
ಸಾವು-ಬದುಕಿನ ನಡುವಿನ ಅಂತರವನ್ನೇ ಅಳಿಸಿ ಹಾಕುವಂತಹ ಘಟನೆಯೊಂದು ಮುಜಫರ್ನಗರದಲ್ಲಿ ನಡೆದಿದೆ. ಸತ್ತಿದ್ದಾನೆಂದು ಭಾವಿಸಿ ಅಂತಿಮವಾಗಿ ಮರೆತೇ ಬಿಟ್ಟಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ ಮೂರು ದಶಕಗಳ ನಂತರ ಊರಿಗೆ ಮರಳಿದ್ದಾರೆ. ಸಿನಿಮಾ ಕಥೆಯನ್ನೂ ಮೀರಿಸುವಂತಿದೆ ಸತ್ತ ವ್ಯಕ್ತಿ ಮತ್ತೆ ಎದ್ದು ಬಂದ ಕತೆ!
ಮುಜಫರ್ನಗರ ಜಿಲ್ಲೆಯ ಖತೌಲಿಯ ನಿವಾಸಿಯಾದ 79 ವರ್ಷದ ಷರೀಫ್ ಅಹ್ಮದ್, ಮೊದಲ ಪತ್ನಿಯ ನಿಧನದ ನಂತರ ಎರಡನೇ ಮದುವೆಯಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಆದರೆ 1997ರ ನಂತರ ಅವರ ಬಗ್ಗೆ ಕುಟುಂಬಕ್ಕೆ ಯಾವುದೇ ಸುಳಿವು ಇರಲಿಲ್ಲ. ಪಶ್ಚಿಮ ಬಂಗಾಳಕ್ಕೆ ಹೋದವರು ಅಲ್ಲಿಯೇ ನೆಲೆಸಿದ್ದರೇ ಅಥವಾ ಮರಣ ಹೊಂದಿದ್ದರೇ ಎಂಬ ಬಗ್ಗೆ ಮನೆಯವರಿಗೆ ಯಾವ ಮಾಹಿತಿಯೂ ಇರಲಿಲ್ಲ.
ಷರೀಫ್ ಅವರ ಅಳಿಯ ವಸೀಮ್ ಅಹ್ಮದ್ ಹೇಳುವಂತೆ, ಕುಟುಂಬದವರು ವರ್ಷಗಳ ಕಾಲ ಅವರನ್ನು ಹುಡುಕಲು ಸತತ ಪ್ರಯತ್ನ ನಡೆಸಿದ್ದರು. ಎರಡನೇ ಪತ್ನಿ ನೀಡಿದ್ದ ವಿಳಾಸವನ್ನು ಹಿಡಿದು ಪಶ್ಚಿಮ ಬಂಗಾಳಕ್ಕೂ ಹೋಗಿದ್ದರು. ಆದರೆ ಅಲ್ಲಿ ಯಾವುದೇ ಸುಳಿವು ಸಿಗದೆ ನಿರಾಸೆಯಿಂದ ಹಿಂದಿರುಗಿದ್ದರು. ದಶಕಗಳ ಕಾಲ ಮಾಹಿತಿ ಸಿಗದ ಕಾರಣ, ಅವರ ನಾಲ್ವರು ಹೆಣ್ಣುಮಕ್ಕಳು ತಮ್ಮ ತಂದೆ ಮೃತಪಟ್ಟಿದ್ದಾರೆಂದೇ ಭಾವಿಸಿ ಅವರ ಮೇಲಿನ ಆಸೆಯನ್ನೇ ಕೈಬಿಟ್ಟಿದ್ದರು.
ದಾಖಲೆಗಳಿಗಾಗಿ ಬಂದವನಿಗೆ ಸಿಕ್ಕಿತು ಕುಟುಂಬದ ನಂಟು!
ಯಾವಾಗ ಅತಂತ್ರ ಸ್ಥಿತಿಯಲ್ಲಿದ್ದವನ ದಾಖಲಾತಿ ಸಂಬಂಧಿಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಯಿತೋ, ಆಗ ಅನಿವಾರ್ಯವಾಗಿ ಷರೀಫ್ ತಮ್ಮ ಹುಟ್ಟೂರಿಗೆ ಬರಬೇಕಾಯಿತು. ಡಿಸೆಂಬರ್ 29 ರಂದು ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಅವರು ಖತೌಲಿಗೆ ಹಿಂತಿರುಗಿದಾಗ, ಇಡೀ ಗ್ರಾಮವೇ ಅಚ್ಚರಿಯಿಂದ ಅವರನ್ನು ನೋಡಿದೆ. ದಾಖಲೆಗಳಿಗಾಗಿ ಬಂದೆ, ಆದರೆ ನನ್ನ ಕುಟುಂಬವೇ ನನಗೆ ಸಿಕ್ಕಿತು ಎಂದು ಭಾವುಕರಾಗಿ ಷರೀಫ್ ಹೇಳಿದ್ದಾರೆ.
ಸಂತೋಷದ ನಡುವೆಯೂ ಕಾಡಿದ ಅಗಲಿಕೆಯ ನೋವು
30 ವರ್ಷಗಳ ನಂತರ ಮನೆಗೆ ಮರಳಿದ ಷರೀಫ್ಗೆ ಕೆಲವು ಕಹಿ ಸುದ್ದಿಗಳು ಕಾದಿದ್ದವು. ಅವರು ಊರಿಗೆ ಬರುವಷ್ಟರಲ್ಲಿ ಅವರ ತಂದೆ ಮತ್ತು ಸಹೋದರ ಸೇರಿದಂತೆ ಕುಟುಂಬದ ಹಲವು ಸದಸ್ಯರು ಮರಣ ಹೊಂದಿದ್ದರು. ಆದರೂ, ತಮ್ಮ ತಂದೆಯನ್ನು ಮತ್ತೆ ನೋಡಿದ ಹೆಣ್ಣುಮಕ್ಕಳ ಕಣ್ಣಲ್ಲಿ ಆನಂದಭಾಷ್ಪ ಹರಿಯಿತು. ಇದು ಮರುಜನ್ಮದಂತೆ ಕಂಡುಬಂತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ದಾಖಲೆಗಳ ಜೊತೆಗೆ ನೆನಪುಗಳನ್ನು ಹೊತ್ತು ಹೋದ ಷರೀಫ್
ತಮ್ಮ ಹುಟ್ಟೂರಿನಲ್ಲಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ ನಂತರ, ಷರೀಫ್ ಅಹ್ಮದ್ ಅವರು ಪಶ್ಚಿಮ ಬಂಗಾಳದಲ್ಲಿರುವ ತಮ್ಮ ಎರಡನೇ ಕುಟುಂಬದ ಬಳಿಗೆ ಮರಳಿದರು. 30 ವರ್ಷಗಳ ನಿಗೂಢ ಮೌನವನ್ನು ಮುರಿದು, ಕೇವಲ ದಾಖಲೆಗಳಿಗಾಗಿ ಆರಂಭವಾದ ಈ ಪ್ರಯಾಣವು ಒಂದು ಸುಂದರ ಕೌಟುಂಬಿಕ ಮಿಲನಕ್ಕೆ ಸಾಕ್ಷಿಯಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ