
ನವದೆಹಲಿ(ಏ.28): 40 ದಿನಗಳ ಲಾಕ್ಡೌನ್ ಅಂತ್ಯವಾಗಲು ಇನ್ನು ಕೇವಲ ಒಂದು ವಾರ ಉಳಿದಿರುವಾಗಲೇ, ಕೊರೋನಾ ವಿರುದ್ಧದ ಹೋರಾಟದ ಜತೆಜತೆಗೇ ಆರ್ಥಿಕತೆಗೂ ದೇಶ ಮಹತ್ವ ನೀಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ತನ್ಮೂಲಕ, ಕೊರೋನಾ ಹಾವಳಿ ಇರುವ ಪ್ರದೇಶಗಳಲ್ಲಿ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಇತರೆಡೆ ಹಂತಹಂತವಾಗಿ ವಾಪಸ್ ಪಡೆಯುವ ಸ್ಪಷ್ಟಸುಳಿವು ಬಿಟ್ಟುಕೊಟ್ಟಿದ್ದಾರೆ.
ಕೊರೋನಾ ವೈರಸ್ ನಿಯಂತ್ರಣ ಹಾಗೂ ಲಾಕ್ಡೌನ್ನ ಭವಿಷ್ಯ ನಿರ್ಧರಿಸುವ ಕುರಿತಂತೆ ಸೋಮವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಮೋದಿ, ‘ಕೊರೋನಾ ವೈರಸ್ ಎಲ್ಲಿ ತೀವ್ರವಾಗಿದೆಯೋ ಅಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
ರಾಜ್ಯದಲ್ಲಿ ಮತ್ತೆ 9 ಕೇಸ್ ದೃಢ, 11 ಮಂದಿ ಗುಣಮುಖ!
‘ಲಾಕ್ಡೌನ್ನಿಂದ ಸಾವಿರಾರು ಜೀವಗಳು ಉಳಿದಿವೆ. ಈಗ ಲಾಕ್ಡೌನ್ ಕುರಿತಂತೆ ಮುಂದೆ ಸಾಗುವ ಬಗ್ಗೆ ಚಿಂತನೆ ನಡೆಸಬೇಕಿದೆ. ಆದರೂ ಕೊರೋನಾ ಪ್ರಭಾವವು ಮುಂದಿನ ದಿನಗಳಲ್ಲಿ ಕಣ್ಣಿಗೆ ಕಾಣುವಂತೆ ಮುಂದುವರಿಯಲಿದೆ. ಕೊರೋನಾ ಅಪಾಯ ಇನ್ನೂ ತಗ್ಗಿಲ್ಲ’ ಎಂದರು.
‘ಮುಂದಿನ ತಿಂಗಳುಗಳಲ್ಲಿ ಕೊರೋನಾ ಪ್ರಭಾವ ಇರಬಹುದು ಎಂದು ತಜ್ಞರು ಹೇಳಿದ್ದಾರೆ. ಈ ಕಾರಣ ‘2 ಗಜ ಅಂತರ’ (ಸಾಮಾಜಿಕ ಅಂತರ) ಕಾಯ್ದುಕೊಳ್ಳುವುದನ್ನು ಹಾಗೂ ಮಾಸ್ಕ್ ಧರಿಸುವುದನ್ನು ಇನ್ನು ಮುಂದೆ ದೈನಂದಿನ ಅಭ್ಯಾಸ ಮಾಡಿಕೊಳ್ಳಬೇಕು’ ಎಂದು ಜನರಿಗೆ ಕರೆ ನೀಡಿದರು.
‘ಕೊರೋನಾ ಪ್ರಕರಣಗಳು ತೀವ್ರವಾಗಿರುವ ಕೆಂಪು ವಲಯವನ್ನು, ಮೊದಲು ಕಿತ್ತಳೆ ವಲಯವನ್ನಾಗಿ ಪರಿವರ್ತಿಸಿ ರೋಗವನ್ನು ಹತೋಟಿಗೆ ತರಬೇಕು. ನಂತರ ಕಿತ್ತಳೆ ವಲಯವನ್ನು ಹಸಿರು ವಲಯವನ್ನಾಗಿ ಮಾಡಿ ವೈರಾಣು ನಿರ್ಮೂಲನೆ ಮಾಡಬೇಕು’ ಎಂದು ಮೋದಿ ಸೂಚಿಸಿದರು.
ಲಾಕ್ಡೌನ್ನಲ್ಲಿ ಸ್ಮಶಾನದಲ್ಲಿ ಕಟ್ಟಿಗೆ ಒಡೆಯುತ್ತಿದ್ದಾರೆ ಸೂರಿ ಶೆಟ್ಟಿ
ಅನೇಕ ಜನರು ಈಗ ಕೆಮ್ಮು, ನೆಗಡಿ, ಜ್ವರ ಇದ್ದರೆ ಸ್ವಯಂಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಇದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಆರೋಗ್ಯ ಸೇತು ಆ್ಯಪ್ ನೆರವಾಗಲಿದ್ದು, ಜನರು ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಕೋರಿದರು.
ವಿಶ್ವವಿದ್ಯಾಲಯಗಳು ಹಾಗೂ ಸಂಶೋಧಕರು ಕೊರೋನಾ ನಿಗ್ರಹಕ್ಕೆ ಸಂಶೋಧನೆ ನಡೆಸಬೇಕು ಎಂದು ಮೋದಿ ಒತ್ತಿ ಹೇಳಿದರು.
‘ಮನೆಯಲ್ಲೇ ಉಳಿದು ವಿಡಿಯೋಗಳಲ್ಲೇ ಸಭೆ ಮಾಡುವ ಪದ್ಧತಿಯನ್ನು ಭಾರತ ಕಳೆದ ಮಾಚ್ರ್ನಿಂದ ರೂಢಿಸಿಕೊಂಡಿದೆ. ಇದರಿಂದ ಸಾವಿರಾರು ಜೀವಗಳು ಉಳಿದಿವೆ. ಆದರೆ ಕೊರೋನಾ ಅಪಾಯವು ಇನ್ನೂ ತಗ್ಗಿಲ್ಲ. ಹೀಗಾಗಿ ಅದರ ಮೇಲೆ ನಿರಂತರ ನಿಗಾ ಇಡಬೇಕು. ಏಕೆಂದರೆ ಈಗ ಬೇಸಿಗೆ ಇದೆ. ಇದು ಮುಗಿದ ಬಳಿಕ ಮುಂಗಾರು ಆಗಮನವಾಗಲಿದೆ. ಈ ಹಂಗಾಮಿನಲ್ಲಿ ರೋಗ ರುಜಿನುಗಳು ಹರಡಬಹುದು. ಇದರ ಬಗ್ಗೆ ಮಖ್ಯಮಂತ್ರಿಗಳು ಗಮನ ಹರಿಸಬೇಕು’ ಎಂದರು.
ಬೆಂಗಳೂರಿನಲ್ಲಿ ಶೇ.50 ಪಿಪಿಇ ಕಿಟ್ ಉತ್ಪಾದನೆ: ಕೊರೋನಾ ಸಮರದಲ್ಲಿ ಸಾಧನೆ!
‘ವೈರಾಣು ದೇಹ ಸೇರುವುದನ್ನು ತಡೆಯುವ ಮಾಸ್ಕ್ ಧಾರಣೆ ಇನ್ನು ಮುಂದಿನ ದಿನಗಳಲ್ಲಿ ಜನಜೀವನದ ಒಂದು ಅಂಗವಾಗಲಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಪ್ರತಿಯೊಬ್ಬರೂ ಕ್ಷಿಪ್ರ ಪ್ರತಿಕ್ರಿಯೆಯತ್ತ ಗಮನ ಹರಿಸಬೇಕು’ ಎಂದು ಕೋರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ