ಅಧ್ಯಕ್ಷೀಯ ಚುನಾವಣೆಗೆ ಪಾರದರ್ಶಕವಿಲ್ಲ ಎಂದು ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ!

By Kannadaprabha NewsFirst Published Sep 10, 2022, 9:52 AM IST
Highlights

ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ ಕಂಡುಬಂದಿದೆ. ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಪಾರದರ್ಶಕವಿಲ್ಲ ಎಂದು ಹಿರಿಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ತಿವಾರಿ, ಕಾರ್ತಿ  ಚಿದಂಬರಂ ಸೇರಿ 5 ಸಂಸದರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ನವದೆಹಲಿ (ಸೆ.10): 2024ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಅತ್ತ ಭಾರತ್‌ ಜೋಡೋ ಯಾತ್ರೆ ಆರಂಭವಾಗಿರುವಾಗಲೇ, ಇತ್ತ ಅ.17ರಂದು ನಿಗದಿಯಾಗಿರುವ ಪಕ್ಷದ ನೂತನ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿಲ್ಲ ಎಂದು ಪಕ್ಷದ 5 ಹಿರಿಯ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಈ ಕುರಿತು ಅವರು ಪಕ್ಷದ ಚುನಾವಣಾ ಪ್ರಕ್ರಿಯೆಗಳ ಮುಖ್ಯಸ್ಥ ಮಧುಸೂಧನ್‌ ಮಿಸ್ತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಮಾಜಿ ಕೇಂದ್ರ ಸಚಿವ ಮನೀಶ್‌ ತಿವಾರಿ, ಶಶಿ ತರೂರ್‌, ಸಂಸದರಾದ ಕಾರ್ತಿ ಚಿದಂಬರಂ, ಪ್ರದ್ಯುತ್‌ ಬೋರ್ಡೋಲೋಯ್‌ ಮತ್ತು ಅಬ್ದುಲ್‌ ಖಾಲಿಕ್‌ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದವರಾಗಿದ್ದಾರೆ. 29 ರಾಜ್ಯಗಳ ಕಾಂಗ್ರೆಸ್‌ ಘಟಕಗಳ ಮತ್ತು 9 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪಕ್ಷದ ಮತದಾರರ ಪಟ್ಟಿನೀಡುವಂತೆ ಮಾಡಿದ್ದ ಇವರ ಬೇಡಿಕೆಯನ್ನು ಚುನಾವಣಾ ಸಮಿತಿ ನಾನಾ ಕಾರಣವೊಡ್ಡಿ ನಿರಾಕರಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸೆ.6ರಂದು ಮಿಸ್ತ್ರಿಗೆ ಪತ್ರ ಬರೆದಿರುವ ಈ ಐವರು, ‘ನೂತನ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿಲ್ಲ. ಸಂಭವನೀಯ ಅಭ್ಯರ್ಥಿಗಳು ಮತ್ತು ಮತದಾರರಿಗೆ ಎಲ್ಲಾ ರಾಜ್ಯಗಳ ಮತದಾರರ ಪಟ್ಟಿನೀಡುವುದು ಅತ್ಯಗತ್ಯ.

ಒಂದು ವೇಳೆ ಇಂಥ ವಿಷಯ ಹಂಚಿಕೆ, ಮಾಹಿತಿ ಸೋರಿಕೆ ಮತ್ತು ದುರ್ಬಳಕೆಗೆ ಕಾರಣವಾಗಬಹುದೆಂಬ ಆತಂಕವಿದ್ದರೆ, ಅದನ್ನು ಸೂಕ್ತ ಮಾರ್ಗದ ಮೂಲಕ ಹಂಚಿಕೊಳ್ಳಬಹುದಿತ್ತು. ಅದು ಬಿಟ್ಟು, ನಮ್ಮ ಬೇಡಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಶಶಿ ತರೂರ್‌ ತಾವು ಕೂಡಾ ಕಾಂಗ್ರೆಸ್‌ನ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುವ ಸುಳಿವು ನೀಡಿದ್ದರು.

 Bharat Jodo Yatra: ಸೆ.30ಕ್ಕೆ ಭಾರತ ಐಕ್ಯತಾ ಯಾತ್ರೆ ಕರ್ನಾಟಕ ಪ್ರವೇಶ

ಭಾರತದ ಅತಿದೊಡ್ಡ ಪಪ್ಪು, ಶಾ ವಿರುದ್ದ ಟಿಎಂಸಿ ಟೀ ಶರ್ಚ್‌ ಅಭಿಯಾನ!
ಕೋಲ್ಕತಾ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿಯ ವಿರುದ್ಧ ದಾಳಿ ನಡೆಸಲು ಹೊಸ ದಾರಿ ಕಂಡುಹಿಡಿದಿರುವ ತೃಣಮೂಲ ಕಾಂಗ್ರೆಸ್‌, ಅಮಿತ್‌ ಶಾ ಭಾರತದ ಅತಿ ದೊಡ್ಡ ಪಪ್ಪು ಎಂದು ಬರೆದಿರುವ ಟೀ ಶರ್ಚ್‌ಗಳನ್ನು ತನ್ನ ಕಾರ್ಯಕರ್ತರಿಗೆ ಹಂಚುವ ಮೂಲಕ ಅಭಿಯಾನ ಆರಂಭಿಸಿದೆ. ಟೀ ಶರ್ಚ್‌ಗಳ ಮೇಲೆ ಅಮಿತ್‌ ಶಾ ಅವರ ವ್ಯಂಗ್ಯಚಿತ್ರವಿದ್ದು, ಅದರ ಕೆಳಗೆ ಭಾರತದ ಅತಿ ದೊಡ್ಡ ಪಪ್ಪು ಎಂದು ಬರೆಯಲಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನು ಅಣಕಿಸಲು ಬಿಜೆಪಿ ಪಪ್ಪು ಎಂಬ ಶಬ್ದವನ್ನು ಬಳಕೆ ಮಾಡುತ್ತಿತ್ತು. ಈಗ ಅದನ್ನೇ ಬಳಸಿಕೊಂಡು ಟಿಎಂಸಿ ಅಮಿತ್ ಶಾ ಅವರನ್ನು ಅಣಕ ಮಾಡುತ್ತಿದೆ. ದುರ್ಗಾ ಪೂಜೆ ಅಭಿಯಾನದ ವೇಳೆ ಇದನ್ನು ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಲು ಪಕ್ಷ ನಿರ್ಧರಿಸಿದೆ.

ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡೆ, ನನ್ನ ಪ್ರೀತಿಯ ದೇಶ ಕಳೆದುಕೊಳ್ಳಲ್ಲ: Rahul Gandhi

41000 ರು. ಟೀ ಶರ್ಚ್‌ ಧರಿಸಿ ರಾಹುಲ್‌ ಯಾತ್ರೆ: ಬಿಜೆಪಿ ನಾಯಕರ ವ್ಯಂಗ್ಯ
ನವದೆಹಲಿ: ಬೆಲೆ ಏರಿಕೆ ಟೀಕಿಸುವ ರಾಹುಲ್‌ ಗಾಂಧಿ, ಭಾರತ್‌ ಜೋಡೋ ಪಾದಯಾತ್ರೆಯಲ್ಲಿ 41 ಸಾವಿರ ರು. ಮೌಲ್ಯದ ಟೀ ಶರ್ಚ್‌ ಧರಿಸಿ ಪಾಲ್ಗೊಂಡಿದ್ದಾರೆ ಎಂದು ಬಿಜೆಪಿ ನಾಯಕರು ವ್ಯಂಗ್ಯ ಮಾಡಿದ್ದಾರೆ. ಬಿಜೆಪಿ ತನ್ನ ಟ್ವೀಟರ್‌ ಖಾತೆಯಲ್ಲಿ ರಾಹುಲ್‌ ಫೋಟೋ ಹಂಚಿಕೊಂಡಿದ್ದು, ‘ನೋಡಿ, ರಾಹುಲ್‌ ಗಾಂಧಿ ಧರಿಸಿರುವ ಬರ್‌ಬೆರಿ ಟೀ-ಶರ್ಚ್‌ನ ಬೆಲೆ 41,257 ರು. ಆಗಿದೆ. ಸಾರ್ವಜನಿಕರ ಹಣವನ್ನು ರಾಹುಲ್‌ ಈ ರೀತಿ ಪೋಲು ಮಾಡುತ್ತಿದ್ದಾರೆ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸುವ ಸೂಟ್‌ ಬೆಲೆ 10 ಲಕ್ಷ ರು. ಎಂದು ತಿರುಗೇಟು ನೀಡಿದೆ.

click me!