ಮಹಾರಾಷ್ಟ್ರದ ಕಾಲೇಜಲ್ಲಿ ಕನ್ನಡದಲ್ಲಿಯೇ ಪಿಯುಸಿ ವಿಜ್ಞಾನ ಕಲಿಕೆ

By Web DeskFirst Published Nov 29, 2019, 9:32 AM IST
Highlights

ರಾಜ್ಯದಲ್ಲಿಯೇ ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಕಲಿಸುವ ವ್ಯವಸ್ಥೆ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಆದರೆ ಮಹಾರಾಷ್ಟ್ರದ ಕಾಲೇಜೊಂದರಲ್ಲಿ ಕನ್ನಡದಲ್ಲಿ ಬೋಧಿಸಲಾಗುತ್ತಿದೆ.

ಮುಂಬೈ [ನ.29]: ಪಿಯುಸಿಯಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಕಲಿಸುವ ವ್ಯವಸ್ಥೆ ಕರ್ನಾಟಕದಲ್ಲೇ ಇನ್ನೂ ಸಮಪರ್ಕಕವಾಗಿ ಅನುಷ್ಠಾನಗೊಂಡಿಲ್ಲ. ಅಂಥದ್ದರಲ್ಲಿ ಮಹಾರಾಷ್ಟ್ರದ ಪಿಯು ಕಾಲೇಜೊಂದು ವಿದ್ಯಾರ್ಥಿಗಳಿಗೆ 12ನೇ ತರಗತಿ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸುತ್ತಿದೆ.

ಹೌದು, ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಸಾಂಗ್ಲಿ ಜಿಲ್ಲೆಯ ಜತ್ತಾ ತಾಲೂಕಿನಲ್ಲಿರುವ ಶ್ರೀ ಗುರು ಬಸವ ವಿದ್ಯಾಮಂದಿರ ಹಾಗೂ ಜೂನಿಯರ್‌ ಕಾಲೇಜ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ವಿಜ್ಞಾನ ವಿಷಯವನ್ನು ಕನ್ನಡದಲ್ಲೇ ಬೋಧಿಸಲಾಗುತ್ತಿದೆ.

ಎರಡನೇ ವರ್ಷದ ಪಿಯುಸಿ ಕನ್ನಡ ಮಾಧ್ಯಮದಲ್ಲಿ ಅಗ್ರ ಅಂಕ ಪಡೆದ ವಿದ್ಯಾರ್ಥಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಕಳೆದ 10 ವರ್ಷಗಳಿಂದ ಸನ್ಮಾನಿಸುತ್ತಿದ್ದು, ಎಂದಿನಂತೆ ಈ ಬಾರಿಯೂ ವಿಜ್ಞಾನ ವಿಷಯದಲ್ಲಿ ಈ ಪ್ರಶಸ್ತಿ ಗುರು ಬಸವ ವಿದ್ಯಾಮಂದಿರ ಕಾಲೇಜಿನ ವಿದ್ಯಾರ್ಥಿಗಳ ಪಾಲಾಗಿದೆ. ಗುರು ಬಸವ ಕಾಲೇಜಿನ ಪಲ್ಲವಿ ಭವು ಸಿಂಗ್‌ ಚೌಹಾಣ್‌ 2018​-19ನೇ ಸಾಲಿನಲ್ಲಿ ಕನ್ನಡ ಮಾಧ್ಯಮ ಪಿಯುಸಿ 2ನೇ ವರ್ಷದ ವಿಜ್ಞಾನದಲ್ಲಿ ಅಗ್ರ ಸ್ಥಾನ ಪಡೆದಿದ್ದಾಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಇತ್ತೀಚೆಗೆ ಸನ್ಮಾನ ಸ್ವೀಕರಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಪರ್ಯಾಸವೆಂದರೆ ಕರ್ನಾಟಕದಲ್ಲಿ ಇನ್ನೂ ಅಧಿಕೃತವಾಗಿ ಪಿಯು ಕನ್ನಡ ಕಾಲೇಜ್‌ ಆರಂಭವಾಗಿಲ್ಲ. ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಕರ್ನಾಟಕದ ಮೈಸೂರಿನ ಪಿಯು ಕಾಲೇಜೊಂದರಲ್ಲಿ ಈ ವರ್ಷದಿಂದ ಆರಂಭಿಸಲಾಗಿದೆ. ಆದರೆ, ಆದರೆ, ಎರಡನೇ ವರ್ಷದ ಪಿಯುಸಿ ಕನ್ನಡ ತರಗತಿ 2020ರಿಂದ ಆರಂಭವಾಗಲಿದೆ.

ಗಡಿ ಭಾಗದ ಕನ್ನಡ ಭಾಷಿಕ ಕುಟುಂಬಗಳು ತಮ್ಮ ವಾರ್ಡ್‌ನಲ್ಲಿ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಕಲಿಸುವುದನ್ನೇ ಉತ್ತೇಜಿಸುತ್ತಿವೆ. ಗುರುಬಸವ ಕಾಲೇಜ್‌ 1967ರಲ್ಲಿ ಸ್ಥಾಪನೆ ಆಗಿದ್ದು, ಕಾಲೇಜ್‌ ಆಡಳಿತ ಮಂಡಳಿ ವಿಜ್ಞಾನ ವಿಷಯದಲ್ಲಿ ಕನ್ನಡ ಕೋರ್ಸ್‌ ಅನ್ನು 1997ರಲ್ಲಿ ಪರಿಚಯಿಸಿದೆ. ಅಲ್ಲದೇ ಕಲಾ ಮತ್ತು ವಾಣಿಜ್ಯ ವಿಭಾಗವನ್ನೂ ಕನ್ನಡದಲ್ಲೇ ತೆರೆಯಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿದ್ಯಾರ್ಥಿಗಳು ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡುತ್ತಾರೆ. ಹೀಗಾಗಿ ಉನ್ನತ ಶಿಕ್ಷಣ ಅಭ್ಯಾಸ ಮಾಡುವಾಗ ವಿದ್ಯಾರ್ಥಿಗಳಿಗೆ ಕಷ್ಟಎನಿಸುವುದಿಲ್ಲ. ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಕನ್ನಡದ ಸೂಕ್ತ ಪದಗಳು ಲಭ್ಯವಾಗದೇ ಇದ್ದಾಗ ಇಂಗ್ಲಿಷ್‌ ಪದವನ್ನು ಬಳಕೆ ಮಾಡುತ್ತಾರೆ. ಕನ್ನಡ ಪದ ಸಿಗದೇ ಇದ್ದಾಗ ಇಂಗ್ಲಿಷ್‌ ಬಳಸಲು ಅವಕಾಶ ಕಲ್ಪಿಸಲಾಗಿದೆ. ನಾವು ಇಂಗ್ಲಿಷ್‌ ಪುಸ್ತಕವನ್ನೂ ಬಳಕೆ ಮಾಡುತ್ತೇವೆ. ಭಾಷೆ ಯಾವುದೇ ಆಗಿದ್ದರೂ ವಿದ್ಯಾರ್ಥಿಗಳಿಗೆ ವಿಷಯ ಅರ್ಥವಾಗಿದೇ ಎನ್ನುವುದು ಮುಖ್ಯ ಎಂದು ಗುರು ಬಸವ ಕಾಲೇಜಿನ ಶಿಕ್ಷಕರು ಹೇಳಿದ್ದಾರೆ.

click me!