
ಭೋಪಾಲ್[ಡಿ.02]: ಪೊಲೀಸರ ಡ್ಯೂಟಿ ಬಹಳ ಕಷ್ಟ, ಆರೋಪಿಯ ಹುಡುಕಾಟಕ್ಕಾಗಿ ಬಹಳಷ್ಟು ಅಲೆದಾಡಿದರೂ ಕೆಲವೊಮ್ಮೆ ಕೈಗೆ ಸಿಗದೆ ಪರಾರಿಯಾಗುತ್ತಾರೆ. ಹೀಗಿರುವಾಗ ಇಲ್ಲೊಬ್ಬ ಮಹಿಳಾ ಪೊಲೀಸ್ ಅಧಿಕಾರಿ ಕಳ್ಳನನ್ನು ಹಿಡಿಯಲು ವಿಭಿನ್ನ ತಂತ್ರ ಹೂಡಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಯ ಯೋಜನೆಯಂತೆ ಎಲ್ಲವೂ ನಡೆದಿದ್ದು, ಕಳ್ಳ ನಿರಾಯಾಸವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹೌದು ಮಧ್ಯಪ್ರದೇಶದಲ್ಲಿ ಕೊಲೆ ಹಾಗೂ ದರೋಡೆ ಆರೋಪಿ ಬಾಲಕೃಷ್ಣ ಚೌಬೆ ಕಳೆದ 15 ದಿನಗಳಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ. ಈ ಆರೋಪಿಯನ್ನು ಹೇಗೆ ಹಿಡಿಯುವುದು ಎಂಬ ಚಿಂತೆಯಲ್ಲಿದ್ದ ಪೊಲೀಸರಿಗೆ ಬಾಲಕೃಷ್ಣ ಮದುವೆಯಾಗುವ ತಯಾರಿಯಲ್ಲಿದ್ದಾನೆಂಬ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಪಡೆದ ಪೊಲೀಸರು ಆತನನ್ನು ಬೇಟೆಯಾಡಲು ಮದುವೆಯ ಉಪಾಯ ಹೂಡಿದ್ದಾರೆ.
ಮಿಸ್ ದಾವಣೆಗೆರೆ ಆಗಿದ್ರು ಈ ಖಡಕ್ ಐಪಿಎಸ್ ಅಧಿಕಾರಿ!
ತಮ್ಮ ಉಪಾಯದ ಕುರಿತು ಮಾಹಿತಿ ನೀಡಿದ ಪೊಲೀಸ್ ಸಿಬ್ಬಂದಿ ಮಾಧವಿ ಅಗ್ನಿಹೋತ್ರಿ 'ನಾನು ರಾಧಾ ಲೋಧಿ ಎಂದು ಆತನೊಂದಿಗೆ ಪರಿಚಯ ಮಾಡಿಕೊಂಡೆ. ಅಲ್ಲದೇ ನಾನು ಮಧ್ಯಪ್ರದೇಶದ ಚತರ್ಪುರ್ ನಿವಾಸಿ ಹಾಗೂ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲ ದಿನಗಳಿಗೆ ನಾನು ಊರಿಗೆ ಬರುತ್ತಿರುವುದಾಗಿ ಆತನ ಬಳಿ ಹೇಳಿದ್ದೆ' ಎಂದಿದ್ದಾರೆ.
ಪೊಲೀಸರು ಹೆಣೆದಿದ್ದ ಈ ಬಲೆಗೆ ಬಾಲಕೃಷ್ಣ ಸುಲಭವಾಗಿ ಸಿಲುಕಿದ್ದ. ತಾನು ಚಾಟ್ ಮಾಡುತ್ತಿರುವುದು ಪೊಲೀಸ್ ಅಧಿಕಾರಿಯೊಂದಿಗೆ ಎಂದು ತಿಳಿಯದ ಬಾಲಕೃಷ್ಣ ಸಮಯ ನೋಡಿ ಮದುವೆಯಾಗುವ ಪ್ರಸ್ತಾಪವನ್ನೂ ಇಟ್ಟಿದ್ದ ಹಾಗೂ ಮದುವೆಗೂ ಮುನ್ನ ಭೇಟಿಯಾಗಬೇಕು ಎಂದಿದ್ದ. ಇದನ್ನೇ ಬಯಸಿದ್ದ ಪೊಲೀಸ್ ಅಧಿಕಾರಿ ಮಾಧವಿ ಆತನ ಬಳಿ ಮೂರು ದಿನಗಳವರೆಗೆ ಕರೆ ಮಾಡಿ ಮಾತನಾಡಿದ್ದಾರೆ. ಅಲ್ಲದೇ ಆರೋಪಿಗೆ ತನ್ನ ಮೇಲೆ ನಂಬಿಕೆ ಹುಟ್ಟಿದೆ ಎಂದು ದೃಢಪಟ್ಟ ಬಳಿಕ ಭೇಟಿಯಾಗಲು ದೇವಸ್ಥಾನವೊಂದಕ್ಕೆ ಕರೆದಿದ್ದಾರೆ.
ಭೇಟಿಯಾಗುವ ದಿನದಂದು ಇತರ ಪೊಲೀಸ್ ಅಧಿಕಾರಿಗಳು ಸಮವಸ್ತ್ರ ಧರಿಸದೆ, ಸಾಮಾನ್ಯ ಬಟ್ಟೆ ಧರಿಸಿ ದೇವಸ್ಥಾನವನ್ನು ಸುತ್ತುವರೆದಿದ್ದಾರೆ. ತಾನು ಬಂಧಿಯಾಗುತ್ತೇನೆಂಬ ಊಹೆಯನ್ನೂ ಮಾಡದ ಬಾಲಕೃಷ್ಣ ತಾನು ಚಾಟ್ ಮಾಡುತ್ತಿದ್ದ ಯುವತಿ[ಮಾಧವಿ ಅಗ್ನಿಹೋತ್ರಿ] ಭೇಟಿಯಾಗಲು ಬಂದಿದ್ದಾನೆ. ಆತ ಬರುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇನ್ನು ತಲೆಮರೆಸಿಕೊಂಡಿದ್ದ ಬಾಲಕೃಷ್ಣನನ್ನು ಹಿಡಿದವರಿಗೆ 10 ಸಾವಿರ ಬಹುಮಾನವನ್ನೂ ಪೊಲೀಸ್ ಇಲಾಖೆ ಘೋಷಿಸಿತ್ತು. ಪೊಲೀಸರು ಬಾಲಕೃಷ್ಣ ಚೌಬೆಯನ್ನು ಬಂಧಿಸಿದ ಬಳಿಕ ಶುಕ್ರವಾರದಂದು ಕೋರ್ಟ್ಗೆ ಹಾಜರುಪಡಿಸಿದ್ದಾರೆ. ವಿಚಾರಣೆ ಬಳಿಕ ಆತನನ್ನು ಜೈಲಿಗಟ್ಟಲಾಗಿದೆ.
ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳಾ ಪೊಲೀಸ್ ಅಧಿಕಾರಿ ಮಾಧವಿ ಅಗ್ನಿಹೋತ್ರಿಯ ಈ ಪ್ಲಾನ್ ಹಾಗೂ ಆಕೆಯ ಧೈರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ದಕ್ಷ, ಪ್ರಾಮಾಣಿಕ, ಖಡಕ್ ಅಧಿಕಾರಿ, ಲವಿಂಗ್ ಅಮ್ಮ ರೋಹಿಣಿ ಸಿಂಧೂರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ