'ಮಹಾ' ಪುಂಡಾಟಿಕೆ: ಯಡಿಯೂರಪ್ಪ ಪ್ರತಿಕೃತಿ ದಹನ, ಕನ್ನಡ ಚಿತ್ರಗಳಿಗೆ ತಡೆ!

By Suvarna NewsFirst Published Dec 30, 2019, 8:34 AM IST
Highlights

ಮತ್ತೆ ಶಿವಸೇನೆ, ಎಂಇಎಸ್‌ ಮಹಾ ಪುಂಡಾಟಿಕೆ| ಕೊಲ್ಹಾಪುರದಲ್ಲಿ ಸಿಎಂ ಯಡಿಯೂರಪ್ಪ ಪ್ರತಿಕೃತಿ ದಹನ, ಕನ್ನಡ ಚಿತ್ರಪ್ರದರ್ಶನಕ್ಕೆ ತಡೆ, ಕರ್ನಾಟಕಕ್ಕೆ ಬಸ್‌ ರದ್ದು

ಕೊಲ್ಹಾಪುರ[ಡಿ.30]: ಗಡಿ ವಿವಾದ ಸಂಬಂಧ ಕರ್ನಾಟಕದ ವಿರುದ್ಧ ಸದಾ ಹಲ್ಲು ಮಸೆಯುವ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆ ಭಾನುವಾರವೂ ಮುಂದುವರೆದಿದೆ. ಶನಿವಾರ ಕರ್ನಾಟಕ ಧ್ವಜಕ್ಕೆ ಬೆಂಕಿ ಹಾಕಿದ್ದ ಶಿವಸೇನೆ ಕಾರ್ಯಕರ್ತರು ಭಾನುವಾರ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸುವ ಮೂಲಕ ಪುಂಡಾಟಿಕೆ ನಡೆಸಿದ್ದಾರೆ.

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸೋದೆ ನನ್ನ ಮಹದಾಸೆ ಎಂದ ಶಾಸಕ!

ಕೊಲ್ಹಾಪುರ ಬಸ್‌ ನಿಲ್ದಾಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೊಲ್ಹಾಪುರದ ಬಸ್‌ ನಿಲ್ದಾಣ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಸ್ವಲ್ಪ ಸಮಯದವರೆಗೆ ಉದ್ವಿಗ್ನತೆ ಉಂಟಾಯಿತು. ಅಲ್ಲದೇ ಪ್ರತಿಭಟನಾಕಾರರು. ಅಂಗಡಿ ಮುಂಗಟ್ಟುಗಳ ಮೇಲಿರುವ ಕನ್ನಡ ನಾಮಫಲಕವನ್ನು ಕಿತ್ತು ಹಾಕಿದ್ದಲ್ಲದೇ ಫಲಕ ಹಾಗೂ ಕನ್ನಡ ಧ್ವಜಕ್ಕೆ ಮಸಿ ಬಳಿದ ಬಳಿಕ ಕರ್ನಾಟಕ ಸರ್ಕಾರ ಮತ್ತು ಕನ್ನಡ ಸಂಘಟನೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಚಿತ್ರ ಪ್ರದರ್ಶನಕ್ಕೆ ಅಡ್ಡಿ:

ಶಿವಸೇನೆ ಕಾರ್ಯಕರ್ತರು ಭಾನುವಾರ ಕೊಲ್ಹಾಪುರದ ಅಪ್ಸರಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಕನ್ನಡ ಚಿತ್ರ ಅವನೇ ಶ್ರೀಮನಾರಾಯಣ್‌ ಚಿತ್ರವನ್ನು ಪ್ರದರ್ಶನ ಮಾಡದಂತೆ ಚಿತ್ರಮಂದಿರ ಎದುರು ಪ್ರತಿಭಟನೆ ನಡೆಸಿದರು.

ಶಿವಸೇನೆಯಿಂದ ಮತ್ತೆ ಗಡಿ ಕ್ಯಾತೆ: BSY ಸರ್ಕಾರದ ವಿರುದ್ಧ ಸಾಮ್ನಾದಲ್ಲಿ ಲೇಖನ

ಬಸ್‌ ರದ್ದು:

ಈ ನಡುವೆ ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಕಾವು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ಕೊಲ್ಹಾಪುರದಿಂದ ಕರ್ನಾಟಕಕ್ಕೆ ತೆರಳುವ ಎಲ್ಲಾ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಯಿತು. ಮತ್ತೊಂದೆಡೆ ಬೆಳಗಾವಿ ಸಾರಿಗೆ ವಿಭಾಗದಿಂದ 46 ಬಸ್‌ ಹಾಗೂ ಚಿಕ್ಕೋಡಿ ಸಾರಿಗೆ ವಿಭಾಗದಿಂದ ಮಹಾರಾಷ್ಟ್ರಕ್ಕೆ ತೆರಳುವ 160 ಬಸ್‌ ಸಂಚಾರ ಭಾನುವಾರ ಬೆಳಗ್ಗೆಯಿಂದಲೇ ಸ್ಥಗಿತವಾಗಿತ್ತು.

ಡಿಸೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!