ಶಿವಮೊಗ್ಗದಲ್ಲಿ ಬಂಡಾಯ ಬಾವುಟ ಹಾರಿಸಿದ ಈಶ್ವರಪ್ಪ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ!

By Suvarna NewsFirst Published Mar 15, 2024, 7:57 PM IST
Highlights

ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ತೀವ್ರ ಅಸಮಾಧಾನಗೊಂಡಿದ್ದ ಕೆಎಸ್ ಈಶ್ವರಪ್ಪ ಇದೀಗ ಬೆಂಬಲಿಗರ ಸಭೆ ಬಳಿಕ ಮಹತ್ವದ ಘೋಷಣೆ ಮಾಡಿದ್ದಾರೆ. ಈಶ್ವರಪ್ಪ ಇದೀಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
 

ಶಿವಮೊಗ್ಗ(ಮಾ.15) ಶಿವಮೊಗ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೂ ಟಿಕೆಟ್ ನಿರಾಕರಿಸಿದ ಬಿಜೆಪಿ ವಿರುದ್ಧ ಕೆಎಸ್ ಈಶ್ವರಪ್ಪ ಬಂಡಾಯ ಎದ್ದಿದ್ದಾರೆ. ಶಿವಮೊಗ್ಗದಿಂದ ಕೆಎಸ್ ಈಶ್ವರಪ್ಪ ಸ್ವತಂತ್ರ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಇಂದು ಬೆಂಬಲಿಗರ ಜೊತೆ ಮಹತ್ವದ ಸಭೆ ನಡೆಸಿದ ಈಶ್ವರಪ್ಪ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು. ಪ್ರಧಾನಿ ಮೋದಿ ಅಪೇಕ್ಷೆಯಂತೆ ಕರ್ನಾಟಕ ಬಿಜೆಪಿ ಆಗಬೇಕು. ಕುಟುಂಬ ರಾಜಕಾರಣದ ವಿರುದ್ದ ಮೋದಿ ಧ್ವನಿ ಎತ್ತಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಬೆಂಬಲಿಗರ ಸಭೆಯಲ್ಲಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಆಲಿಸಿದ ಬಳಿಕ ಮಾತನಾಡಿದ ಈಶ್ವರಪ್ಪ, ಬಂಡಾಯ ಸ್ಪರ್ಧ ಘೋಷಣೆ ಮಾಡಿದ್ದಾರೆ. ಇದು ಭಾವುಕರಾಗಿ ಆಡಿದ ಮಾತಲ್ಲ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಈಶ್ವರಪ್ಪ ಹರಿಹಾಯ್ದಿದ್ದಾರೆ.

ಶಿವಮೊಗ್ಗದ ಅಪ್ಪ-ಮಗ ಸೇರಿ ಮೋಸ ಮಾಡಿಬಿಟ್ರು ಅಂತ, ಬಿಜೆಪಿ ವಿರುದ್ಧ ಸಿಡಿದೆದ್ದ ಕೆ.ಎಸ್. ಈಶ್ವರಪ್ಪ!

ನಾನು ಸ್ಪತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬಿಜೆಪಿ ಏನು ಮಾಡುತ್ತೆ? ಪಕ್ಷ ನನಗೆ ನೋಟಿಸ್ ನೀಡಲಿದೆ. ಹೆಚ್ಚಂದರೆ ಪಕ್ಷದಿಂದ ಉಚ್ಚಾಟಿಸುತ್ತಾರೆ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ನಾನು ಗೆದ್ದ ಬಳಿಕ ಮತ್ತೆ ಬಿಜೆಪಿ ನನ್ನನ್ನು ಸೇರಿಸಿಕೊಳ್ಳುತ್ತಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಖಂಡಿತ ಮಮೋದಿ ವಿರುದ್ಧ ಅಲ್ಲ. ಮೋದಿ ಮೂರನೇ ಭಾರಿಗೆ ಪ್ರಧಾನಿಯಾಗುತ್ತಾರೆ ಎಂದು ಈಶ್ವರಪ್ಪ ಹೇಳಿದ್ದರೆ.

ಪಕ್ಷದಿಂದ ಹೊರನಡೆದ ಕಾಂಗ್ರೆಸ್ ಸೇರಿಕೊಂಡ ಜಗದೀಶ್ ಮತ್ತೆ ಪಕ್ಷಕ್ಕೆ ಕರೆಸಿಕೊಂಡು ಟಿಕೆಟ್ ನೀಡುತ್ತೀರಿ. ಹಾಗಾದರೆ ಪಕ್ಷದ ಹೇಳಿದ ಹಾಗೆ ನಡೆದುಕೊಂಡ ನನಗೆ ಯಾಕೆ ಟಿಕೆಟ್ ಕೊಡಲ್ಲ ಎಂದು ಈಶ್ವರಪ್ಪ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  ಪ್ರಧಾನಿ ಮೋದಿಯನ್ನು ಮತ್ತೆ ಗೆಲ್ಲಿಸಬೇಕು. ಇದಕ್ಕಾಗಿ ಶ್ರಮಿಸೋಣ. ಮೋದಿ ಗೆಲುವಿನ ಸಂಭ್ರಮಾಚರಣೆಗೆ ನಾವು ಒಟ್ಟಿಗೆ ಸೇರಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.

Eshwarappa on BSY: ನನ್ನ ಮಗನಿಗೆ ಬಿಎಸ್‌ವೈ ಯಾಕೆ ಟಿಕೆಟ್ ಕೊಡಿಸಲಿಲ್ಲ, ನನಗೆ ಮೋಸ ಮಾಡಿದ್ದಾರೆ: ಕೆ.ಎಸ್ ಈಶ್ವರಪ್ಪ

ಇಂತ ದಿನ ಬರುತ್ತೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ನನಗೆ, ನನ್ನವರಿಗೆ ಬೇಕು ಎಂಬುದು ಬದಲಾಗಬೇಕು. ಪಕ್ಷಕ್ಕಾಗಿ ಶ್ರಮಿಸುವ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ಪ್ರಧಾನಿ ಮೋದಿ ಆಶಯಕ್ಕ ನಾನು ಬದ್ಧ. ಮೋದಿ ವಿರುದ್ಧ ಹೋಗುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

click me!