರಿ. ಮಹಿಳಾ ಶಕ್ತಿಗೆ ನೀವು ಉದಾಹರಣೆ ಎಂದು ನರೇಂದ್ರ ಮೋದಿಯವರು ಶಿರೀಷಾ ಅವರನ್ನು ಶ್ಲಾಘಿಸಿದ್ದಾರೆ. ಈ ವೇಳೆ ಶಿರೀ‍ಷಾ ಕೂಡಾ 1.20 ಗಂಟೆಯಲ್ಲಿ 120 ಕಿ. ಮೀ. ವೇಗದಲ್ಲಿ ರೈಲು ಓಡಿಸಿದ ಅನುಭವ ಹಂಚಿಕೊಂಡರು.

* ಕೊರೋನಾ ಕಾಲದಲ್ಲಿ ಆಕ್ಸಿಜನ್ ತಲುಪಿಸಲು ಸಮುದ್ರ, ವಾಯು, ರಸ್ತೆ ಮಾರ್ಗದ ಮೂಲಕ ಕೆಲಸ ಮಾಡುತ್ತಿದ್ದೇವೆ. ಮತ್ತೊಂದು ಕಡೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡುವ ಕಾರ್ಯವೂ ನಡೆಯುತ್ತಿದೆ ಎಂದು ಮೋದಿ ಹೇಳಿದರು. ಕೊರೊನಾ, ಆಕ್ಸಿಜನ್​ ಪೂರೈಕೆ ಒಂದು ಯುದ್ಧದಂತೆ ಆಗಿದೆ. ಈ ಸವಾಲನ್ನು ಭೂಮಿ, ನೀರು ಮತ್ತು ವಾಯು ಮೂರು ಮಾರ್ಗಗಳ ಮೂಲಕ ಎದುರಿಸಲಾಗುತ್ತಿದೆ.

* ದೇಶದಲ್ಲಿ ಆಗ ಕೋವಿಡ್ ಮಾದರಿಗಳ ಪರೀಕ್ಷೆಗೆ ಲ್ಯಾಬ್‌ಗಳ ಸಂಖ್ಯೆ ಕಡಿಮೆ ಇತ್ತು. ಈಗ ಲ್ಯಾಬ್‌ಗಳು ಸ್ಥಾಪನೆಯಾಗಿವೆ. 34,31,83,748 ಮಾದರಿಗಳ ಪರೀಕ್ಷೆ ಮಾಡಲಾಗಿದೆ. ದೆಹಲಿಯ ಲ್ಯಾಬ್ ಟೆಕ್ನಿಷಿಯನ್ ಪ್ರಕಾಶ್ ಖಾಂಡಪಾಲ್ ಜೊತೆ ಮನ್ ಕಿ ಬಾತ್‌ನಲ್ಲಿ ಮೋದಿ ಮಾತು. ವೈದ್ಯರು, ಲ್ಯಾಬ್ ಟೆಕ್ನಿಷಿಯನ್‌ ಕಾರ್ಯ ಯಶಸ್ವಿಯಾಗಬೇಕಾದರೆ ನಾವು ನಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸಬೇಕು. ಆಗ ಮಾತ್ರ ಈ ಸಂಕಟದಿಂದ ಹೊರ ಬರಲು ಸಾಧ್ಯ ಎಂದು ಪ್ರಧಾನಿ ಮೋದಿ ಮನವಿ. 

* ಸಂಕಷ್ಟದ ಸಮಯದಲ್ಲಿ ರೈತರು ತಮ್ಮ ಕಾರ್ಯ ನಿಲ್ಲಿಸಿಲ್ಲ. ದಾಖಲೆ ಮಟ್ಟದ ಬೆಳೆ ಉತ್ಪಾದನೆ ಆಗಿದೆ. ಇದರಿಂದಾಗಿ ಬಡ ಜನರಿಗೆ ನಾವು ಉಚಿತವಾಗ ಅಕ್ಕಿಯನ್ನು ನೀಡಲು ಸಾಧ್ಯವಾಗಿದೆ. ಕೃಷಿಯಲ್ಲಿ ವಿವಿಧ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ದಕ್ಷಿಣ ಭಾರತದ ವಿಜಯನಗರಂ ಮಾವನ್ನು ಕಿಸಾನ್ ರೈಲಿನ ಮೂಲಕ ದೆಹಲಿಗೆ ತಲುಪಿಸಲಾಗುತ್ತಿದೆ.

* ಮೇ 30ರಂದು ಮನ್ ಕೀ ಬಾರ್ ಕಾರ್ಯಕ್ರಮ ಮಾಡುತ್ತಿದ್ದೇವೆ. ಸರ್ಕಾರ 7 ವರ್ಷ ಪೂರ್ಣಗೊಳಿಸಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆ ಅಡಿಯಲ್ಲಿ ಸರ್ಕಾರ ಮುನ್ನೆಡೆಸುತ್ತಿದ್ದೇವೆ. ರಾಷ್ಟ್ರೀಯ ಸುರಕ್ಷತೆ ವಿಚಾರದಲ್ಲಿ ನಾವು ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ನಮಗೆ ಸಾವಿರಾರು ಪತ್ರಗಳು ಬಂದಿವೆ. ನಮ್ಮ ಮನೆಗೆ ಈಗ ವಿದ್ಯುತ್ ಆಗಮಿಸಿದೆ, ಈಗ ರಸ್ತೆ ಆಗಿದೆ, ಈಗ ಬ್ಯಾಂಕ್ ಖಾತೆ ತೆರೆದಿದ್ದೇವೆ ಎಂಬ ಅನೇಕ ಪತ್ರಗಳು ಬಂದಿವೆ.

* ಡಿಜಿಟಲ್ ವ್ಯವಹಾರದಲ್ಲಿ ಭಾರತ ಹೊಸ ದಿಕ್ಕಿನಲ್ಲಿ ಸಾಗಿದೆ. ಕ್ಷಣದಲ್ಲೇ ನೀವುವ ಡಿಜಿಟಲ್ ಪೇಮೆಂಟ್ ಮಾಡಬಹುದಾಗಿದೆ. ಕೊರೊನಾ ಕಾಲದಲ್ಲಿ ಇದು ಬಹಳ ಸಹಾಯಕವಾಗಿದೆ. ದಶಕದಿಂದ ಆಗದ ಕೇವಲ 7 ವರ್ಷಗಳಲ್ಲಿ ಆಗಿದೆ. ನಾವು ದೇಶಕ್ಕಾಗಿ ಕೆಲಸ ಮಾಡುತ್ತೇವೆ ಎಂಬುವುದು ಮಾಡಿದ ಕಾರ್ಯಗಳೇ ಹೇಳುತ್ತವೆ. ಕೊರೋನಾ ದೊಡ್ಡ ಸಂಕಟವನ್ನು ನಮಗೆ ತಂದಿದೆ. ಭಾರತ ಸೇವೆ ಮತ್ತು ಸಹಯೋಗದೊಂದಿಗೆ ಮುಂದೆ ಸಾಗುತ್ತಿದೆ.

* ಭಾರತ ತನ್ನ ವಿರುದ್ಧ ಷಡ್ಯಂತ್ರ ರೂಪಿಸುವವರಿಗೆ ತಕ್ಕ ಉತ್ತರ ನೀಡುತ್ತದೆ. 

* ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಕೋವಿಡ್ ಲಸಿಕೆ ಪಡೆಯುವುದು ನಮ್ಮ ಕರ್ತವ್ಯ. ಎಲ್ಲರೂ ಸುರಕ್ಷಿತವಾಗಿರಿ. ದೇಶವನ್ನು ಹೀಗಿಯೇ ಅಭಿವೃದ್ಧಿ ಪಥದತ್ತ ಮುನ್ನಡೆಸಿ ಎಂದಿದ್ದಾರೆ

click me!