ಹಿಂಸೆಯತ್ತ ತಿರುಗಿದ ವಾಂಗ್‌ಚುಕ್ ಸತ್ಯಾಗ್ರಹ, ತ್ರೀ ಈಡಿಯಟ್ಸ್ ಚಿತ್ರದಲ್ಲಿ ಅಮೀರ್ ಖಾನ್ ಪಾತ್ರಕ್ಕೆ ಸ್ಪೂರ್ತಿಯಾದ ವ್ಯಕ್ತಿಯೇ ಲಡಾಖ್‌ ಗಲಭೆಗೆ ಕಾರಣ?

Published : Sep 25, 2025, 09:10 PM IST
Ladakh Protests

ಸಾರಾಂಶ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಗಾಗಿ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವು ಹಿಂಸಾಚಾರಕ್ಕೆ ತಿರುಗಿದೆ. ಲೇಹ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ.  

ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟು, ಸಾಮಾಜಿಕ ಕಾರ್ಯಕರ್ತ ಹಾಗೂ ಪರಿಸರ ಹೋರಾಟಗಾರ ಸೋನಮ್‌ ವಾಂಗ್‌ಚುಕ್ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಇದೀಗ ಗಂಭೀರ ಸ್ವರೂಪ ಪಡೆದಿದ್ದು, ಲೇಹ್‌ನಲ್ಲಿ ನಡೆದ ಪ್ರತಿಭಟನೆ ಹಠಾತ್‌ ಹಿಂಸಾಚಾರಕ್ಕೆ ತಿರುಗಿ, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡಿವೆ.

ಲೇಹ್‌ನಲ್ಲಿ ಭುಗಿಲೆದ್ದ ಹಿಂಸಾಚಾರ

ಸೆಪ್ಟೆಂಬರ್ 24ರಂದು ಲೇಹ್‌ನಲ್ಲಿ ನಡೆದ ಪ್ರತಿಭಟನೆ ವೇಳೆ, ಉದ್ರಿಕ್ತ ಜನರ ಗುಂಪು ಬೀದಿಗಿಳಿದು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿತು. ಈ ವೇಳೆ ಬಿಜೆಪಿ ಕಚೇರಿ ಹಾಗೂ ಲಡಾಖ್ ಹಿಲ್ ಕೌನ್ಸಿಲ್‌ ಸೆಕ್ರೆಟರಿಯೇಟ್‌ ಕಟ್ಟಡಗಳಿಗೆ ಬೆಂಕಿ ಹಚ್ಚಲಾಯಿತು. ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿ, 90ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 10 ರಿಂದ 35 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ 15 ಕಾರ್ಯಕರ್ತರಲ್ಲಿ ಇಬ್ಬರು ಆರೋಗ್ಯ ಹದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾದ ನಂತರ ಲಡಾಖ್ ಅಪೆಕ್ಸ್ ಬಾಡಿ (LAB) ಯುವ ವಿಭಾಗ ಮಂಗಳವಾರ ಪ್ರತಿಭಟನೆ ನಡೆಸಿತು. ಸಂವಿಧಾನದ ಆರನೇ ವೇಳಾಪಟ್ಟಿಯನ್ನು ಲಡಾಖ್‌ಗೆ ವಿಸ್ತರಿಸಬೇಕೆಂಬ ದೀರ್ಘಕಾಲದ ಬೇಡಿಕೆಯ ಭಾಗವಾಗಿ ಈ ಪ್ರತಿಭಟನೆ ಇದೆ. ಪ್ರಸ್ತುತ ತ್ರಿಪುರ, ಮೇಘಾಲಯ, ಮಿಜೋರಾಂ ಮತ್ತು ಅಸ್ಸಾಂನಲ್ಲಿನ ಬುಡಕಟ್ಟು ಜನಸಂಖ್ಯೆಗೆ ಅನ್ವಯವಾಗುವ ಈ ನಿಬಂಧನೆಯು ವಿಶೇಷ ಆಡಳಿತ ಅಧಿಕಾರಗಳು, ಸ್ವಾಯತ್ತ ಮಂಡಳಿಗಳು ಮತ್ತು ಹಣಕಾಸು ಅಧಿಕಾರವನ್ನು ನೀಡುತ್ತದೆ.

ಬಿಜೆಪಿ–ಕಾಂಗ್ರೆಸ್ ನಡುವೆ ಆರೋಪ–ಪ್ರತ್ಯಾರೋಪ

ಬಿಜೆಪಿ, ಈ ಹಿಂಸಾಚಾರಕ್ಕೆ ಕಾಂಗ್ರೆಸ್‌ ನೇರ ಕಾರಣ ಎಂದು ಆರೋಪಿಸಿದೆ. ವಿಶೇಷವಾಗಿ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಕೌನ್ಸಿಲರ್ ಫಂಟ್ಸಾಗ್ ಸ್ಟ್ಯಾನ್ಜಿನ್ ತ್ಸೆಪಾಗ್ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಬುಧವಾರ ಆರೋಪಿಸಿದೆ. ಜೊತೆಗೆ ರಾಹುಲ್ ಗಾಂಧಿ ಇದೇ ರೀತಿಯ ಅಶಾಂತಿಯ ಬಗ್ಗೆ ಕನಸು ಕಾಣುತ್ತಿದ್ದಾರೆಯೇ? ಎಂದು ತ್ಸೆಪಾಗ್ ಅವರ ಚಿತ್ರಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ. ನಂತರ ಪೊಲೀಸರೂ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಆದರೆ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ನಿರಾಕರಿಸಿ ಕಾಂಗ್ರೆಸ್‌ಗೆ ಇಲ್ಲಿ ಅಂತಹ ಪ್ರಭಾವವಿಲ್ಲ ಎಂದರು. ಜೊತೆಗೆ ಕಾಂಗ್ರೆಸ್‌ ನಾಯಕರು, “ಬಿಜೆಪಿ ತನ್ನ ವೈಫಲ್ಯ ಮರೆಮಾಡಿಕೊಳ್ಳಲು ಸುಳ್ಳು ಆರೋಪಗಳನ್ನು ಮಾಡುತ್ತಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ನಿಲುವು

ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಅವರು ಈ ಘಟನೆಗೆ “ಪಿತೂರಿ” ಎಂದು ಹೆಸರಿಟ್ಟು, ಹಿಂಸಾಚಾರದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಟ್ಟುನಿಟ್ಟಿನ ಸಂದೇಶ ಹೊರಡಿಸಿದ್ದಾರೆ. ಗೃಹ ಸಚಿವಾಲಯವು ಸೋನಮ್‌ ವಾಂಗ್‌ಚುಕ್ ಅವರನ್ನು ನೇರವಾಗಿ ಆರೋಪಿಸಿ, “ಅವರು ಪ್ರಚೋದನಕಾರಿ ಭಾಷಣಗಳ ಮೂಲಕ ಜನರನ್ನು ಹಿಂಸೆಗೆ ಒತ್ತಾಯಿಸಿದ್ದಾರೆ” ಎಂದು ಹೇಳಿದೆ. ಅವರು ತಮ್ಮ ಭಾಷಣಗಳಲ್ಲಿ ಅರಬ್ ವಸಂತ ಕ್ರಾಂತಿ ಮತ್ತು ನೇಪಾಳದ ಜೆನ್‌-ಝಡ್‌ ಪ್ರತಿಭಟನೆಗಳ ಉದಾಹರಣೆಗಳನ್ನು ನೀಡುವುದರ ಮೂಲಕ ಜನರ ದಾರಿ ತಪ್ಪಿಸಿದ್ದಾರೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕರ್ಫ್ಯೂ ಹಾಗೂ ಭದ್ರತಾ ಕ್ರಮಗಳು

ಹಿಂಸಾಚಾರದ ಹಿನ್ನೆಲೆಯಲ್ಲಿ, ಲೆಹ್ ಜಿಲ್ಲೆಯಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಸಿಆರ್‌ಪಿಎಫ್, ಸ್ಥಳೀಯ ಪೊಲೀಸ್‌ ಪಡೆಯೊಂದಿಗೆ ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಇನ್ನು ಕಾರ್ಗಿಲ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ರಾಜ್ಯ ಹಕ್ಕಿನ ಬೇಡಿಕೆ

ಕಳೆದ ಮೂರು ವರ್ಷಗಳಿಂದ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಸ್ಥಳೀಯರ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರು ತಮ್ಮ ಭೂಮಿ, ಸಂಸ್ಕೃತಿ ಮತ್ತು ಪ್ರಕೃತಿ ಸಂಪನ್ಮೂಲಗಳ ರಕ್ಷಣೆಗೆ ರಾಜ್ಯ ಸ್ಥಾನಮಾನ ಹಾಗೂ ಸಾಂವಿಧಾನಿಕ ಭದ್ರತೆ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಸೋನಮ್‌ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹವೂ ಇದೇ ಬೇಡಿಕೆಗೆ ಪೂರಕವಾಗಿತ್ತು. ಹಿಂಸಾಚಾರದ ಬಳಿಕ ಅವರು ಉಪವಾಸವನ್ನು ಹಿಂತೆಗೆದುಕೊಂಡರೂ, ಲಡಾಖ್‌ನಲ್ಲಿ ರಾಜ್ಯ ಹಕ್ಕಿನ ಹೋರಾಟ ಇನ್ನಷ್ಟು ಉಗ್ರವಾಗುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: Gold Silver Price Today - ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?