ಆಗ ಮನೆಗೆ ಬಂದು ಉಂಡು ಹೋದ ರಾಜ್ಯಪಾಲರು... ಈಗ 14000 ಬಿಲ್‌ ಬರೆದ ಅಧಿಕಾರಿಗಳು

By Suvarna NewsFirst Published Dec 26, 2021, 7:14 PM IST
Highlights
  • ಅಂದು ಮನೆಗೆ ಬಂದಿದ್ದ ರಾಜ್ಯಪಾಲರು
  • ಹೊಸ ಗೇಟ್‌ ತಂದಿಟ್ಟ ಅಧಿಕಾರಿಗಳು
  • ಈಗ 14000 ಬಿಲ್‌ ನೀಡುವಂತೆ ಅಧಿಕಾರಿಗಳ ಒತ್ತಾಯ

ಭೋಫಾಲ್‌(ಡಿ. 26): ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಹಳ್ಳಿಯೊಂದರ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದ ಆದಿವಾಸಿ ಸಮುದಾಯದ ಬುಧ್ರಾಮ್‌ ಆದಿವಾಸಿ ಎಂಬವರಿಗೆ ಆಗಸ್ಟ್‌ನಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮನೆಯನ್ನು ನಿರ್ಮಿಸಿ ಕೀಯನ್ನು ಹಸ್ತಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯಪಾಲ ಮಂಗುಭಾಯ್ ಸಿ ಪಟೇಲ್ (Mangubhai C Patel) ಅವರೇ ಸ್ವತಃ ಆಗಮಿಸಿ ಬುಧ್ರಾಮ್‌ ಆದಿವಾಸಿ (Budhram Adivasi) ಅವರಿಗೆ ಮನೆಯ ಕೀಯನ್ನು ನೀಡಿದ್ದರು. ಜೊತೆಗೆ ಅವರೊಂದಿಗೆ ಕುಳಿತು ಆಹಾರ ಸೇವಿಸಿದ್ದರು. 

ಆಗ ಬುಧ್ರಾಮ್‌ ಅವರ ಜೀವನದಲ್ಲಿ ತುಂಬಾ ಸಂತೋಷವಿತ್ತು. ಆದರೆ ರಾಜ್ಯಪಾಲರಿಗೆ ಊಟದ ಆತಿಥ್ಯ ನೀಡಿದ ನಂತರ ಅವರ ಜೀವನಕ್ಕೆ ಈ ರೀತಿ ಸಂಕಷ್ಟ ಬಂದೊದಗುತ್ತದೆ ಎಂದು ಅವರು ಭಾವಿಸಿರಲಿಲ್ಲ. ಆಗಸ್ಟ್ 24 ರಂದು ರಾಜ್ಯಪಾಲರು ಜಿಲ್ಲೆಗೆ ಭೇಟಿ ನೀಡಿದಾಗ ಬುಧ್ರಾಮ್‌ ಅವರ ಮನೆಯ ಗೃಹ ಪ್ರವೇಶವನ್ನು ಮಾಡಿದ್ದರು ಮತ್ತು ಅಲ್ಲಿಯೇ ರಾಜ್ಯಪಾಲರಿಗೆ ಊಟ ನೀಡುವ ಬಗ್ಗೆ ರಾಜ್ಯಪಾಲರ ಕಚೇರಿ ನಿರ್ಧರಿಸಿತ್ತು. ಹೀಗಾಗಿ ರಾಜ್ಯಪಾಲರು ಬುಧ್ರಾಮ್‌ ಮನೆಯಲ್ಲೇ ಊಟ ಮಾಡಿದ್ದರು. 

ಇದಾದ ಮರು ದಿನ ಪಂಚಾಯಿತಿ ಸದಸ್ಯರು ಬುಧ್ರಾಮ್‌ ಮನೆಗೆ ಆಗಮಿಸಿದ್ದು, ಬಡ ಬುಧ್ರಾಮ್‌ಗೆ ಗೇಟ್‌ 14,000 ರೂಪಾಯಿ ಆಗಿದ್ದು, ಅದರ ಬಿಲ್‌ ನೀಡುವಂತೆ ಕೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಬುಧ್ರಾಮ್‌, ಅಧಿಕಾರಿಗಳು ಬಂದರು. ಗವರ್ನರ್ ಸಾಹೇಬರು ಇಲ್ಲೇ ಊಟ ಮಾಡ್ತಾರೆ ಅಂದರು.  14 ಸಾವಿರಕ್ಕೂ ಹೆಚ್ಚು ಬೆಲೆಯ ಹೊಸ ಗೇಟ್ ಫಿಕ್ಸ್ ಮಾಡಿದರು. ಈಗ ನನ್ನ ಬಳಿ ಇಲ್ಲದ ಹಣ ಕೇಳುತ್ತಿದ್ದಾರೆ. ಹಣ ಕೊಡಬೇಕು ಅಂತ ಅಂತ ಗೊತ್ತಿದ್ದರೆ ನಾನು ಆ ಗೇಟ್‌ ಅನ್ನು ಸ್ಥಾಪಿಸುತ್ತಿರಲಿಲ್ಲ ಎಂದು ತಿಳಿಸಿದರು.

ಸರ್ಕಾರ ಕೊಡುವ ಮನೆಯ ಒಡೆತನ ಮಹಿಳೆಗೆ: ಅಮೃತ ಮಹೋತ್ಸವದಲ್ಲಿ ಮೋದಿ ಮಾತು!

ಇದಷ್ಟೇ ಅಲ್ಲದೇ ಬುಧ್ರಾಮ್ ಅವರ ಹೊಸ ಮನೆಗೆ ಅಡುಗೆ ಅನಿಲ ಸಂಪರ್ಕವನ್ನು (ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ) ನೀಡುವುದಾಗಿ ಭರವಸೆ ನೀಡಿದರು. ಆದರೆ ಆರು ತಿಂಗಳ ನಂತರ, ಅವನಿಗೆ ಗ್ಯಾಸ್ ಕೂಡ ಇಲ್ಲ ಮನೆಯೂ ಇಲ್ಲ ಎಂಬಂತಾಗಿದೆ. ಏಕೆಂದರೆ ಮನೆಯನ್ನು ಸಂಪೂರ್ಣವಾಗಿ ಇನ್ನೂ ನಿರ್ಮಿಸಲಾಗಿಲ್ಲ. 

ಈ ಬಗ್ಗೆ ನಗರಾಭಿವೃದ್ಧಿ ಸಚಿವ (Development Minister) ಭೂಪೇಂದ್ರ ಸಿಂಗ್( Bhupendra Singh) ಅವರನ್ನು ಸಂಪರ್ಕಿಸಿದಾಗ, ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಲಿದೆ. ಹೀಗಾಗಬಾರದಿತ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದು ರಾಜ್ಯಪಾಲರ ಘನತೆಗೆ ವಿರುದ್ಧವಾಗಿದೆ. ಹೀಗಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಅತಿಥಿಗಳು ಬಂದರೆ ಮನೆಯನ್ನು ಅಲಂಕರಿಸುವ ಸಂಪ್ರದಾಯ ನಮ್ಮಲ್ಲಿದೆ. ಆದರೆ ನೀವು ಹೇಳಿದಂತೆ ಇದು  ರಾಜ್ಯಪಾಲರ ಘನತೆಗೆ ವಿರುದ್ಧವಾಗಿದೆ. ಹಾಗಾಗಿ ನಾವು ಕ್ರಮಕೈಗೊಳ್ಳುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.

ಸದ್ಯ ಬುಧ್ರಾಮ ಅವರ ಈ ಸ್ಥಿತಿ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ರಾಜ್ಯಪಾಲರ ಭೇಟಿ ಬಳಿಕ ಅಧಿಕಾರಿಗಳು ₹ 14 ಸಾವಿರ ಬಿಲ್ ನೀಡಿದರು. ಬಡವರ ಲೂಟಿ ನಿಲ್ಲಿಸಿ ಎಂಬುದು ನನ್ನ ಮನವಿ. ಅವರಿಗಾಗುತ್ತಿರುವ ಅನ್ಯಾಯಕ್ಕೆ ಕಾರಣರಾದವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಶಾಸಕ ಕುನಾಲ್‌ ಚೌಧರಿ (Kunal Chaudhary) ಹೇಳಿದ್ದಾರೆ.

ಪಿಎಂ ಆವಾಸ್‌ ಫಲಾನುಭವಿಗಳೊಂದಿಗೆ ಮೋದಿ ನಗೆ ಚಟಾಕಿ, ಮಹಿಳೆಯರಿಂದ ಟಕ್ಕರ್!

ಮಧ್ಯಪ್ರದೇಶದ  ಡಿಂಡೋರಿ (Dindori) ಜಿಲ್ಲೆಯ ಬುಡಕಟ್ಟು ಜನಾಂಗದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹುಲ್ಲಿನ ಗುಡಿಸಲುಗಳನ್ನು ಹೇಗೆ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಧ್ಯಮವೊಂದು ವರದಿ ಮಾಡಿತ್ತು. ಇನ್ನೂ ಕೆಟ್ಟ ಪರಿಸ್ಥಿತಿ ಎಂದರೆ, ಇವುಗಳನ್ನು ಲಂಚ ಪಡೆದ ನಂತರವೇ ಹಂಚಲಾಯಿತು ಎಂಬ ಆರೋಪವಿದೆ.  ₹ 14,000 ಪಾವತಿಸಿದ ನಂತರವೂ ಕೋಳಿಯನ್ನು ನೀಡುವಂತೆ ಅಧಿಕಾರಿಗಳು ಒತ್ತಾಯಿಸಿದರು ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಮತ್ತು ಇಬ್ಬರು ಕಿರಿಯ ಅಧಿಕಾರಿಗಳನ್ನು ತೆಗೆದುಹಾಕಲಾಗಿದೆ. ಎಲ್ಲಾ ವಸತಿ ರಹಿತ ಕುಟುಂಬಗಳಿಗೆ ಮನೆ ಒದಗಿಸುವ ಗುರಿಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಆ ಮಹತ್ವಾಕಾಂಕ್ಷೆಯ ಯೋಜನೆಗೆ 2022  ಗಡುವು ನೀಡಲಾಗಿದೆ.  ಮಧ್ಯಪ್ರದೇಶದಲ್ಲಿ 26.28 ಲಕ್ಷ ಮನೆ ನಿರ್ಮಾಣದ ಗುರಿ ಇದ್ದು, 20.65 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿವೆ. ಕಳೆದ ತಿಂಗಳ ಕೊನೆಯ ವಾರದಲ್ಲಿ ಗುಣ ( Guna) ಮತ್ತು ಶಿಯೋಪುರ್ (Sheopur) ಜಿಲ್ಲೆಗಳಲ್ಲಿ 24,000 ಕ್ಕಿಂತ ಕಡಿಮೆ ಮನೆಗಳನ್ನು ಅನುಮೋದಿಸಲಾಗಿದೆ.

click me!