Breaking: ಛತ್ತೀಸ್‌ಗಢದ ಬಿಜಾಪುರದಲ್ಲಿ ನಕ್ಸಲ್‌ ದಾಳಿ, ಮೂವರು ಸೈನಿಕರು ಹುತಾತ್ಮ, 14 ಮಂದಿಗೆ ಗಾಯ!

By Santosh NaikFirst Published Jan 30, 2024, 6:38 PM IST
Highlights

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಭಾರೀ ಪ್ರಮಾಣದ ದಾಳಿ ನಡೆಸಿದ್ದಾರೆ. ಸಿಆರ್‌ಪಿಎಫ್‌ ಕ್ಯಾಂಪ್‌ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ಸೂನಿಕರು ಹುತಾತ್ಮರಾಗಿದ್ದು, 14 ಮಂದಿಗೆ ಗಂಭೀರ ಗಾಯಗಳಾಗಿವೆ.
 

ನವದೆಹಲಿ (ಜ.30): ಛತ್ತೀಸ್‌ಗಢದ ಸುಕ್ಮಾ-ಬಿಜಾಪುರ ಜಿಲ್ಲೆಯ ಗಡಿ ಪ್ರದೇಶವಾದ ಟೇಕಲ್‌ಗುಡೆಂ ಗ್ರಾಮದಲ್ಲಿರುವ ಸಿಆರ್‌ಪಿಎಫ್ ಶಿಬಿರದ ಮೇಲೆ ನಕ್ಸಲೀಯರು ಮಂಗಳವಾರ ಭಾರೀ ಪ್ರಮಾಣದ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 3 ಯೋಧರು ಹುತಾತ್ಮರಾಗಿದ್ದರೆ, 14 ಯೋಧರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ, ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ, ಸೇನಾಪಡೆ ಸ್ಥಳಕ್ಕೆ ತಲುಪಿದ್ದು, ಪ್ರದೇಶವನ್ನು ಸುತ್ತುವರೆದಿದೆ ಮತ್ತು ದಾಳಿಕೋರರಿಗಾಗಿ ಹುಡುಕಾಟ ಆರಂಭಿಸಿದೆ. ಮಾಹಿತಿಯ ಪ್ರಕಾರ, ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲು ಮತ್ತು ಪ್ರದೇಶದ ಜನರಿಗೆ ನೆರವು ನೀಡಲು ಸುಕ್ಮಾ ಪೊಲೀಸ್ ಠಾಣೆ ಜಾಗರಗುಂದ ಪ್ರದೇಶದಲ್ಲಿ ಇಂದು ಜನವರಿ 30 ರಂದು ಭದ್ರತಾ ಶಿಬಿರವನ್ನು ಆರಂಭಿಸಲಾಗಿತ್ತು. ಶಿಬಿರದ ನಂತರ, ಸಿಆರ್‌ಪಿಎಫ್‌ನ ಕೋಬ್ರಾ ಸೈನಿಕರು ಜೋನಗುಡಾ-ಅಲಿಗುಡಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಮಾವೋವಾದಿಗಳು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಛತ್ತೀಸ್‌ಗಢದಲ್ಲಿ ಮತಯಂತ್ರ ಸಾಗಿಸುತ್ತಿದ್ದ ವಾಹನ ಸ್ಪೋಟಿಸಿದ ನಕ್ಸಲರು; ಯೋಧ ಬಲಿ: 2 ರಾಜ್ಯಗಳಲ್ಲಿ ಉತ್ತಮ ಮತದಾನ

ಮಾವೋವಾದಿಗಳ ಗುಂಡಿನ ದಾಳಿಗೆ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿದ್ದು, ಪ್ರತಿದಾಳಿ ನಡೆಸಿವೆ. ಭದ್ರತಾ ಪಡೆಗಳಿಂದ ಹೆಚ್ಚುತ್ತಿರುವ ಒತ್ತಡವನ್ನು ಕಂಡ ಮಾವೋವಾದಿಗಳು ಕಾಡಿನಲ್ಲಿ ಪಲಾಯನ ಮಾಡಿದ್ದಾರೆ. ಆದರೆ ಈ ಎನ್‌ಕೌಂಟರ್‌ನಲ್ಲಿ 3 ಯೋಧರು ಹುತಾತ್ಮರಾಗಿದ್ದಾರೆ ಮತ್ತು 14 ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಯೋಧರ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ಹೇಳಲಾಗಿದೆ. ಅವರನ್ನು ಚಿಕಿತ್ಸೆಗಾಗಿ ರಾಯಪುರಕ್ಕೆ ಕಳುಹಿಸಲಾಗಿದೆ.

ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: ಐಇಡಿ ಸ್ಫೋಟದಲ್ಲಿ 10 ಜವಾನರು ಹುತಾತ್ಮ; ಚಾಲಕನೂ ಬಲಿ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಎಂ ಪ್ರಮಾಣ ವಚನಕ್ಕೂ ಮುನ್ನ ಛತ್ತೀಸ್‌ಗಢದಲ್ಲಿ ನಕ್ಸಲೀಯರ ದಾಳಿ ನಡೆದಿತ್ತು. ಡಿಸೆಂಬರ್ 13 ರಂದು ನಕ್ಸಲೀಯರು ನಾರಾಯಣಪುರದಲ್ಲಿ ಐಇಡಿ ಸ್ಫೋಟವನ್ನು ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದರೆ,  ಮತ್ತೊಬ್ಬ ಗಾಯಗೊಂಡಿದ್ದ. ರಾಜಧಾನಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಷ್ಣುದೇವ್ ಸಾಯಿ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಾರಾಯಣಪುರದಲ್ಲಿ ಈ ದಾಳಿ ನಡೆದಿತ್ತು. ನಾರಾಯಣಪುರದ ಅಮ್ಡಾಯಿ ಗಣಿಯಲ್ಲಿ ನಕ್ಸಲೀಯರು ಐಇಡಿ ಅಳವಡಿಸಿದ್ದರು. ಇದರಿಂದ ಸಿಎಎಫ್ 9ನೇ ಬಿಎನ್ ಬೆಟಾಲಿಯನ್ ಯೋಧರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ಸಿಎಎಫ್ ಕಾನ್‌ಸ್ಟೆಬಲ್ ಕಮಲೇಶ್ ಸಾಹು ಹುತಾತ್ಮರಾಗಿದ್ದರೆ, ಕಾನ್‌ಸ್ಟೆಬಲ್ ವಿನಯ್ ಕುಮಾರ್ ಸಾಹು ಗಾಯಗೊಂಡಿದ್ದರು.
 

click me!