Punjab Elections: ಮೋದಿ ಭದ್ರತೆಯಲ್ಲಿ ಭಾರೀ ಲೋಪ, ಇದರಲ್ಲಿದೆಯೇ ಪಂಜಾಬ್ ಸರ್ಕಾರದ ಪಾಲು?

By Suvarna NewsFirst Published Jan 5, 2022, 6:13 PM IST
Highlights

ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಭಾರೀ ಲೋಪ
ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಪ್ರಧಾನಿ ನರೇಂದ್ರ ಮೋದಿ
ಪಂಜಾಬ್ ಸರ್ಕಾರದ ಕೆಲ ಕ್ರಮಗಳ ಮೇಲೆ ಹುಟ್ಟಿವೆ ದೊಡ್ಡ ಅನುಮಾನ

ಚಂಡೀಗಢ (ಜ.5): ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಭದ್ರತೆಯಲ್ಲಿ ಭಾರೀ ಲೋಪವಾದ ( massive security breach) ಕುರಿತು ಕೇಂದ್ರ ಗೃಹ ಸಚಿವಾಲಯ (Home Ministry ) ಪಂಜಾಬ್ ಸರ್ಕಾರದಿಂದ (Punjab government) ವಿವರವಾದ ವರದಿಯನ್ನು ಕೇಳಿದೆ. ಬಟಿಂಡಾದಿಂದ ಹುಸೇನಿವಾಲಾ ಶಹೀದ್ ಸ್ಮಾರಕಕ್ಕೆ ರಸ್ತೆ ಮಾರ್ಗವಾಗಿ ಹೋಗುತ್ತಿದ್ದಾಗ ಪ್ರಧಾನಿ ಮೋದಿ ಅವರ ಬೆಂಗಾವಲು ವಾಹನವು ಫ್ಲೈಓವರ್‌ನಲ್ಲಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿತ್ತು. ಪ್ರಧಾನಿಯವರು ಸುಮಾರು 20 ನಿಮಿಷಗಳ ಕಾಲ ಇಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಅವರ ಬೆಂಗಾವಲು ಪಡೆ ಅಲ್ಲಿಂದಲೇ ಬಟಿಂಡಾಕ್ಕೆ ವಾಪಸಾಗಿದೆ. ಈ ಪ್ರಕರಣದ ಕುರಿತಾಗಿ ಪಂಜಾಬ್ ಸರ್ಕಾರದ ಕೆಲವು ಕ್ರಮಗಳು ಅಚ್ಚರಿಗೆ ಕಾರಣವಾಗಿದೆ.

"

ದೇಶದ ಪ್ರಧಾನಿ ಯಾವುದೇ ಕಾರ್ಯಕ್ರಮದ ನಿಮಿತ್ತ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ, ಆಯಾ ರಾಜ್ಯದ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಸ್ವಾಗತಿಸಬೇಕು. ಅದು ಮಾತ್ರವಲ್ಲದೆ ಪ್ರಧಾನಿ ರಾಜ್ಯದಲ್ಲಿ ಇರುವಷ್ಟು ಹೊತ್ತು ಅವರೊಂದಿಗೆ ಇರಬೇಕು ಎನ್ನುವ ನಿಯಮವಿದೆ. ಆದರೆ ಬುಧವಾರ ಈ ಮೂವರಲ್ಲಿ ಯಾರೊಬ್ಬರೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿರಲಿಲ್ಲ. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಪ್ರಕರಣದ ಮೇಲೆ ಅನುಮಾನಕ್ಕೆ ಕಾರಣವಾಗಿದೆ.

"

ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸದೇ ಇದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಾವಲು ಪಡೆಯ ವಾಹನದೊಂದಿಗೆ ಇವರಿಬ್ಬರಿಗಾಗಿ ಮೀಸಲಿಟ್ಟಿದ್ದ ವಾಹನಗಳು ತೆರಳಿದ್ದವು. ಇದು ಇನ್ನೊಂದು ಅನುಮಾನಕ್ಕೆ ಕಾರಣವಾಗಿದೆ. ಒಟ್ಟಾರೆಯಾಗಿ ಪಂಜಾಬ್ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮುಂದೇನಾಗಬಹುದು ಎನ್ನುವ ಸುಳಿವು ಇತ್ತು ಎನ್ನುವ ಕಾರಣಕ್ಕಾಗಿ ಮೋದಿ ಅವರ ಬೆಂಗಾವಲು ಪಡೆಯೊಂದಿಗೆ ಪ್ರಯಾಣ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ. 
ಬಿಜೆಪಿ ರಾಜ್ಯಾಧ್ಯಕ್ಷ ಜೆಪಿ ನಡ್ಡಾ ಕೂಡ ಪಂಜಾಬ್ ಸರ್ಕಾರದ ಮೇಲೆ ಆರೋಪಗಳನ್ನು ಮಾಡಿದ್ದು, ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿಗೆ ಈ ಕುರಿತಾಗಿ ಮಾಡಿರುವ ಹಲವು ಫೋನ್ ಕರೆಗಳಿಗೂ ಉತ್ತರ ನೀಡಿರಲಿಲ್ಲ ಎಂದಿದ್ದಾರೆ. “ಪಂಜಾಬ್‌ಗೆ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ಭೇಟಿಗೆ ಅಡ್ಡಿಪಡಿಸಿರುವುದು ದುಃಖಕರವಾಗಿದೆ... ಸಮಾವೇಶಕ್ಕೆ ಜನರು ಬಾರದಂತೆ ತಡೆಯಲು ರಾಜ್ಯ ಪೊಲೀಸರಿಗೆ ಸೂಚನೆ ನೀಡಲಾಗಿತ್ತು... ವಿಷಯ ತಿಳಿಸಲು ಅಥವಾ ಪರಿಹರಿಸಲು ಸಿಎಂ ಚನ್ನಿ ಅವರಿಗೆ ದೂರವಾಣಿ ಕರೆ ಮಾಡಿದ್ದರೂ, ಅದನ್ನು ಅವರು ಸ್ವೀಕರಿಸಿರಲಿಲ್ಲ' ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ

ಹವಾಮಾನ ವೈಪರೀತ್ಯದಿಂದಾಗಿ ವಾಯುಮಾರ್ಗ ಬಿಟ್ಟು ರಸ್ತೆ ಮೂಲಕ ಪ್ರಯಾಣ: ಪ್ರಧಾನಿ ಮೋದಿ ಇಂದು ಬೆಳಗ್ಗೆ ಬಟಿಂಡಾ ತಲುಪಿದ್ದರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಬೇಕಿತ್ತು. ಮಳೆ ಮತ್ತು ಹವಾಮಾನ ವೈಪರೀತ್ಯ ಕಂಡು ಬಂದಿತ್ತು. ಹವಾಮಾನ ಸ್ಪಷ್ಟವಾಗಲು ಪ್ರಧಾನಿ ಸುಮಾರು 20 ನಿಮಿಷಗಳ ಕಾಲ ಕಾದಿದ್ದರು. ಹೀಗಿದ್ದರೂ ಹವಾಮಾನ ಸುಧಾರಿಸದಿದ್ದಾಗ, ಪ್ರಧಾನಿಯವರು ರಸ್ತೆಯ ಮೂಲಕ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ರಸ್ತೆ ಮಾರ್ಗವಾಗಿ ಸಂಚರಿಸಲು 2 ಗಂಟೆಗೂ ಹೆಚ್ಚು ಸಮಯ ಬೇಕಾಯಿತು. ಈ ಸಂಬಂಧ ಪಂಜಾಬ್ ಡಿಜಿಪಿ ಜತೆ ಪ್ರಧಾನಿ ಭದ್ರತಾ ಪಡೆ ಮಾಹಿತಿ ನೀಡಿದೆ.
"
ಭದ್ರತಾ ವ್ಯವಸ್ಥೆಯನ್ನು ಖಚಿತಪಡಿಸಿದ್ದ ಡಿಜಿಪಿ: ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಡಿಜಿಪಿ ಖಚಿತಪಡಿಸಿದ ಬಳಿಕ ಪ್ರಧಾನಿ ರಸ್ತೆ ಮಾರ್ಗವಾಗಿ ಪ್ರಯಾಣ ಆರಂಭಿಸಿದ್ದರು. ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಸುಮಾರು 30 ಕಿಮೀ ಮೊದಲು, ಪ್ರಧಾನಿ ಬೆಂಗಾವಲು ಮೇಲ್ಸೇತುವೆಯನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ತಡೆದರು. ಈ ವೇಳೆ ಪ್ರಧಾನಿಯವರು ಸುಮಾರು 15ರಿಂದ 20 ನಿಮಿಷಗಳ ಕಾಲ ಮೇಲ್ಸೇತುವೆಯಲ್ಲಿ ಸಿಲುಕಿಕೊಂಡರು. 

click me!