
ಶ್ರೀನಗರ(ಜೂ.08): ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಸೇನೆ ಜಮಾವಣೆಯಾಗುತ್ತಿದ್ದು, ಸಾಕಷ್ಟುವದಂತಿ ಮತ್ತು ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ. 2019ರಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯುವ ವೇಳೆಯೂ ಇದೇ ರೀತಿಯ ಸೇನಾ ಜಮಾವಣೆ ಆಗಿತ್ತು. ಹೀಗಾಗಿ ಸ್ಥಳೀಯ ರಾಜಕೀಯ ನಾಯಕರು ಮತ್ತು ಜನಸಾಮಾನ್ಯರಲ್ಲಿ ಈ ಸೇನಾ ಜಮಾವಣೆ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.
ಕೆಲವರು, ಜಮ್ಮುವಿಗೆ ರಾಜ್ಯದ ಸ್ಥಾನಮಾನ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಇನ್ನು ಕೆಲವರು ಕಾಶ್ಮೀರವನ್ನು ಮತ್ತೆ 3 ಭಾಗಗಳಾಗಿ ವಿಂಗಡಿಸಬಹುದು ಎಂಬ ವಾದ ಮಂಡಿಸುತ್ತಿದ್ದಾರೆ. ಇನ್ನು ಕೆಲವರು ಕಾಶ್ಮೀರಿ ಪಂಡಿತರ ದಶಕಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಅವರಿಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಕಲ್ಪಿಸಿಕೊಡಬಹುದು ಎಂಬ ವಿಶ್ಲೇಷಣೆಗಳಿಗೂ ಜೀವ ತುಂಬಿದ್ದಾರೆ.
ಆದರೆ ಇಂಥ ಊಹಾಪೋಹಗಳನ್ನು ತಳ್ಳಿಹಾಕಿರುವ ಅಧಿಕಾರಿಗಳು, ಹೇಳಿಕೊಳ್ಳುವಂಥ ಯಾವುದೇ ದೊಡ್ಡ ಬೆಳವಣಿಗೆಗಳು ನಡೆಯುತ್ತಿಲ್ಲ. ಪಶ್ಚಿಮ ಬಂಗಾಳ ಸೇರಿ ಪಂಚರಾಜ್ಯಗಳ ಚುನಾವಣಾ ಭದ್ರತೆಗಾಗಿ ತೆರಳಿದ್ದ ಭದ್ರತಾ ಸಿಬ್ಬಂದಿ ಪುನಃ ಜಮ್ಮು-ಕಾಶ್ಮೀರಕ್ಕೆ ಆಗಮಿಸಿದ್ದಾರಷ್ಟೇ. ಇದರಲ್ಲಿ ಹೊಸ ಬೆಳವಣಿಗೆಗಳೇನೂ ಇಲ್ಲ ಎಂದಿದ್ದಾರೆ.
ಆದಾಗ್ಯೂ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮುನ್ನವೂ ಇದೇ ರೀತಿ ಸೇನಾ ಜಮಾವಣೆ ಮಾಡಿ, ತಮ್ಮನ್ನು ಗೃಹಬಂಧನಕ್ಕೆ ಒಳಪಡಿಸಲಾಗಿತ್ತು. ಈಗ ಮತ್ತೆ ಅದೇ ರೀತಿಯ ಬೆಳವಣಿಗೆ ಅಂಥದ್ದೇ ಭೀತಿ ಹುಟ್ಟುಹಾಕಿದೆ. ಹೀಗಾಗಿ ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಹಲವು ಸ್ಥಳೀಯ ಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ.
ಏನೇನು ವದಂತಿ?
1. ಜಮ್ಮುವಿಗೆ ರಾಜ್ಯ ಸ್ಥಾನಮಾನ ನೀಡಬಹುದು
2. ಕಾಶ್ಮೀರವನ್ನು ಮತ್ತೆ 3 ಭಾಗ ಮಾಡಬಹುದು
3. ಪಂಡಿತರಿಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಸೃಷ್ಟಿ
ಪಂಚರಾಜ್ಯ ಚುನಾವಣೆಗೆ ಹೋಗಿದ್ದ ಸೇನೆ ಮರಳುತ್ತಿದೆ ಅಷ್ಟೆ: ಅಧಿಕಾರಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ