
ಕನ್ಯಾಕುಮಾರಿ: ವಿಶ್ವಾಸ ಅಥವಾ ನಿಷ್ಠೆ ಎಂಬ ಪದಕ್ಕೆ ಮರುರೂಪ ನೀಡಬಲ್ಲ ಏಕೈಕ ಪ್ರಾಣಿ ಎಂದರೆ ಅದು ನಾಯಿ. ತನಗೆ ಒಂದು ತುತ್ತು ಅನ್ನ ನೀಡಿದ ಯಜಮಾನನಿಗೆ ಅಪಾಯ ಎದುರಾದಾಗ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ಅದೆಷ್ಟೋ ಕಥೆಗಳನ್ನು ನಾವು ಕೇಳಿದ್ದೇವೆ. ಅಂತಹದ್ದೇ ಒಂದು ಮೈ ನಡುಗಿಸುವ ಮತ್ತು ಕಣ್ಣೀರು ತರಿಸುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತಕ್ಕಲೈ ಎಂಬಲ್ಲಿ ನಡೆದಿದೆ.
ತಕ್ಕಲೈ ನಿವಾಸಿ ವಿಕೇಶ್ ಎಂಬುವವರು ತಮ್ಮ ಪತ್ನಿ ಗಾಯತ್ರಿ, ಇಬ್ಬರು ಮಕ್ಕಳು ಮತ್ತು ಅತ್ತೆ ಪದ್ಮಕುಮಾರಿ ಅವರೊಂದಿಗೆ ವಾಸಿಸುತ್ತಿದ್ದಾರೆ. ಈ ಕುಟುಂಬವು ಕಳೆದ ಎರಡು ವರ್ಷಗಳಿಂದ 'ಚಿನ್-ಚಾನ್' ಎಂಬ ಮುದ್ದಾದ ಶ್ವಾನವನ್ನು ಸಾಕಿತ್ತು. ಈ ನಾಯಿ ಕೇವಲ ಸಾಕುಪ್ರಾಣಿಯಾಗಿರದೆ, ಆ ಮನೆಯ ಸದಸ್ಯನಂತೆಯೇ ಬೆಳೆದಿತ್ತು. ಕಳೆದ ಸಂಜೆ ವಿಕೇಶ್ ಅವರ ಅತ್ತೆ ಪದ್ಮಕುಮಾರಿ ಮನೆಯ ಮುಂಭಾಗದ ಅಂಗಳದಲ್ಲಿ ಕುಳಿತಿದ್ದರು. ಈ ವೇಳೆ ಸುಮಾರು 7 ಅಡಿ ಉದ್ದದ ಬೃಹತ್ ನಾಗರಹಾವೊಂದು ಏಕಾಏಕಿ ಅವರತ್ತ ನುಗ್ಗಿ ಬಂದಿದೆ. ಹಾವನ್ನು ಕಂಡು ಗಾಬರಿಗೊಂಡ ಪದ್ಮಕುಮಾರಿ ಜೋರಾಗಿ ಕಿರುಚಿಕೊಂಡಿದ್ದಾರೆ. ಅತ್ತೆಯ ಕಿರುಚಾಟ ಕೇಳುತ್ತಿದ್ದಂತೆಯೇ ಮನೆಯ ಒಳಗಿದ್ದ ಚಿನ್-ಚಾನ್ ಕ್ಷಣಾರ್ಧದಲ್ಲಿ ಹೊರಬಂದಿದೆ.
ತನ್ನ ಯಜಮಾನಿಗೆ ಅಪಾಯವಾಗುವುದನ್ನು ಅರಿತ ಚಿನ್-ಚಾನ್, ಕಿಂಚಿತ್ತೂ ಭಯಪಡದೆ 7 ಅಡಿಯ ಹಾವಿನ ಮೇಲೆರಗಿದೆ. ನಾಯಿ ಮತ್ತು ಹಾವಿನ ನಡುವೆ ಭೀಕರ ಹೋರಾಟ ನಡೆದಿದೆ. ಹಾವನ್ನು ಕಚ್ಚಲು ಹೋದಾಗ, ನಾಗರಹಾವು ಶ್ವಾನಕ್ಕೆ ಬಲವಾಗಿ ಕಚ್ಚಿದೆ. ಹಾವಿನ ವಿಷವೇರಿದರೂ ಛಲ ಬಿಡದ ಚಿನ್-ಚಾನ್, ಹಾವನ್ನು ತನ್ನ ಬಾಯಿಯಿಂದ ಕಚ್ಚಿ ಎರಡೂ ತುಂಡುಗಳನ್ನಾಗಿ ಮಾಡಿ ಸಾಯಿಸಿದೆ.
ಹಾವನ್ನು ಕೊಂದ ಕೆಲವೇ ನಿಮಿಷಗಳಲ್ಲಿ ಹಾವಿನ ವಿಷ ಶ್ವಾನದ ದೇಹವಿಡೀ ಹರಡಿದೆ. ಬಾಯಲ್ಲಿ ನೊರೆ ಬಂದು ಚಿನ್-ಚಾನ್ ತನ್ನ ಯಜಮಾನರ ಮುಂದೆಯೇ ಮೃತಪಟ್ಟಿದೆ. ತಮ್ಮ ಪ್ರಾಣ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಚಿನ್-ಚಾನ್ ನೋಡಿ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ತನ್ನ ನಿಷ್ಠೆಯನ್ನು ಪ್ರಾಣಾರ್ಪಣೆಯ ಮೂಲಕ ಸಾಬೀತುಪಡಿಸಿದ ಈ ಶ್ವಾನದ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮನುಷ್ಯರಿಗಿಂತ ಮಿಗಿಲಾದ ನಿಷ್ಠೆ ಈ ಮೂಕಪ್ರಾಣಿಯದ್ದು ಎಂದು ಕಂಬನಿ ಮಿಡಿಯುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ